ಐಪಿಎಲ್ ಟೂರ್ನಿಯ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟರೂ ಇದುವರೆಗೆ ಎಫ್ಐಆರ್ ದಾಖಲಾಗಿಲ್ಲ. ಬದಲಿಗೆ ಅಸ್ವಾಭಾವಿಕ ಸಾವು ಎನ್ನುವ UDR ಸಲ್ಲಿಕೆ ಮಾಡಲಾಗಿದೆ. ಏನಿದರ ಮರ್ಮ?
ಐಪಿಎಲ್ ಟೂರ್ನಿಯಲ್ಲಿ 18 ವರ್ಷದ ಬಳಿಕ ಟ್ರೋಫಿ ಗೆದ್ದ ಆರ್ಸಿಬಿ ಇತಿಹಾಸ ಬರೆದಿತ್ತು. ಈ ಗೆಲುವಿನ ಸಂಭ್ರಮವನ್ನು ಆಚರಿಸಲು ಸರ್ಕಾರ ನಡೆಸಿದ್ದ ಕಾರ್ಯಕ್ರಮ ದುರಂತದಲ್ಲಿ ಅಂತ್ಯವಾಗಿದೆ. ಲಕ್ಷ ಲಕ್ಷ ಅಭಿಮಾನಿಗಳು ಜಮಾವಣೆಗೊಂಡ ಕಾರಣ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ 11 ಮಂದಿ ಮತೃಪಟ್ಟರೆ, 56ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸರ್ಕಾರದ ನಿರ್ಲಕ್ಷದ ಬಗ್ಗೆ ಇದಾಗಲೇ ಭಾರಿ ಪ್ರತಿಭಟನೆಗಳು ಕೇಳಿಬರುತ್ತಿವೆ. ಮೃತಪಟ್ಟ ಅಭಿಮಾನಿಗಳ ಕುಟುಂಬದವರ ದುಃಖ ನೋಡಲಾಗುತ್ತಿಲ್ಲ. ಬೆಂಗಳೂರು ಪೊಲೀಸರು ಲಾಜಿಸ್ಟಿಕಲ್ ಮತ್ತು ಭದ್ರತಾ ಕಾರಣಗಳಿಗಾಗಿ ಭಾನುವಾರದಂದು ಆರ್ಸಿಬಿ ವಿಜಯೋತ್ಸವ ನಡೆಸಬೇಕೆಂದು ಸೂಚಿಸಿದ್ದರೂ, ಕರ್ನಾಟಕ ಸರ್ಕಾರ ಮಾತ್ರ ಐಪಿಎಲ್ ಗೆಲುವಿನ ಮರುದಿನ ಆರ್ಸಿಬಿಗೆ ಅಭಿನಂದನಾ ಸಮಾರಂಭವನ್ನು ನಡೆಸಬೇಕು ಎಂದು ಪಟ್ಟು ಹಿಡಿದಿತ್ತು ಎನ್ನುವ ಬಗ್ಗೆಯೂ ಆರೋಪಗಳು ಕೇಳಿಬರುತ್ತಿವೆ. ಭಾನುವಾರ ರಜಾ ದಿನವಾಗಿರುವುದರಿಂದ ಸಂಚಾರ ಅಡಚಣೆಯನ್ನು ಕಡಿಮೆ ಮಾಡಲು ಮತ್ತು ಭದ್ರತಾ ವ್ಯವಸ್ಥೆಗಳನ್ನು ಯೋಜಿಸಲು ಮತ್ತು ಬ್ಯಾರಿಕೇಡ್ಗಳನ್ನು ಸ್ಥಾಪಿಸಲು ಸಾಕಷ್ಟು ಸಮಯವನ್ನು ಒದಗಿಸಲು ಪೊಲೀಸರು ಶಿಫಾರಸು ಮಾಡಿದ್ದರು ಎಂದು ವರದಿಯಾಗಿದೆ.
ಇವುಗಳ ನಡುವೆಯೇ, ಇದೀಗ ಸರ್ಕಾರದ ಕ್ರಮಕ್ಕೆ ಭಾರಿ ಅಸಮಾಧಾನ ಉಂಟಾಗಿದೆ. ಇದಕ್ಕೆ ಕಾರಣ, ಘಟನೆಯಲ್ಲಿ 11 ಮಂದಿ ಮೃತಪಟ್ಟರೂ ಇದುವರೆಗೂ ಎಫ್ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಾಗಿಲ್ಲ ಎನ್ನುವುದು. ಯಾವುದೇ ಘಟನೆ ನಡೆದಾಗ, ಅದರಲ್ಲಿಯೂ ಇಂಥ ಅಪರಾಧಿಕ ಘಟನೆಗಳು ನಡೆದಾಗ 24 ಗಂಟೆಯ ಒಳಗೆ ಎಫ್ಐಆರ್ ದಾಖಲು ಮಾಡಬೇಕು. ಅದನ್ನು ಸ್ಥಳೀಯ ಕೋರ್ಟ್ಗೆ ಸಲ್ಲಿಸಬೇಕು. ಪ್ರಕರಣದ ತನಿಖೆಯಲ್ಲಿನ ಹಂತ ಹಂತದ ವರದಿಗಳನ್ನು ಕೋರ್ಟ್ಗೆ ಅಪ್ಡೇಟ್ ಮಾಡಬೇಕು. ಇದು ನಮ್ಮ ಕಾನೂನಿನಲ್ಲಿ ಇರುವಂಥದ್ದು.
ಆದರೆ ಇದೀಗ ಘಟನೆ ನಡೆದು ಇಷ್ಟು ಗಂಟೆಗಳಾದರೂ ಒಂದೇ ಒಂದು ಎಫ್ಐಆರ್ ದಾಖಲಾಗಲಿಲ್ಲ! ಅದರ ಬದಲು UDR ಅಂದರೆ Unnatural Death Reports ಅರ್ಥಾತ್ ಅಸ್ವಾಭಾವಿಕ ಸಾವು ಎಂದು ದಾಖಲು ಮಾಡಲಾಗಿದೆ.UDR ದಾಖಲಾದರೆ ಅಸ್ವಾಭಾವಿಕ ಸಾವು ಎಂದು ತಿಳಿದುಕೊಳ್ಳಲಾಗುವುದು. ಇದರ ಅಡಿ ಯಾವುದೇ ಕ್ರಿಮಿನಲ್ ತನಿಖೆ ಇರುವುದಿಲ್ಲ ಮತ್ತು ನ್ಯಾಯವ್ಯಾಪ್ತಿಯ ತಹಸೀಲ್ದಾರ್ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಇದರ ನಡುವೆಯೇ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಘಟನೆಯ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು (Suo Moto case) ದಾಖಲು ಮಾಡಿಕೊಂಡು ಅದರ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ಇಂದು ಹಂಗಾಮಿ ಮುಖ್ಯನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಈ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಪೀಠವು ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ನ್ಯಾಯಮೂರ್ತಿಗಳು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಇಂಥ ಬೃಹತ್ ಸಂಭ್ರಮ ನಡೆದ ಸಂದರ್ಭದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತೆ? ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲಿ ಇದ್ದರೆ? ಆ್ಯಂಬುಲೆನ್ಸ್ ವ್ಯವಸ್ಥೆ ಇರಬೇಕಲ್ಲವೇ, ಇವೆಲ್ಲಾ ಅಲ್ಲಿ ಇತ್ತೆ ಎಂಬಿತ್ಯಾದಿ ಪ್ರಶ್ನೆಗಳನ್ನು ನ್ಯಾಯಮೂರ್ತಿಗಳು ಕೇಳಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿರುವ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.


