Asianet Suvarna News Asianet Suvarna News

PSI Recruitment Scam: ಅಮೃತ್‌ ಪೌಲ್‌ ಮತ್ತೆ 8 ದಿನ ಸಿಐಡಿ ವಶಕ್ಕೆ

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಅಕ್ರಮದ ಆರೋಪಿಯಾಗಿರುವ ಪೊಲೀಸ್‌ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ್‌ ಪೌಲ್‌ ಅವರನ್ನು ಮತ್ತೆ 8 ದಿನಗಳ ಕಾಲ ಸಿಐಡಿ ಪೊಲೀಸರ ವಶಕ್ಕೆ ನೀಡಿ ನಗರದ ಎಸಿಎಂಎಂ ನ್ಯಾಯಾಲಯ ಸೋಮವಾರ ಆದೇಶಿಸಿದೆ.

psi recruitment scam acmm court ordered police custody for former adgp amrit paul gvd
Author
First Published Sep 6, 2022, 3:45 AM IST

ಬೆಂಗಳೂರು (ಸೆ.06): ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಅಕ್ರಮದ ಆರೋಪಿಯಾಗಿರುವ ಪೊಲೀಸ್‌ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ್‌ ಪೌಲ್‌ ಅವರನ್ನು ಮತ್ತೆ 8 ದಿನಗಳ ಕಾಲ ಸಿಐಡಿ ಪೊಲೀಸರ ವಶಕ್ಕೆ ನೀಡಿ ನಗರದ ಎಸಿಎಂಎಂ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಸಿಐಡಿಯ ಡಿವೈಎಸ್‌ಪಿ ಶಿವಕುಮಾರ್‌ ಅವರ ಮನವಿ ಪುರಸ್ಕರಿಸಿದ ಬೆಂಗಳೂರಿನ ಒಂದನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯ ಅಮೃತ್‌ ಪೌಲ್‌ ಅವರನ್ನು ಸೆ.12ರವರೆಗೆ ತನಿಖೆಗಾಗಿ ಸಿಐಡಿ ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿದೆ.

ಪ್ರಕರಣದಲ್ಲಿ ಏಳನೇ ಆರೋಪಿಯಾಗಿರುವ ಅಮೃತ್‌ ಪೌಲ್‌ ಅವರು ಲಕ್ಷಾಂತರ ರೂಪಾಯಿ ಪಡೆದು ಅಕ್ರಮ ಎಸಗಿರುವ ಸಾಧ್ಯತೆಯಿದೆ. ಕೃತ್ಯ ಎಸಗಲು ಪೌಲ್‌ ಅವರು ಬಳಸಿರಬಹುದಾದ ಮೊಬೈಲ್‌ ಸಿಮ್‌ ಕಾರ್ಡ್‌ಗಳ ಬಗ್ಗೆ, ಅವರು ಹೊಂದಿರುವ ಬ್ಯಾಂಕ್‌ ಖಾತೆಗಳ ವಿವರ ಕಲೆ ಹಾಕಿ, ಹಣದ ವರ್ಗಾವಣೆ ಕುರಿತು ತನಿಖೆ ನಡೆಸಬೇಕಿದೆ. ಆರೋಪಿಯ ಊರಿಗೆ ಭೇಟಿ ನೀಡಿ ಸಾಕ್ಷ್ಯಾಧಾರ ಸಂಗ್ರಹಿಸಬೇಕಿದೆ. ಆದ್ದರಿಂದ ಅವರನ್ನು 14 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂದು ಸಿಐಡಿ ಕೋರಿತ್ತು. ಆದರೆ, ಪೌಲ್‌ ಅವರನ್ನು 8 ದಿನಗಳ ಕಾಲ ಸಿಐಡಿ ಪೊಲೀಸ್‌ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿತು.

PSI Recruitment Scam: 1 ಎಸ್‌ಐ ಹುದ್ದೆ 30ರಿಂದ 85 ಲಕ್ಷಕ್ಕೆ ಮಾರಿದ್ದ ಪಾಲ್‌..!

ಪ್ರಕರಣದ ವಿವರ: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಮೃತ್‌ ಪಾಲ್‌ ಅವರು ಏಳನೇ ಆರೋಪಿಗಳಾಗಿದ್ದಾರೆ. ಇನ್ನೂ ಇದೇ ಪ್ರಕರಣ ಕುರಿತು ಬೆಂಗಳೂರಿನ ಹೈಗ್ರೌಂಡ್‌್ಸ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ 2022ರ ಜು.4ರಂದು ಬಂಧಿತರಾಗಿದ್ದ ಪೌಲ್‌ ಅವರು ಜು.14ರವರೆಗೆ ಪೊಲೀಸ್‌ ವಶದಲ್ಲಿದ್ದರು. ನಂತರ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. ಈ ಪ್ರಕರಣದಲ್ಲಿ 34ನೇ ಆರೋಪಿಯಾಗಿರುವ ಪೌಲ್‌ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಎಸಿಎಂಎಂ ಮತ್ತು ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿವೆ.

ಅಮೃತ್‌ಪಾಲ್‌ ಸ್ನೇಹಿತರ ಮೇಲೆ ಸಿಐಡಿ ದಾಳಿ: ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್‌ ಪಾಲ್‌ ಅವರ ಸ್ನೇಹಿತರಿಗೂ ಸಿಐಡಿ ತನಿಖೆ ಬಿಸಿ ತಟ್ಟಿದ್ದು, ಮಂಗಳವಾರ ಅವರ ಇಬ್ಬರು ಉದ್ಯಮಿ ಗೆಳೆಯರ ಮನೆಗಳ ಮೇಲೆ ಸಿಐಡಿ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದೆ. ಸಹಕಾರ ನಗರದ ಉದ್ಯಮಿ ಶಂಭುಲಿಂಗಯ್ಯ ಹಾಗೂ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಆನಂದ್‌ ಅವರಿಗೆ ಸಂಕಷ್ಟಎದುರಾಗಿದ್ದು, ಎಡಿಜಿಪಿ ಅಮೃತ್‌ ಪಾಲ್‌ ಜತೆ ಹಣಕಾಸು ವ್ಯವಹಾರ ಹೊಂದಿದ ಶಂಕೆ ಮೇರೆಗೆ ದಾಳಿ ನಡೆದಿದೆ. 

PSI Recruitment Scam: ಪಿಎಸ್‌ಐ ಗೋಲ್ಮಾಲ್‌ಗೆ 5 ದಿನ ರಜೆ ಹಾಕಿದ್ದ ಎಡಿಜಿಪಿ ಪಾಲ್‌..!

ಸಹಕಾರ ನಗರದಲ್ಲಿರುವ ಶಂಭುಲಿಂಗಯ್ಯ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಹುಸ್ಕೂರಿನಲ್ಲಿರುವ ಆನಂದ್‌ ಮನೆಗಳಲ್ಲಿ ಮಂಗಳವಾರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಶೋಧಿಸಿ ಸಿಐಡಿ ದಾಖಲೆಗಳನ್ನು ಜಪ್ತಿ ಮಾಡಿದೆ. ಬಳಿಕ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಆ ಇಬ್ಬರಿಗೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವಂಗಲದಲ್ಲಿ ಆನಂದ್‌ ಲೇಔಟ್‌ ನಿರ್ಮಿಸಿದ್ದು, ಇದರಲ್ಲಿ ಅಮೃತ್‌ ಪಾಲ್‌ ಹಣ ಹೂಡಿಕೆ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಕೇಂದ್ರ ವಲಯ ಐಜಿಪಿ ಆಗಿದ್ದಾಗ ಅಮೃತ್‌ ಪಾಲ್‌ ಅವರಿಗೆ ಆನಂದ್‌ ಪರಿಚಯವಾಗಿತ್ತು. ಆನಂತರ ಈ ಗೆಳೆತನದಲ್ಲೇ ಪಾಲುದಾರಿಕೆಯಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಿದ್ದರು. ಅದೇ ರೀತಿ ಶಂಭುಲಿಂಗಯ್ಯ ಜತೆ ಎಡಿಜಿಪಿ ಅವರು ಭೂ ವ್ಯವಹಾರ ನಡೆಸಿರುವ ಬಗ್ಗೆ ಸಿಐಡಿ ಮಾಹಿತಿ ಕಲೆ ಹಾಕಿದೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios