ತಾಯಿ-ಮಗಳಿಗೆ ಚಾಕು ಇರಿದು ಹತ್ಯೆ: ಪರಿಚಿತನಿಂದಲೇ ಕೃತ್ಯ ಶಂಕೆ
* ಬೆಂಗಳೂರಿನ ಚೌಡೇಶ್ವರಿ ಲೇಔಟ್ನಲ್ಲಿ ನಡೆದ ಘಟನೆ
* ತನಿಖೆಗೆ 4 ವಿಶೇಷ ತಂಡ ರಚನೆ
* ಈ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು(ಅ.07): ಮನೆಯೊಂದರಲ್ಲಿ ತಾಯಿ-ಮಗುವನ್ನು ದುಷ್ಕರ್ಮಿ ಚಾಕುವಿನಿಂದ ಇರಿದು ಭೀಕರವಾಗಿ ಕೊಂದು(Murder) ಪರಾರಿಯಾಗಿರುವ ಘಟನೆ ಬೇಗೂರು ಸಮೀಪದ ಚೌಡೇಶ್ವರಿ ಲೇಔಟ್ನಲ್ಲಿ ಬುಧವಾರ ನಡೆದಿದೆ.
ಚೌಡೇಶ್ವರಿ ಲೇಔಟ್ ನಿವಾಸಿ ಯಮುನಾ (35) ಹಾಗೂ ಅವರ ಪುತ್ರಿ ರಾಸನ್ಯ (4) ಮೃತ ದುರ್ದೈವಿಗಳು. ಯಮುನಾ ಅವರ ಮನೆಗೆ ಮಧ್ಯಾಹ್ನ ಬಂದಿರುವ ದುಷ್ಕರ್ಮಿ ಹತ್ಯೆಗೈದು ಪರಾರಿಯಾಗಿದ್ದಾನೆ. ಸಂಜೆ 5.30ರ ಸುಮಾರಿಗೆ ಮೃತಳ ಸೋದರಿ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು(Police) ಹೇಳಿದ್ದಾರೆ.
ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ತಾಯಿ ಪ್ರಿಯಕರನಿಂದ ಮಗನ ಬರ್ಬರ ಹತ್ಯೆ
ಹದಿನೈದು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಚಿಕ್ಕವೀರಸ್ವಾಮಿ ಹಾಗೂ ಯಮುನಾ ವಿವಾಹವಾಗಿದ್ದು, ದಂಪತಿಗೆ ಹೆಣ್ಣು ಮಗುವಿತ್ತು. ಬೇಗೂರು ಸಮೀಪ ಗಾರ್ಮೆಂಟ್ಸ್ನಲ್ಲಿ ನೌಕರಿಯಲ್ಲಿರುವ ಚಿಕ್ಕವೀರಸ್ವಾಮಿ ಬುಧವಾರ ಸಹ ಕೆಲಸಕ್ಕೆ ತೆರಳಿದ್ದರು. ಆಗ ಮನೆಯಲ್ಲಿ ತಾಯಿ-ಮಗಳು ಮಾತ್ರ ಇದ್ದರು. ಈ ವೇಳೆ ಮನೆಗೆ ಬಂದಿರುವ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಎಸ್.ಮುರುಗನ್ ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಮನೆಯಲ್ಲಿ ಕಳ್ಳತನವಾಗಿದೆಯೇ ಅಥವಾ ಬಲವಂತವಾಗಿ ಒಳ ಪ್ರವೇಶಿಸಿರುವ ಬಗ್ಗೆ ಸ್ಪಷ್ಪವಾಗಿಲ್ಲ. ಕೃತ್ಯದಲ್ಲಿ ಪರಿಚಿತರ ಕೈವಾಡವಿರುವ ಬಗ್ಗೆ ಶಂಕೆ ಸಹ ಇದ್ದು, ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಆಯುಕ್ತರು ಹೇಳಿದ್ದಾರೆ. ಈ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.