ಕೇರಳದ ಕೋಝಿಕ್ಕೋಡ್ನಲ್ಲಿ, ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ಇಬ್ಬರು ಬಾಲಕರೊಂದಿಗೆ ಕಾಡಿಗೆ ಹೋಗಿ ನಾಪತ್ತೆಯಾಗಿದ್ದಾಳೆ. ಸ್ಮಾರ್ಟ್ಫೋನ್ ಮಾರಿ, ಬದುಕಲು ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಕಾಡಿನಲ್ಲಿ ಅಡಗಿಕೊಂಡಿದ್ದ ಈ ಮೂವರನ್ನು ಪೊಲೀಸರು ಮತ್ತು ಸ್ಥಳೀಯರು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಕೆಲವು ಮಕ್ಕಳ ಮನಸ್ಥಿತಿ ನೆನೆಸಿಕೊಂಡರೇನೇ ಪಾಲಕರು ಬೆಚ್ಚಿಬೀಳುವಂತಾಗುತ್ತದೆ. ಅಪ್ಪ-ಅಮ್ಮನ ತಪ್ಪೋ, ಸ್ನೇಹಿತರು ಅಂಥವರೋ, ಈಗ ಸಿಗುತ್ತಿರುವ ಶಿಕ್ಷಣ ಆ ರೀತಿ ಇದ್ಯೋ ಅಥವಾ ಎಲ್ಲಕ್ಕಿಂತ ಮಿಗಿಲಾಗಿ ಸ್ಮಾರ್ಟ್ಫೋನ್ ಕೈಯಲ್ಲಿ ಇರುವುದೋ... ಒಟ್ಟಿನಲ್ಲಿ ಕಾರಣ ಏನೇ ಇದ್ದರೂ, ಮಕ್ಕಳು ತೆಗೆದುಕೊಳ್ಳುತ್ತಿರುವ ನಿರ್ಧಾರ ಮಾತ್ರ ದಂಗುಬಡಿಸುವಂತಿದೆ. ನಿಜಕ್ಕೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ರೀತಿಯ ಕ್ರಿಮಿನಲ್ ಬುದ್ಧಿ ಬರಲು ಹೇಗೆ ಸಾಧ್ಯ ಎಂದೂ ಎನ್ನಿಸುವುದು ಉಂಟು. ಅಂಥದ್ದೇ ಒಂದು ಘಟನೆ ಕೇರಳದ ಕೋಝಿಕ್ಕೋಡ್ನ ತಮರಸ್ಸೇರಿಯಲ್ಲಿ ನಡೆದಿದೆ.
ಹೈಸ್ಕೂಲ್ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ತನಗಿಂತ ಒಂದೆರಡು ವರ್ಷ ಹಿರಿಯ ಇಬ್ಬರು ಬಾಲಕರ ಜೊತೆ ಕಾಡಿನಲ್ಲಿ ನಾಪತ್ತೆಯಾಗಿರುವ ಶಾಕಿಂಗ್ ಘಟನೆ ಇದಾಗಿದೆ. ಬಾಲಿವುಡ್ ಸಿನಿಮಾದಲ್ಲಿಯೂ ಬಹುಶಃ ಈ ರೀತಿಯ ಕಥೆಗಳನ್ನು ಹೆಣೆದಿರಲಿಕ್ಕೆ ಇಲ್ಲ ಎನ್ನುವ ರೀತಿಯಲ್ಲಿ ಈ ಘಟನೆ ನಡೆದಿದೆ. ಇದರಲ್ಲಿ ಬಾಲಕಿ 10ನೇ ಕ್ಲಾಸ್ ಅರ್ಥಾತ್ 15 ವರ್ಷ. ಬಾಲಕರು ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ 17 ವರ್ಷದವರು. ಇವರೆಲ್ಲರೂ ಸೇರಿ ಮಾಡಿದ್ದು, ಕಾಡಿನಲ್ಲಿ ಕಳೆಯುವ ನಿರ್ಧಾರ. ಇದು ಅವರಿಗೆ ಅಡ್ವೆಂಚರ್ ಟ್ರಿಪ್ ಅಂತೆ!
ಕಳೆದ ಗುರುವಾರ ಬೆಳಿಗ್ಗೆ ಶಾಲೆಗೆ ಹೋಗುವ ನೆಪದಲ್ಲಿ ಇವರೆಲ್ಲಾ ಮನೆಯಿಂದ ಹೊರಟಿದ್ದಾರೆ. ಬಾಲಕಿ ಶಾಲೆಯ ಬಳಿಯ ರಬ್ಬರ್ ತೋಟದಲ್ಲಿ ತನ್ನ ಸಮವಸ್ತ್ರವನ್ನು ಬದಲಾಯಿಸಿ ಅದನ್ನು ಬಿಟ್ಟು ಹೋಗಿದ್ದಾಳೆ. ಅದೇ ಶಾಲೆಯ ಇಬ್ಬರು ಬಾಲಕರು ತಮ್ಮ ಎರಡು ಮೋಟಾರ್ಸೈಕಲ್ಗಳೊಂದಿಗೆ ಬಂದಿದ್ದಾರೆ. ಬಾಲಕಿ ಶಾಲೆಗೆ ಹಾಜರಾಗಿಲ್ಲ ಎಂದು ಮೆಸೇಜ್ ಬಂದಾಗ ಅಪ್ಪ-ಅಮ್ಮ ಶಾಕ್ ಆಗಿದ್ದಾರೆ. ಬಳಿಕ ಸಾಕಷ್ಟು ವಿಚಾರಣೆ ಬಳಿಕ ಇಬ್ಬರು ಬಾಲಕರೂ ಕಾಣೆಯಾಗಿರುವುದು ತಿಳಿದಿದೆ. ಅದಕ್ಕೂ ಮುನ್ನ ಈ ಮಕ್ಕಳು ಮಾಡಿದ್ದೇನು ನೋಡಿ
ಯೋಜನೆ ರೂಪಿಸಿದ್ದು ಹೇಗೆ?
ಈ ಮಕ್ಕಳ ಬಳಿ ಅವರ ಅಡ್ವೆಂಚರ್ ಟ್ರಿಪ್ಗೆ ದುಡ್ಡು ಬೇಕಿತ್ತಲ್ಲ. ಅಪ್ಪ-ಅಮ್ಮನ ಬಳಿ ಕೇಳುವಂತೆ ಇರಲಿಲ್ಲ. ಆದ್ರೆ ಇಷ್ಟು ಚಿಕ್ಕ ವಯಸ್ಸಿನ ಮಕ್ಕಳಿಗೆ ದುಬಾರಿ ಸ್ಮಾರ್ಟ್ಫೋನ್ ಅಂತೂ ಕೊಡಿಸಲು ಅಪ್ಪ-ಅಮ್ಮ ಹಿಂದೇಟು ಹಾಕಿರುವುದಿಲ್ಲವಲ್ಲ. ಅದೇ ರೀತಿ, ಇಬ್ಬನ ಬಳಿ 18 ಸಾವಿರ ರೂಪಾಯಿ ಸ್ಮಾರ್ಟ್ಫೋನ್ ಇತ್ತು. ಅದನ್ನು ಆತ ತಮರಶ್ಶೇರಿಯ ಅಂಗಡಿಯಲ್ಲಿ 10 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಪೊಲೀಸ್ ಸೈಬರ್ ಸೆಲ್ ಅವರನ್ನು ಪತ್ತೆಹಚ್ಚುವುದನ್ನು ತಡೆಯಲು ಉಳಿದ ಚಾಲಾಕಿಗಳು ತಮ್ಮ ಫೋನ್ಗಳನ್ನು ಸ್ವಿಚ್ ಆಫ್ ಮಾಡಿದ್ದರು. ಅಷ್ಟೇ ಅಲ್ಲದೇ ಆ ದುಡ್ಡಿನಿಂದ ಟಾರ್ಪಲ್, ಅಕ್ಕಿ, ಬ್ರೆಡ್, ಚಾಕು ಮತ್ತು ಅಡುಗೆ ಪಾತ್ರೆಗಳನ್ನು ಖರೀದಿ ಮಾಡಿದ್ದರು. ಯಾರಿಗೂ ಸಿಗದೆ ಕಾಡಿನಲ್ಲಿ ದಿನಗಳವರೆಗೆ ಬದುಕಲು ಇದು ಸಾಕು ಎನ್ನುವುದು ಅವರ ಪ್ಲ್ಯಾನ್.
ತಿಳಿದದ್ದು ಹೇಗೆ?
ಶಾಲೆಯ ಬಳಿ ಇದ್ದ ರಬ್ಬರ್ ಟ್ಯಾಪಿಂಗ್ ಕೆಲಸಗಾರನೊಬ್ಬ ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಮೂವರನ್ನು ಗಮನಿಸಿದ್ದ. ಅವರ ಫೋಟೋಗಳನ್ನು ಸದ್ದಿಲ್ಲದೆ ತನ್ನ ಫೋನ್ನಲ್ಲಿ ತೆಗೆದು ಶಾಲಾ ಅಧಿಕಾರಿಗಳಿಗೆ ರವಾನಿಸಿದ್ದ. ಇದರಿಂದ ಮೂವರೂ ಒಟ್ಟಿಗೆ ಇದ್ದಾರೆ ಎಂದು ದೃಢಪಟ್ಟಿತ್ತು. ಆ ಬಳಿಕ ಪಾಲಕರಿಗೆ ವಿಷಯ ತಿಳಿದು ಹುಡುಕಾಟ ನಡೆಸಿದ್ದರು. ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಲಕ್ಕಿಡಿ ಘಾಟ್ನಿಂದ ವಯನಾಡಿಗೆ ತಮ್ಮ ಮೋಟಾರ್ಸೈಕಲ್ಗಳಲ್ಲಿ ದಾಟುತ್ತಿರುವ ಅವರನ್ನು ಪತ್ತೆಹಚ್ಚಿದ್ದರು. ಮೂರು ಮಕ್ಕಳು ಶಾಲೆಯಿಂದ ನಾಪತ್ತೆಯಾಗಿರುವ ಸುದ್ದಿ ರಾಜ್ಯದ ತುಂಬೆಲ್ಲಾ ಕಾಳ್ಗಿಚ್ಚಿನಂತೆ ಹರಡಿ ಅದಕ್ಕೆ ರೆಕ್ಕೆಪುಕ್ಕ ಎಲ್ಲವೂ ಬಂದಾಗಿತ್ತು. ಆ ಬಳಿಕ ಪೊಲೀಸರು ತನಿಖೆ ಕೈಗೊಂಡಿದ್ದರು.
ವಡುವಂಚಲ್ನ ವಡುವಾಂಚಲ್ನ ಚಿತ್ರಗಿರಿ ಬಳಿಯ ಕಾಡಿನಲ್ಲಿ ಸುಮಾರು ಐದು ಎಕರೆಗಳಷ್ಟು ವಿಸ್ತಾರವಾದ ಬೆಟ್ಟದ ತುದಿಯಲ್ಲಿ ಈ ಮಕ್ಕಳು ಬೀಡುಬಿಟ್ಟಿದ್ದು ಪೊಲಿಸರಿಗೆ ತಿಳಿಯಿತು. ಪೊಲೀಸರು, ಸ್ಥಳೀಯರು ಮತ್ತು ಪೋಷಕರು ಕಾಡನ್ನು ಶೋಧಿಸಿದರು ಮತ್ತು ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿಗೆ, ಸ್ಥಳೀಯರು ಒಬ್ಬ ಬಾಲಕನನ್ನು ಗಮಿಸಿದರು. ಪೊಲೀಸರು ಬಂದಿದ್ದಾರೆ ಎಂಬ ಸುದ್ದಿ ಹರಡಿದ ಕ್ಷಣ, ಬಾಲಕಿ ಮತ್ತು ಇನ್ನೊಬ್ಬ ಬಾಲಕ ಸ್ಕೂಟರ್ನಲ್ಲಿ ಪರಾರಿಯಾಗಲು ಪ್ರಯತ್ನಿಸಿದರು. ಪೊಲೀಸರು ಸಾಕಷ್ಟು ಹುಟುಕಾಟ ನಡೆಸಿದ ಬಳಿಕ ಇವರಿಬ್ಬರನ್ನೂ ಪತ್ತೆ ಹಚ್ಚಲು ಸಾಧ್ಯವಾಯಿತು. ಮೂವರನ್ನೂ ಮೆಪ್ಪಾಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು, ಅಲ್ಲಿ ಅವರನ್ನು ಪೋಷಕರ ವಶಕ್ಕೆ ಪಡೆಯುವ ಮೊದಲು ಔಪಚಾರಿಕತೆಗಳನ್ನು ಪೂರ್ಣಗೊಳಿಸಲಾಯಿತು.


