Asianet Suvarna News Asianet Suvarna News

Bengaluru: ಸಿಲಿಕಾನ್‌ ಸಿಟಿಯಲ್ಲಿ ಗುಂಡಿ ಬಿದ್ದ ರಸ್ತೆಗೆ ಮತ್ತೊಂದು ಬಲಿ

ಗುಂಡಿ ಬಿದ್ದಿದ್ದ ರಸ್ತೆಯಲ್ಲಿ ಸಾಗುವಾಗ ಟ್ರ್ಯಾಕ್ಟರ್‌ ಡಿಕ್ಕಿಯಾಗಿ ಪ್ಲಂಬರ್‌ವೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. 

man died in road accident over potholes in bengaluru gvd
Author
First Published Nov 15, 2022, 2:34 PM IST

ಬೆಂಗಳೂರು (ನ.15): ಗುಂಡಿ ಬಿದ್ದಿದ್ದ ರಸ್ತೆಯಲ್ಲಿ ಸಾಗುವಾಗ ಟ್ರ್ಯಾಕ್ಟರ್‌ ಡಿಕ್ಕಿಯಾಗಿ ಪ್ಲಂಬರ್‌ವೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಮರಿಯಪ್ಪನಪಾಳ್ಯದ ನಿವಾಸಿ ಕುಮಾರ್‌ (55) ಮೃತ ದುರ್ದೈವಿ. ಕೆಲಸದ ನಿಮಿತ್ತ ತಮ್ಮ ಮನೆಯಿಂದ ರಾಜಾಜಿ ನಗರದ ಡಿ ಬ್ಲಾಕ್‌ಗೆ ಕುಮಾರ್‌ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಟ್ರ್ಯಾಕರನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಕುಟುಂಬದ ಜತೆ ಮರಿಯಪ್ಪನಪಾಳ್ಯದಲ್ಲಿ ನೆಲೆಸಿದ್ದ ಮೃತ ಕುಮಾರ್‌ ಅವರು, ಕೊಳಾಯಿ ರಿಪೇರಿ ಕೆಲಸ ಮಾಡಿಕೊಂಡು ಜೀವನ ಸಾಗುತ್ತಿದ್ದರು. 

ಕೆಲಸದ ನಿಮಿತ್ತ ಮರಿಯಪ್ಪನಪಾಳ್ಯದಿಂದ ರಾಜಾಜಿ ನಗರದ ಡಿ ಬ್ಲಾಕ್‌ಗೆ ಸ್ಕೂಟರ್‌ನಲ್ಲಿ ಅವರು ತೆರಳುತ್ತಿದ್ದರು. ಆಗ ಡಾಂಬರು ಕಿತ್ತು ಹೋಗಿರುವ ಕಲ್ಲುಗಳಿಂದ ಕೂಡಿದ್ದ ಮರಿಯಪ್ಪನಪಾಳ್ಯದ 2ನೇ ಮುಖ್ಯರಸ್ತೆಯಲ್ಲಿ ಸ್ಕೂಟರ್‌ ಚಲಾಯಿಸಿಕೊಂಡು ಕುಮಾರ್‌ ಹೋಗುತ್ತಿದ್ದರು. ಆ ವೇಳೆ ಅದೇ ಮಾರ್ಗವಾಗಿ ಬಂದ ಟ್ರ್ಯಾಕರ್‌ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿಯಾಗಿದೆ. ಇದರಿಂದ ಕೆಳಗೆ ಬಿದ್ದ ಕುಮಾರ್‌ ಅವರ ಮೇಲೆ ಟ್ರ್ಯಾಕರ್‌ ಹಿಂಬದಿ ಚಕ್ರಗಳು ಹರಿದಿವೆ. ಕೂಡಲೇ ಗಾಯಾಳುವನ್ನು ಸಮೀಪದ ಕೆ.ಸಿ.ಜನರಲ್‌ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಕುಮಾರ್‌ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮೃತನ ಪುತ್ರ ಮಂಜುನಾಥ್‌ ದೂರು ಆಧರಿಸಿ ಟ್ರ್ಯಾಕರ್‌ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಓಲಾ, ಉಬರ್ ಆಟೋ ಬಿಕ್ಕಟ್ಟು: ಇಂದು ಆರ್‌ಟಿಒ ಅಧಿಕಾರಿಗಳಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

ನಕಲಿ ಬ್ರಾಸ್ಲೆಟ್‌ ಕೊಟ್ಟು ಅಸಲಿ ಚಿನ್ನ ಪಡೆದು ಪರಾರಿ: ಗ್ರಾಹಕರ ಸೋಗಿನಲ್ಲಿ ಚಾಲಾಕಿ ವಂಚಕ ಜುವೆಲ್ಲರಿ ಅಂಗಡಿಗೆ ತೆರಳಿ ನಕಲಿ ಚಿನ್ನದ ಬ್ರಾಸ್ಲೆಟ್‌ ಕೊಟ್ಟು ಅಸಲಿ ಚಿನ್ನದ ಬ್ರಾಸ್ಲೆಟ್‌ ಪಡೆದು ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯ ನಗರದ ಆರ್‌ಪಿಸಿ ಲೇಔಟ್‌ನ 5ನೇ ಅಡ್ಡರಸ್ತೆಯ ಪ್ರವೀಣ್‌ ಗನ್ನ ಮಾಲಿಕತ್ವದ ‘ಪ್ರವೀಣ್‌ ಜುವೆಲ್ಸ್‌’ ಅಂಗಡಿಯಲ್ಲಿ ಅ.31ರಂದು ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಜುವೆಲ್ಲರಿ ಅಂಗಡಿ ಮಾಲಿಕ ಪ್ರವೀಣ್‌ ಅ.31ರಂದು ಕಾರ್ಯ ನಿಮಿತ್ತ ಶಿವಮೊಗ್ಗ ಹೋಗಿದ್ದರು. ಅಂಗಡಿಯಲ್ಲಿ ಸಕ್ಷಮ್‌ ಎಂಬ ಕೆಲಸಗಾರನಿದ್ದ. ಸಂಜೆ 4.15ರ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಬಂದಿರುವ ವ್ಯಕ್ತಿ ‘ತನ್ನ ಬಳಿ 49 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್‌ಯಿದ್ದು, ಹಳೆಯದಾಗಿದೆ. ಹೀಗಾಗಿ ಇದನ್ನು ಕೊಟ್ಟು ಹೊಸ ಬ್ರಾಸ್ಲೆಟ್‌ ಖರೀದಿಸುವುದಾಗಿ’ ಹೇಳಿದ್ದಾನೆ. ಈ ವೇಳೆ ಸಕ್ಷಮ್‌ ಆ ವ್ಯಕ್ತಿ ತಂದಿದ್ದ ಬ್ರಾಸ್ಲೆಟ್‌ ಪಡೆದು ಪರಿಶೀಲಿಸಿದಾಗ 916 ಹಾಲ್‌ಮಾರ್ಕ್ ಇರುವುದು ಗೊತ್ತಾಗಿದೆ. ಪರಿಶುದ್ಧತೆ ಪರಿಶೀಲಿಸಿದಾಗ ಶೇ.92ರಷ್ಟು ತೋರಿಸಿದೆ. ಈ ಬ್ರಾಸ್ಲೆಟ್‌ 2.90 ಲಕ್ಷ ಬಾಳಲಿದೆ ಎಂದಿದ್ದಾನೆ.

ಕಬ್ಬನ್‌ ಪಾರ್ಕ್ ನಲ್ಲಿ ಅರಳಿದ ಬಣ್ಣದ ಲೋಕ: ಕನ್ನಡ ಹಬ್ಬ ಆಯೋಜನೆ

ಈ ವೇಳೆ ಆ ವ್ಯಕ್ತಿ ಹಳೆಯ ಬ್ರಾಸ್ಲೆಟ್‌ ಅಲ್ಲಿಯೇ ಮಾರಾಟ ಮಾಡಿ, 2.28 ಲಕ್ಷ ಮೌಲ್ಯದ 38.89 ಗ್ರಾಂ ತೂಕದ ಬಂಗಾರ ಬ್ರಾಸ್ಲೆಟ್‌ ಹಾಗೂ 2.12 ಗ್ರಾಂ ತೂಕದ ಉಂಗುರವನ್ನು ಖರೀದಿಸಿದ್ದಾನೆ. ಈ ವೇಳೆ ನಕಲಿ ಮೊಬೈಲ್‌ ನಂಬರ್‌ ನೀಡಿದ್ದು, ತನ್ನ ಹೆಸರು ದೇವರಾಜ್‌ ಎಂದು ಹೇಳಿದ್ದಾನೆ. ಅಂದು ರಾತ್ರಿ 8ಕ್ಕೆ ಪ್ರವೀಣ್‌ ಶಿವಮೊಗ್ಗದಿಂದ ವಾಪಾಸ್‌ ಆದಾಗ ಕೆಲಸಗಾರ ಸಕ್ಷಮ್‌ ಬ್ರಾಸ್ಲೆಟ್‌ ವಿಚಾರ ಹೇಳಿದ್ದಾನೆ. ಈ ವೇಳೆ ಆ ಬ್ರಾಸ್ಲೆಟ್‌ ತುಂಡು ಮಾಡಿ ಪರಿಶುದ್ಧತೆ ಪರಿಶೀಲಿಸಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ. ಬಳಿಕ ಈ ಸಂಬಂಧ ವಿಜಯ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios