ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಕುರಿತಾಗಿ ಲೇವಡಿ ಮಾಡಿದ ಕಾರಣಕ್ಕಾಗಿ ವಿರಾಟ್‌ ಕೊಹ್ಲಿ ಹಾಗೂ ಆರ್‌ಸಿಬಿಯ ಅಭಿಮಾನಿ ಆಗಿದ್ದ ವ್ಯಕ್ತಿಯೊಬ್ಬ ರೋಹಿತ್‌ ಶರ್ಮ ಅಭಿಮಾನಿಯ ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬಾಟಲಿಯಿಂದ ತಲೆಗೆ ಹೊಡೆದು ಸಾಯಿಸಿದ್ದಾನೆ.

ಚೆನ್ನೈ (ಅ.15): ಕ್ರಿಕೆಟ್‌ ಹಾಗೂ ಕ್ರಿಕಟಿಗರ ಮೇಲಿನ ಅತೀವ ಅಭಿಮಾನ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾಗಿದೆ. ವಿರಾಟ್‌ ಕೊಹ್ಲಿ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಕುಹಕ ಮಾಡಿ ಮಾತನಾಡಿದ್ದೇ ರೋಹಿತ್‌ ಶರ್ಮನ ಅಭಿಮಾನಿಯೊಬ್ಬನ ಪ್ರಾಣಕ್ಕೆ ಕಂಟಕವಾಗಿದೆ. ತಮಿಳುನಾಡಿನ ಅರಿಯಾಲೂರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು. ಆರ್‌ಸಿಬಿ ತಂಡವನ್ನು ಲೇವಡಿ ಮಾಡಿದ್ದ ಕಾರಣಕ್ಕಾಗಿ ಸ್ನೇಹಿತನೂ ಆಗಿದ್ದ ಮುಂಬೈ ಇಂಡಿಯನ್ಸ್‌ ಹಾಗೂ ರೋಹಿತ್‌ ಶರ್ಮನ ಅಭಿಮಾನಿಯನ್ನು ಕೊಲೆ ಮಾಡಿದ್ದಾರೆ. ಕೊಲೆ ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ಯಪಾನ ಮಾಡಿಕೊಂಡು ಇಬ್ಬರೂ ಸ್ನೇಹಿತರು ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮ ಕುರಿತಾಗಿ ಅಭಿಮಾನದಿಂದ ವಾಗ್ವಾದ ಮಾಡುತ್ತಿದ್ದರು. ಈ ವೇಳೆ ಧರ್ಮರಾಜ್‌ ಹೆಸರಿನ ಆರೋಪಿ ತನ್ನ ಸ್ನೇಹಿತನಾಗಿದ್ದ ವಿಘ್ನೇಶ್‌ ಎನ್ನುವ ವ್ಯಕ್ತಿಯನ್ನು ಬಾಟಲಿಯಿಂದ ಹೊಡೆದು ಸಾಯಿಸಿದ್ದಾನೆ. ಸಾವು ಕಂಡಿರುವ ವಿಘ್ನೇಶ್‌ 24 ವರ್ಷದ ಹುಡುಗ ಎಂದು ಪೊಲೀಸರು ಹೇಳಿದ್ದಾರೆ. ವಿಘ್ನೇಶ್‌ನನ್ನು ಕೊಲೆ ಮಾಡಿರುವ ಧರ್ಮರಾಜ್‌ಗೆ 21 ವರ್ಷ ಎಂದು ಮಾಹಿತಿ ನೀಡಿದ್ದು, ಇಬ್ಬರೂ ಕೂಡ ಕ್ರಿಕೆಟ್‌ನ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು ಎನ್ನಲಾಗಿದೆ.

ಸಾವು ಕಂಡಿರುವ ವಿಘ್ನೇಶ್‌ ಐಟಿಐ ಪೂರ್ಣ ಮಾಡಿದ್ದು, ಸಿಂಗಾಪುರದಲ್ಲಿ ಕೆಲಸ ಮಾಡಲು ಬಯಸಿದ್ದ. ವೀಸಾಗಾಗಿ ಅರ್ಜಿ ಸಲ್ಲಿಸಿದ್ದ ಅವರು, ಶೀಘ್ರದಲ್ಲೇ ಸಿಂಗಾಪುರಕ್ಕೆ ತೆರಳುವ ಇರಾದೆಯಲ್ಲಿದ್ದರು. ಅದಕ್ಕೂ ಮುನ್ನವೇ ಈ ಘಟನೆ ನಡೆದಿದೆ. ಕೊಲೆ ಅರೋಪಿಯಾಗಿರುವ ಧರ್ಮರಾಜ್‌ಗೆ ತೊದಲು ನುಡಿಯುವ ಅಭ್ಯಾಸವಿತ್ತು. ವಿಘ್ನೇಶ್‌, ಧರ್ಮರಾಜ್‌ನ ತೊದಲು ಹಾಗೂ ಅವರ ನೆಚ್ಚಿನ ಆರ್‌ಸಿಬಿ ಟೀಮ್‌ (royal challengers bangalore) ಕುರಿತಾಗಿ ಲೇವಡಿ ಮಾಡುತ್ತಲೇ ಇರುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಧರ್ಮರಾಜ್‌, ವಿಘ್ನೇಶ್‌ನನ್ನು ಕೊಲೆ ಮಾಡಿದ್ದಾನೆ.

ತಮಿಳುನಾಡಿನ ಅರಿಯಲೂರು (Ariyalur district) ಜಿಲ್ಲೆಯ ಪೊಯ್ಯೂರು ಗ್ರಾಮದ ನಿವಾಸಿಗಳಾದ ವಿಘ್ನೇಶ್ (Vignesh) ಮತ್ತು ಧರ್ಮರಾಜ (Dharmaraj) ಉತ್ತಮ ಸ್ನೇಹಿತರಾಗಿದ್ದರು. ಇಬ್ಬರೂ ಕ್ರಿಕೆಟ್ (Cricket) ಆಟವನ್ನು ಅತಿಯಾಗಿ ಪ್ರೀತಿಸುತ್ತಿದ್ದರು ಮತ್ತು ಕ್ರಿಕೆಟ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ಇಬ್ಬರೂ ಆಗಾಗ್ಗೆ ಒಟ್ಟಿಗೆ ವಾದ ಮಾಡುತ್ತಿದ್ದರು. ವಿಘ್ನೇಶ್ ರೋಹಿತ್ ಶರ್ಮಾ ಮತ್ತು ಮುಂಬೈ ಇಂಡಿಯನ್ಸ್ ಅಭಿಮಾನಿಗಳಾಗಿದ್ದರೆ, ಧರ್ಮರಾಜ್ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ (RCB) ತಂಡವನ್ನು ಇಷ್ಟಪಡುತ್ತಿದ್ದರು. ಮಂಗಳವಾರ ರಾತ್ರಿಯೂ ಇಬ್ಬರೂ ಸಿಡ್ಕೋ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿ ಕ್ರಿಕೆಟ್ ಆಡಿದ ಬಳಿಕ ಮದ್ಯಪಾನ ಮಾಡಿ, ಅದರ ನಶೆಯಲ್ಲಿಯೇ ಇದರ ಚರ್ಚೆ ಮಾಡಿದ್ದಾರೆ. 

Belagavi: ಡಬಲ್ ಮರ್ಡರ್‌ಗೆ ಬೆಚ್ಚಿಬಿದ್ದ ಸುಳೇಭಾವಿ: ಪೊಲೀಸ್ ಬಿಗಿ ಬಂದೋಬಸ್ತ್!

ಧರ್ಮರಾಜ್ ಮಾತನಾಡುವಾಗ ತೊದಲುತ್ತಿದ್ದ, ಇದನ್ನು ವಿಘ್ನೇಶ್ ಆಗಾಗ ಗೇಲಿ ಮಾಡುತ್ತಿದ್ದ. ಮಂಗಳವಾರವೂ ವಿಘ್ನೇಶ್ ಅವರು ಧರ್ಮರಾಜ್ ಅವರ ತೊದಲುವಿಕೆಯನ್ನು ಲೇವಡಿ ಮಾಡಿದ್ದು, ಆರ್‌ಸಿಬಿ ತಂಡದೊಂದಿಗೆ ವಿರಾಟ್ ಕೊಹ್ಲಿ ಬಗ್ಗೆ ಅನೇಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕುಡಿದ ಅಮಲಿನಲ್ಲಿದ್ದ ಧರ್ಮರಾಜ್ ಇದು ಇಷ್ಟವಾಗದೆ ತನ್ನ ಸ್ನೇಹಿತನ ಮೇಲೆಯೇ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಇದಾದ ಬಳಿಕ ಆತನ ತಲೆಗೂ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಘಟನೆ ನಡೆದ ಸ್ಥಳದಿಂದ ಪರಾರಿಯಾಗಿದ್ದ.

ಮರ್ಡರ್‌ ಹಾರ್ನೆಟ್ಸ್: ವಿಷಕಾರಿ ನೊಣಗಳಿಗೆ ಲಾಕ್‌ಡೌನ್‌ ಆದ ಕೆನಡಾ ಹಳ್ಳಿಗಳು!

ಮರುದಿನ ಬೆಳಗ್ಗೆ ಸಿಡ್ಕೋ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದ ಕೆಲ ಕಾರ್ಮಿಕರು ವಿಘ್ನೇಶ್ ಶವವನ್ನು ಗಮನಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. . ಇದಾದ ಬಳಿಕ ಇಡೀ ವಿಷಯ ಬೆಳಕಿಗೆ ಬಂದಿದೆ. ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಗೆ ಅಪಾರ ಅಭಿಮಾನಿಗಳಿದ್ದಾರೆ. ಆದರೆ, ಅಭಿಮಾನದ ಹೆಸರಲ್ಲಿ ಇಂಥ ಘಟನೆಗಳು ನಡೆಯುತ್ತಿರುವುದು ಬೇಸರದ ಸಂಗತಿ.