ತನಗೆ ಹುಟ್ಟಿದ ಮಗುವಿನ ಬಣ್ಣದಿಂದ ಪತ್ನಿ ಮೇಲೆ ಸದಾ ಅನುಮಾನದಿಂದ ಕಿತ್ತಾಡುತ್ತಿದ್ದ ಗಂಡನೋರ್ವ ಕೊನೆಗೂ ಆಕೆಯನ್ನು ಸಾವಿನ ಮನೆ ಸೇರಿಸಿದ್ದಾನೆ. ಆಂಧ್ರಪ್ರದೇಶದ ಕಾಕಿನಾಡ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಕಾಕಿನಾಡ್: ತನಗೆ ಹುಟ್ಟಿದ ಮಗುವಿನ ಬಣ್ಣದಿಂದ ಪತ್ನಿ ಮೇಲೆ ಸದಾ ಅನುಮಾನದಿಂದ ಕಿತ್ತಾಡುತ್ತಿದ್ದ ಗಂಡನೋರ್ವ ಕೊನೆಗೂ ಆಕೆಯನ್ನು ಸಾವಿನ ಮನೆ ಸೇರಿಸಿದ್ದಾನೆ. ಆಂಧ್ರಪ್ರದೇಶದ ಕಾಕಿನಾಡ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೂರುವರೆ ವರ್ಷದ ಮಗು ನೀಡಿದ ಸುಳಿವಿನ ಮೇರೆಗೆ ಈಗ ಮಹಿಳೆಯ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತ: ಒಡಿಶಾದ ಈ ದಂಪತಿ ಆಂಧ್ರಪ್ರದೇಶದ ಕಾಕಿನಾಡ್‌ನಲ್ಲಿ ಬಂದು ಬದುಕಿ ಕಟ್ಟಿಕೊಂಡಿದ್ದರು. ಆದರೆ ಗಂಡನ ಅನುಮಾನದ ಭೂತಕ್ಕೆ ಗಂಡ ಹೆಂಡತಿ ಒಂದು ಮಗು ಇದ್ದ ಸುಂದರ ಸಂಸಾರ ಸರ್ವನಾಶವಾಗಿದೆ. 

Add Asianetnews Kannada as a Preferred SourcegooglePreferred

ಒಡಿಶಾ (Odisha) ಮೂಲದ ಮಣಿಕ್ ಘೋಷ್ (Manik ghosh)ಹಾಗೂ ಪತ್ನಿ ಲಿಪಿಕಾ ಮಂಡಲ್‌ (lipika mandal), ಆಂಧ್ರಪ್ರದೇಶದ (Andhra Pradesh) ಕಾಕಿನಾಡ್‌ನ (Kakinad) ರಾಮಕೃಷ್ಣ ರಾವ್ ಪೇಟೆಯ ಜೆಂಡಾ ಸ್ಟ್ರೀಟ್‌ ತಮ್ಮ ಮೂರುವರೆ ವರ್ಷದ ಮಗು ಕೃಷಿಕಾ ಘೋಷ್‌ (Krushika ghosh) ಜೊತೆ ಜೀವನ ಮಾಡುತ್ತಿದ್ದರು. ಆದರೆ ಮಗು ಹುಟ್ಟಿದ ನಂತರ ಮಣಿಕ್ ಘೋಷ್‌ಗೆ ತನ್ನ ಪತ್ನಿ ಮೇಲೆ ಅನುಮಾನ ಶುರುವಾಗಿತ್ತು. ಮಗು ಇವರ ಬಣ್ಣಕ್ಕಿಂತ ಸ್ವಲ್ಪ ಕಡು ಬಣ್ಣವನ್ನು ಹೊಂದಿದ್ದು, ಇದೇ ಕಾರಣಕ್ಕೆ ಪತ್ನಿ ಲಿಪಿಕಾ ಮೇಲೆ ಗಂಡ ಸದಾ ಅನುಮಾನಪಟ್ಟು ಕಿತ್ತಾಡುತ್ತಿದ್ದ ಎನ್ನಲಾಗಿದೆ.

ವಿಮೆ ಹಣಕ್ಕಾಗಿ ಪತ್ನಿಯ ಕೊಲೆ ಮಾಡಿಸಿದ ಭೂಪ, ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಯ್ತು ಸತ್ಯ!


ಅನುಮಾನದ ಭೂತವನ್ನು ತಲೆಗೆ ಹತ್ತಿಸಿಕೊಂಡಿದ್ದ ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ಲಿಪಿಕಾ ಕೆಲ ತಿಂಗಳ ಹಿಂದೆ ಮಗುವಿನೊಂದಿಗೆ ತವರು ಸೇರಿದಕೊಂಡಿದ್ದಳು. ಇದಾದ ಬಳಿಕ ರಾಜಿಸಂಧಾನ ನಡೆಸಿದ ಲಿಪಿಕಾ ಪೋಷಕರು ಮತ್ತೆ ಮಣಿಕ್ ಜೊತೆ ಪತ್ನಿ ಮಗಳನ್ನು ಕಳುಹಿಸಿಕೊಟ್ಟಿದ್ದರು. ಆದರೆ ಕಿತ್ತಾಟ ಮಾತ್ರ ಎಂದಿನಂತೆ ಮುಂದುವರೆದಿತ್ತು. 

ಸೆಪ್ಟೆಂಬರ್ 21 ರಂದು ಮಣಿಕ್, ಪತ್ನಿ ಲಿಪಿಕಾ ಕುಟುಂಬದವರಿಗೆ ಕರೆ ಮಾಡಿದ್ದು, ಲಿಪಿಕಾ ಎದೆನೋವಿನಿಂದ ಮೃತಪಟ್ಟಿರುವುದಾಗಿ ಹೇಳಿದ್ದಾನೆ. ಅಳಿಯನ ಮಾತನ್ನು ನಂಬಿದ ಲಿಪಿಕಾ ಪೋಷಕರು ಒಂದು ಮಾತನಾಡದೇ ಬಂದು ಮಗಳ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ತಮ್ಮ ಮೊಮ್ಮಗಳನ್ನು ಕರೆದುಕೊಂಡು ಊರಿಗೆ ಹೋಗಿದ್ದಾರೆ. ಆದರೆ ಅಲ್ಲಿ ಮಗು ತನ್ನ ಅಜ್ಜಿ ತಾತನ ಬಳಿ ಸ್ಫೋಟಕ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ. ತನ್ನದೇ ತೊದಲು ನುಡಿ ಕೈ ಭಾಷೆಗಳಲ್ಲಿ ಅಪ್ಪ ಅಮ್ಮನಿಗೆ ಹೊಡೆದಿದ್ದು, ಬಳಿಕ ಆಕೆಯ ಕತ್ತು ಹಿಸುಕಿ ದೇಹ ನಿಶ್ಚಲವಾಗಿಸಿದ್ದನ್ನು ಹೇಳಿದ್ದಾಳೆ. ಇದರಿಂದ ಅನುಮಾನಗೊಂಡ ಲಿಪಿಕಾ ಪೋಷಕರು (Parents) ಸೀದಾ ಮಗವನ್ನು ಕರೆದುಕೊಂಡು ಕಾಕಿನಾಡಿಗೆ ಬಂದು ಪೊಲೀಸರಿಗೆ (Police) ದೂರು ನೀಡಿದ್ದಾರೆ. 

Mandya: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆಗೈದ ಪಾಪಿ ಪತಿ!

ಈ ವೇಳೆ ಪೊಲೀಸರು ಮಗುವನ್ನು ವಿಚಾರಿಸಿದಾಗ ಪೊಲೀಸರ ಬಳಿಯೂ ಮಗು ಅಂದು ಏನಾಯಿತು ಎಂಬುದನ್ನು ವಿವರಿಸಿದೆ. ಮಗುವಿನ ಹೇಳಿಕೆ ಆಧರಿಸಿ ಪೊಲೀಸರು ತಂದೆ ಮಣಿಕ್ ಘೋಷ್‌ನನ್ನು ಬಂಧಿಸಿದ್ದಾರೆ. ಮಣಿಕ್ ತವರು ರಾಜ್ಯ ಒಡಿಶಾದಲ್ಲೂ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ಹಾಗೂ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಆತನ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಈ ವೇಳೆ ತಾನು ಹಾಗೂ ತನ್ನ ಪತ್ನಿ ಬೆಳ್ಳಗಿದ್ದು, ಮಗು ಮಾತ್ರ ಏಕೆ ಕಪ್ಪಾಗಿ ಹುಟ್ಟಿದೆ ಎಂದು ಅನುಮಾನ ಪಟ್ಟು ಹೆಂಡತಿಗೆ ಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ. 

ಅಲ್ಲದೇ ಲಿಪಿಕಾ ವಾಸವಾಗಿದ್ದ ಮನೆಯಲ್ಲಿದ್ದ ಹಲವು ಸಾಕ್ಷ್ಯಗಳನ್ನು ಆಧರಿಸಿ ಮಣಿಕ್‌ನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ತನಿಖೆ ವೇಳೆ ಈತ ತಾನು ಪತ್ನಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಅಸಹಜ ಸಾವು ಪ್ರಕರಣ ಕೊಲೆ ಪ್ರಕರಣವಾಗಿ ಬದಲಾಗಿದೆ. ನಂತರ ಪೊಲೀಸರು ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.