ಯುವಕನ ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಇಬ್ಬರಿಗೆ ಜೀವಾವಧಿ ಶಿಕ್ಷೆ, ದಂಡ ಇನ್ನುಳಿದ ಮೂವರಿಗೆ ದಂಡ ವಿಧಿಸಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಆದೇಶ. 

ಕಲಬುರಗಿ(ಜ.05):  ನಗರದ ಬಾಪೂ ನಗರ ಬಡಾವಣೆಯಲ್ಲಿ ಚಿರಂಜೀವಿ ಎನ್ನುವ ಯುವಕನ ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಇಬ್ಬರಿಗೆ ಜೀವಾವಧಿ ಶಿಕ್ಷೆ, ದಂಡ ಇನ್ನುಳಿದ ಮೂವರಿಗೆ ದಂಡ ವಿಧಿಸಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮರುಳಾಸಿದ್ಧಾರಾದ್ಯ ಎಚ್‌.ಜೆ. ಆದೇಶ ಹೊರಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಪ್ರಕರಣದಲ್ಲಿ ತಂದೆ ಮತ್ತು ಆತನ 3 ಮಕ್ಕಳು, ಇನ್ನೊಬ್ಬ ಬೇರೆ ಯುವಕ ಆಪಾದಿತರಾಗಿದ್ದಾರೆ. ನಗರದ ಬಾಪೂ ನಗರದ ರಘುನಾಥ ಉಪಾದ್ಯಾ, ಅತನ ಮಕ್ಕಳಾದ ಆಟೋ ಚಾಲಕ ಕಾಶಿನಾಥ ಉಪಾದ್ಯಾ (20), ವಿಶ್ವನಾಥ ಉಪಾದ್ಯಾ, ಅಲೋಕನಾಥ ಉಪಾದ್ಯಾ ಮತ್ತು ಜಯ ಉಪಾದ್ಯಾ (22) ಈ ಐವರು ಆರೋಪಿಗಳಾಗಿದ್ದಾರೆ. ಇವರಲ್ಲಿ ಕಾಶಿನಾಥ ಮತ್ತು ಜಯ ಎನ್ನುವವರಿಗೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರು. ದಂಡ ವಿಧಿಸಲಾಗಿದೆ. ಇನ್ನುಳಿದ ರಘುನಾಥ, ವಿಶ್ವನಾಥ ಮತ್ತು ಅಲೋಕನಾಥ ಒಟ್ಟು ಐವರಿಗೆ 5 ಸಾವಿರ ರು. ದಂಡ ವಿಧಿಸಲಾಗಿದೆ.

ಕಲಬುರಗಿ ಸೆಂಟ್ರಲ್ ಜೈಲ್ ಮೇಲೆ ಪೊಲೀಸ್ ರೇಡ್: ಲಕ್ಷಾಂತರ ರೂ. ಕ್ಯಾಶ್, ಮೊಬೈಲ್, ಸಿಮ್ ಕಾರ್ಡ್‌ ಪತ್ತೆ

ದಂಡದ ಮೊತ್ತದಲ್ಲಿ ರು.1,45,000 ಮೊತ್ತವನ್ನು ಮೃತ ಯುವಕನ ತಾಯಿಗೆ ಪರಿಹಾರ ರೂಪದಲ್ಲಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. 2020ನೇ ಏಪ್ರಿಲ್‌ 24ರಂದು ರಾತ್ರಿ ಈ ಐವರು ಗುಂಪು ಕಟ್ಟಿಕೊಂಡು ತನ್ನ ಮನೆ ಮುಂದೆ ಕುಳಿತಿದ್ದ ಚಿರಂಜೀವಿ ಬಳಿ ಬಂದು ಕಲಹ ಮಾಡಿದ್ದಾರೆ. ಅವರಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಕಾಶಿನಾಥ ಮತ್ತು ಜಯ ಅವರು ಚಿರಂಜೀವಿಗೆ ಬಡಿಗೆಯಿಂದ ಹೊಡೆದಿದ್ದಲ್ಲದೇ ಆತನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಆಗಿನ ಬ್ರಹ್ಮಪುರ ಠಾಣೆಯ ಇನ್ಸಪೆಕ್ಟರ್‌ ಕಪೀಲ್ದೇವ್‌ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ಎಸ್‌. ಆರ್‌. ನರಸಿಂಹಲು ವಾದ ಮಂಡಿಸಿದ್ದರು.