ಲೈಂಗಿಕ ದೌರ್ಜನ್ಯ: ಹೆಡ್‌ ಕಾನ್‌ಸ್ಟೇಬಲ್‌ ವಿರುದ್ಧ ಎಫ್‌ಐಆರ್‌ ಹೊಳೆಹೊನ್ನೂರು ಠಾಣೆ ಎಚ್‌ಸಿ ರಾಘವೇಂದ್ರ ಆರೋಪಿ ಭದ್ರಾವತಿ ಟೌನ್‌ ಸರ್ಕಲ್‌ ಠಾಣೆಯಲ್ಲಿ ಮಹಿಳೆ ದೂರು ದಾಖಲು

ಹೊಳೆಹೊನ್ನೂರು (ಸೆ.21) : ಪಟ್ಟಣದ ಠಾಣೆಯಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಎಂಬವರ ವಿರುದ್ಧ ಮಹಿಳೆಯೊಬ್ಬರು ಭದ್ರಾವತಿಯ ಟೌನ್‌ ಸರ್ಕಲ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ.

ಚರ್ಚ್‌ನಲ್ಲಿ ಚಾಕು ತೋರಿಸಿ ಮಹಿಳೆಗೆ ಲೈಂಗಿಕ ದೌರ್ಜನ್ಯ

ಆಗಿದ್ದೇನು?:

2019ರ ಫೆಬ್ರವರಿಯಲ್ಲಿ ಕೆ.ರೇಖಾ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದ ತನ್ನ ಪತಿ ಆಂಜನೇಯ ಮತ್ತು ಅವರ ತಮ್ಮ ರಮೇಶನ ನಡುವೆ ಆಸ್ತಿಯ ವಿಚಾರದಲ್ಲಿ ವಿವಾದ ಹಿನ್ನೆಲೆ ಹೊಳೆಹೊನ್ನೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆಗ ಠಾಣೆಯಲ್ಲಿದ್ದ ಹೆಡ್‌ ಕಾನ್‌ಸ್ಟೇಬಲ್‌ ರಾಘವೇಂದ್ರ ದೂರು ವಿಚಾರಣೆ ನಡೆಸಿ, ಸಮಸ್ಯೆ ಬಗೆಹರಿಸಿದ್ದರು. ಅನಂತರ ‘ಮತ್ತೆ ಏನಾದರೂ ತಂಟೆ ತಕರಾರು ಮಾಡಿದರೆ ನನ್ನ ನಂಬರ್‌ಗೆ ಪೋನ್‌ ಮಾಡಿ’ ಅಂತ ಹೇಳಿ ಆ ಮಹಿಳೆಯ ಪೋನ್‌ ನಂಬರ್‌ ಪಡೆದು ಹೋಗಿದ್ದಾನೆ.

ಇದಾದ ಮೇಲೆ ಎಚ್‌ಸಿ ರಾಘವೇಂದ್ರ ಪದೇಪದೇ ಪೋನ್‌ ಮಾಡಿ ಕೆ.ರೇಖಾ ಅವರಿಗೆ ಮಾತನಾಡಿಸುತ್ತಿದ್ದ. ಇದರಿಂದ ಇಬ್ಬರಲ್ಲೂ ಸಲಿಗೆ ಬೆಳೆದಿತ್ತು. ಹಬ್ಬ ಹರಿದಿನಗಳಲ್ಲಿ, ರಜೆ ಮತ್ತು ಇತರ ಸಂದರ್ಭಗಳಲ್ಲಿ ಮಹಿಳೆ ಊರಿಗೆ ಬಂದಾಗ ಒತ್ತಾಯ ಪೂರ್ವಕವಾಗಿ ಭೇಟಿ ಮಾಡುವಂತೆ ಹೇಳಿ, ಹತ್ತಿರದ ಕೈಮರಕ್ಕೆ ಕರೆಸಿಕೊಂಡು ತನ್ನದೇ ಕಾರಿನಲ್ಲಿ ಶಿವಮೊಗ್ಗ, ಭದ್ರಾವತಿ ಮತ್ತು ಇತರೆ ಕಡೆಗೆ ಕರೆದುಕೊಂಡು ಹೋಗಿ ದೈಹಿಕವಾಗಿ ದೌರ್ಜನ್ಯ ಎಸಗುತ್ತಿದ್ದ. ಸಂಜೆ ವಾಪಸ್‌ ಕೈಮರಕ್ಕೆ ಕರೆದುಕೊಂಡು ಬಂದು ಬಿಡುತ್ತಿದ್ದ.

ಇದೇ ರೀತಿಯಾಗಿ 2020ನೇ ಇಸವಿಯ ಜೂನ್‌ 11ನೇ ತಾರೀಖು ಆನವೇರಿ ಸರ್ಕಲ್‌ಗೆ ಕೆ.ರೇಖಾ ಅವರನ್ನು ಕರೆಸಿಕೊಂಡು ಭದ್ರಾವತಿ ಹುತ್ತಾ ಕಾಲೋನಿಯ ಆತನ ಪರಿಚಯದ ಸಲ್ಮಾ ಎಂಬವರ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ರೇಖಾರವರನ್ನು ಪುಸಲಾಯಿಸಿ ಬಲವಂತದಿಂದ ದೈಹಿಕ ಸಂಪರ್ಕ ಹೊಂದಿದ್ದ.

ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸೋಕೆ ಇವಿಷ್ಟನ್ನು ಹೇಳಿ ಕೊಡಿ

ಅನಂತರ ಈ ವಿಚಾರವನ್ನು ಯಾರಿಗೂ ಹೇಳದಂತೆ ಅವರಿಗೆ ಹೆದರಿಸಿದ್ದ. ನಿನ್ನ ಮರ್ಯಾದೆ ತೆಗೆಯುತ್ತೇನೆ, ನಿನ್ನ ಗಂಡನಿಗೆ ಮತ್ತು ಸಂಬಂಧಿಕರಿಗೆ ನಾನೇ ವಿಷಯ ತಿಳಿಸಬೇಕಾಗುತ್ತದೆ ಎಂದು ಹೇಳಿ ತಾನು ಬಳಸುತ್ತಿದ್ದ ಪೋನ್‌ ನಂಬರ್‌ ಚೇಂಜ್‌ ಮಾಡಿ ಕೊಟ್ಟು ಪುನಃ ಆನವೇರಿಗೆ ತಂದು ಬಿಟ್ಟಿದ್ದಾಗಿ ತಿಳಿಸಿದ್ದಾರೆ. ಇದಾದ ನಂತರ ರಾಘವೇಂದ್ರ ಪುನಃ ಪುನಃ ಕರೆ ಮಾಡಿ, ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಇದರಿಂದ ಮನನೊಂದು ತಡವಾಗಿ ದೂರು ನೀಡುತ್ತಿದ್ದೇನೆ ಎಂದು ಸಂತ್ರಸ್ತೆ ಕೆ.ರೇಖಾ ದೂರಿನಲ್ಲಿ ತಿಳಿಸಿದ್ದಾರೆ.