*  ಸಾಲ ತಂದ ಆಪತ್ತು*  ಮಗಳಿಗೂ ಚಾಕು ಇರಿತ*  ಆತ್ಮಹತ್ಯೆಗೆ ಯತ್ನಿಸಿದವನ ಬಂಧನ 

ಬೆಂಗಳೂರು(ಜೂ.23): ಸಾಲ ಮಾಡಿದ್ದನ್ನು ಪ್ರಶ್ನಿಸಿದ ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆಗೈದು ಬಳಿಕ ಮಗಳ ಹತ್ಯೆಗೂ ಯತ್ನಿಸಿದ ಟೈಲರ್‌ ತಾನಾಗಿಯೇ ಪೊಲೀಸರಿಗೆ ಶರಣಾಗಿರುವ ಘಟನೆ ಯಶವಂತಪುರ ಸಮೀಪ ಬುಧವಾರ ಮುಂಜಾನೆ ನಡೆದಿದೆ.

ಮತ್ತಿಕೆರೆ ನಿವಾಸಿ ಅನುಸೂಯಾ (42) ಕೊಲೆಯಾದ ದುರ್ದೈವಿ. ತಂದೆಯಿಂದ ಚಾಕುವಿನಿಂದ ಇರಿತಕ್ಕೊಳಗಾಗಿರುವ ಸಹನಾ (14) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾಳೆ. ಕೃತ್ಯ ಎಸಗಿದ ಬಳಿಕ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಟೈಲರ್‌ ಧನೇಂದ್ರ ರೆಡ್ಡಿ (49) ಶರಣಾಗಿದ್ದಾನೆ.

ಚನ್ನಗಿರಿಯಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ: ಭಯಾನಕ ವಿಡಿಯೋ ಮೊಬೈಲ್‌ನಲ್ಲಿ ಸೆರೆ

2 ಲಕ್ಷ ಸಾಲ ತಂದ ದುರಂತ:

17 ವರ್ಷಗಳ ಹಿಂದೆ ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಧನೇಂದ್ರ ರೆಡ್ಡಿ ಹಾಗೂ ಅನುಸೂಯಾ ವಿವಾಹವಾಗಿದ್ದು, ಯಶವಂತಪುರ ಸಮೀಪದ ಮತ್ತಿಕೆರೆಯಲ್ಲಿ ವಾಸವಾಗಿದ್ದರು. ದಂಪತಿಯ ಮಗಳು ಸಹನಾ 9ನೇ ತರಗತಿ ಓದುತ್ತಿದ್ದಳು. ಮನೆ ಪಕ್ಕದಲ್ಲೇ ಇಬ್ಬರು ಟೈಲರಿಂಗ್‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚೆಗೆ ಪರಿಚಿತರ ಬಳಿ ರೆಡ್ಡಿ .2 ಲಕ್ಷ ಸಾಲ ಮಾಡಿದ್ದ. ಇದಕ್ಕೆ ಆಕ್ಷೇಪಿಸಿದ ಅನುಸೂಯಾ, ‘ಮನೆಯಲ್ಲಿ ತುಂಬಾ ಕಷ್ಟವಿದೆ. ಮುಂದೆ ಮಗಳ ಓದಿಗೆ ಹಣದ ಅವಶ್ಯಕತೆ ಇದೆ. ಹೀಗಿದ್ದರೂ ಸುಖಾಸುಮ್ಮನೆ ಸಾಲ ಮಾಡೋದು ಸರಿಯೇ’ ಎಂದು ಪತಿಯನ್ನು ಪ್ರಶ್ನಿಸುತ್ತಿದ್ದರು. ಇದೇ ವಿಚಾರವಾಗಿ ದಂಪತಿ ಮಧ್ಯೆ ಮಂಗಳವಾರ ರಾತ್ರಿ ಜಗಳವಾಗಿದೆ. ಆಗ ಕೆರಳಿದ ರೆಡ್ಡಿ, ಊಟ ಮುಗಿಸಿ ಮಲಗಿದ ಬಳಿಕ ಪತ್ನಿ ಹಾಗೂ ಮಗಳನ್ನು ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಬುಧವಾರ ನಸುಕಿನ 4ರ ಸುಮಾರಿಗೆ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಮಗಳಿಗೆ ಚಾಕುವಿನಿಂದ ಕುತ್ತಿಗೆ ಚುಚ್ಚಿದ್ದಾನೆ. ಈ ಕೃತ್ಯ ಎಸಗಿದ ಬಳಿಕ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೊಲೆ ಮಾಡಿರುವ ವಿಷಯ ತಿಳಿಸಿದ ನಂತರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಅಷ್ಟರಲ್ಲಿ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ ಯಶವಂತಪುರ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳು ಸಹನಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಯತ್ನ, ಲೈಂಗಿಕ ದೌರ್ಜನ್ಯ ಆರೋಪ: ಪೊಲೀಸರ ಮೇಲೆಯೇ ಎಫ್‌ಐಆರ್‌ ದಾಖಲು

ಸತ್ತಂತೆ ನಟಿಸಿದ ಸಹನಾ

ತೀವ್ರ ಚಾಕು ಇರಿತದಿಂದಾಗಿ ರಕ್ತಸ್ರಾವವಾಗಿ ಅನುಸೂಯಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಆದರೆ ಮಗಳು ತನ್ನ ತಂದೆ ಕುತ್ತಿಗೆ ಚಾಕುವಿನಿಂದ ಚುಚ್ಚಿದ ಕೂಡಲೇ ಹೆಚ್ಚು ಕಿರುಚಿಕೊಳ್ಳದೆ ಮೃತಪಟ್ಟವಳಂತೆ ಮಲಗಿಕೊಂಡಿದ್ದಾಳೆ. ಮಗಳೂ ಸಹ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿದ ಆತ, ಮಗಳ ಮೇಲೆ ಬೆಡ್‌ಶೀಟ್‌ ಮುಚ್ಚಿ ಹೊರ ಬಂದಿದ್ದಾನೆ. ಆದರೆ ಚಾಕುವಿನಿಂದ ಸಹನಾಗೆ ಹೆಚ್ಚಿನ ಇರಿತವಾಗಿರಲಿಲ್ಲ. ಜೀವ ಭಯದಿಂದ ಆಕೆ ಸಮಯ ಪ್ರಜ್ಞೆ ತೋರಿ ಸತ್ತವಳಂತೆ ನಟಿಸಿದ್ದು, ಪ್ರಾಣ ಉಳಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ನಶೆ ಇಳಿದ ಬಳಿಕ ತಪ್ಪಿನ ಅರಿವು

ಮದ್ಯದ ಅಮಲಿನಲ್ಲಿ ಪತ್ನಿ ಹತ್ಯೆಗೈದು ಮಗಳಿಗೆ ಚಾಕು ಇರಿದು ತಾನು ಆತ್ಮಹತ್ಯೆಗೆ ಮುಂದಾಗಿದ್ದ ಧನೇಂದ್ರ ರೆಡ್ಡಿಗೆ ನಶೆ ಇಳಿದ ನಂತರ ತಪ್ಪಿನ ಅರಿವಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಗೆ ಕೊಲೆಗೆ ನಿರ್ಧರಿಸಿದ್ದ ಆತ, ಮನೆಗೆ ಮಂಗಳವಾರ ರಾತ್ರಿ ಕಂಠಮಟ ಮದ್ಯ ಸೇವಿಸಿ ಬಂದಿದ್ದ. ಹಿಂದಿನ ರಾತ್ರಿ ಸಹ ಕೊಲೆ ಯತ್ನ ವಿಫಲವಾಗಿದ್ದರಿಂದ ಎಚ್ಚೆತ್ತ ಆತ, ಬುಧವಾರ ನಸುಕಿನಲ್ಲಿ 3 ಗಂಟೆ ಸುಮಾರಿಗೆ ಪತ್ನಿ ಗಾಢ ನಿದ್ರೆಯಲ್ಲಿದ್ದಾಗ ಅಡುಗೆ ಮನೆಗೆ ಹೋಗಿ ಚಾಕು ತಂದು ಕುತ್ತಿಗೆ ಇರಿದಿದ್ದಾನೆ. ಆಕೆ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು ಮಗಳ ಹತ್ಯೆಗೆ ಮುಂದಾಗಿದ್ದಾನೆ. ಆದರೆ ಪತ್ನಿಗೆ ಇರಿದ ಚಾಕು ಮೊಂಡವಾದ ಕಾರಣ ಬೇರೊಂದು ಚಾಕು ತಂದು ಮಗಳಿಗೆ ಚುಚ್ಚಿದ್ದಾನೆ. ಆಗ ಮಗಳು ಸಹ ಮೃತಪಟ್ಟಿದ್ದಾಳೆ ಎಂದು ಭಾವಿಸಿ ರೆಡ್ಡಿ, ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಬೆಳಗ್ಗೆ 6.30ಕ್ಕೆ ಸಹಾನಾ ಎಚ್ಚರಗೊಂಡಿದ್ದಾಳೆ. ಆಗ ‘ನಿನಗಾಗಿ ನಾನು ಬದುಕುತ್ತೇನೆ’ ಎಂದು ಹೇಳಿ ತಾನೇ ಪೊಲೀಸ್‌ ನಿಯಂತ್ರಣ ಕೊಠಡಿ ಕರೆ ಮಾಡಿ ಶರಣಾಗಿದ್ದಾನೆ. ಅಷ್ಟರಲ್ಲಿ ರೆಡ್ಡಿಯ ಮದ್ಯದ ಅಮಲು ಸಹ ಇಳಿದಿತ್ತು.