ಬೆಂಗಳೂರಿನಲ್ಲಿ ಯುವತಿ ಸ್ವಾತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಗಂಡ ಮತ್ತು ಆತನ ಕುಟುಂಬಸ್ಥರು ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿ (ಜು.31): 'ನೀನು ಸುಂದರವಾಗಿಲ್ಲ, ಬುದ್ಧಿವಂತಳಲ್ಲ, ಯಾವ ಕೆಲಸ ಮಾಡೋಕೆ ಬರೋಲ್ಲ.' ಅಂತಾ ನಿರಂತರ ಕಿರುಕುಳ ನೀಡಿ ಪತ್ನಿಯನ್ನು ಕೊಂದು ಗಂಡ ಮತ್ತು ಕುಟುಂಬಸ್ಥರು ಆತ್ಮ*ತ್ಯೆಯ ಕಟ್ಟಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಸ್ವಾತಿ ಶ್ರೀಧರ್ ಸನದಿ (28) ಎಂಬ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ಈ ಕುರಿತು ಕುಟುಂಬಸ್ಥರು ಗಂಡ ಶ್ರೀಧರ್ ಸನದಿ ಹಾಗೂ ಆತನ ಅತ್ತೆ, ನಾದಿನಿಯರ ಮೇಲೆ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಜುಲೈ 12, 2025 ರಂದು ಬೆಂಗಳೂರಿನ ಶ್ರೀಧರ್‌ನ ಮನೆಯಲ್ಲಿ ಸ್ವಾತಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಸ್ವಾತಿಯ ತಂದೆ ಅನಂತಶಂಕರ್, ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸುತ್ತಿದ್ದಂತೆ ನಾಪತ್ತೆಯಾದ ಆರೋಪಿ ಶ್ರೀಧರ್ ಪತ್ನಿಯ ಅಂತ್ಯಕ್ರಿಯೆಗೂ ಬಂದಿರಲಿಲ್ಲ.

ಸ್ವಾತಿಯ ಗಂಡ ಶ್ರೀಧರ್, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. 18 ತಿಂಗಳ ಹಿಂದೆ ಶ್ರೀಧರ್‌ನೊಂದಿಗೆ ಸ್ವಾತಿಯ ವಿವಾಹವಾಗಿತ್ತು. ಆದರೆ, ವಿವಾಹದ ನಂತರ ಶ್ರೀಧರ್ ಹಾಗೂ ಆತನ ಕುಟುಂಬಸ್ಥರು ಸ್ವಾತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. 'ನೀನು ಸುಂದರವಾಗಿಲ್ಲ, ಬುದ್ಧಿವಂತಿಕೆ ಇಲ್ಲ, ಯಾವ ಕೆಲಸವೂ ಮಾಡಲು ಬರಲ್ಲ..' ಎಂದು ಶ್ರೀಧರ್ ಸ್ವಾತಿಯನ್ನು ನಿರಂತರವಾಗಿ ಕೀಳಾಗಿ ಮಾತನಾಡುತ್ತಿದ್ದ ಎಂದು ಸ್ವಾತಿಯ ತಂದೆ ಹೇಳಿದ್ದಾರೆ. ಈ ಕಿರುಕುಳದ ಬಗ್ಗೆ ಸ್ವಾತಿ ತನ್ನ ತಂದೆಯ ಬಳಿ ಹೇಳಿದ್ದಳು ಎನ್ನಲಾಗಿದೆ.

ಕೊಲೆ ಮಾಡಿ ಕತೆ ಕಟ್ಟಿದ ಪತಿ?

ಸ್ವಾತಿಯ ಸಾವಿನ ಬಗ್ಗೆ ಶ್ರೀಧರ್, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ವಾತಿಯ ಮಾವನಿಗೆ ಕರೆ ಮಾಡಿ ತಿಳಿಸಿದ್ದ. ಆದರೆ, ಕುಟುಂಬಸ್ಥರು ಬೆಂಗಳೂರಿಗೆ ತೆರಳಿ ಶವವನ್ನು ಪರಿಶೀಲಿಸಿದಾಗ, ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ. ಸ್ವಾತಿಯ ತಂದೆ ಅನಂತಶಂಕರ್, 'ನನ್ನ ಮಗಳು ಆತ್ಮ*ತ್ಯೆ ಮಾಡಿಕೊಂಡಿಲ್ಲ. ಶ್ರೀಧರ್ ಹಾಗೂ ಆತನ ಕುಟುಂಬಸ್ಥರು ಆಕೆಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ದೂರು ದಾಖಲಾದ ಕೂಡಲೇ ಶ್ರೀಧರ್, ಆತನ ಅತ್ತೆ ಮತ್ತು ನಾದಿನಿ ಪರಾರಿಯಾಗಿದ್ದಾರೆ. ಗಮನಾರ್ಹವಾಗಿ, ಶ್ರೀಧರ್ ತನ್ನ ಪತ್ನಿಯ ಅಂತ್ಯಕ್ರಿಯೆಗೂ ಆಗಮಿಸಿಲ್ಲ. ಹೀಗಾಗಿ ಮಗಳ ಸಾವಿಗೆ ಗಂಡ ಮತ್ತು ಕುಟುಂಬಸ್ಥರ ಕಾರಣ ಎಂದು ಮೃತ ಸ್ವಾತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ನ್ಯಾಯಕ್ಕಾಗಿ ಕಮಿಷನರ್ ಕಚೇರಿಗೆ:

ಸ್ವಾತಿಯ ಕುಟುಂಬಸ್ಥರು ನ್ಯಾಯಕ್ಕಾಗಿ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಗುಲಾಬ್ ರಾವ್ ಬೊರಸೆ ಅವರನ್ನು ಭೇಟಿಯಾಗಿದ್ದಾರೆ. ನನ್ನ ಮಗಳ ಸಾವಿಗೆ ಶ್ರೀಧರ್ ಮತ್ತು ಆತನ ಕುಟುಂಬಸ್ಥರೇ ಕಾರಣ. ಆಕೆಗೆ ನ್ಯಾಯ ಕೊಡಿಸಿ ಎಂದು ಸ್ವಾತಿಯ ತಂದೆ ಅನಂತಶಂಕರ್ ಮನವಿ ಮಾಡಿದ್ದಾರೆ. ಈ ವೇಳೆ, ಕಮಿಷನರ್ ಭೂಷಣ್ ಬೊರಸೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.