ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ಮಧ್ಯೆ ಕಿತ್ತಾಟ ಕೊಲ್ಲುವುದಾಗಿ ಪತಿಗೆ ಬೆದರಿಸುತ್ತಿದ್ದ ಪತ್ನಿ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

ಸಾಯಿಸುವೆ ಎಂದು ಬೆದರಿಸುತ್ತಿದ್ದ ಪತ್ನಿಯ ಕೊಂದು ಪತಿ ಪೊಲೀಸರಿಗೆ ಶರಣಾದ ಘಟನೆ ಉತ್ತರಪ್ರದೇಶದ ಮೀರತ್‌ ಜಿಲ್ಲೆಯಲ್ಲಿ ನಡೆದಿದೆ. ಹರಿತವಾದ ಆಯುಧದಿಂದ ಪತ್ನಿಯನ್ನು ಇರಿದ ಆರೋಪಿ ಆಕೆ ಸಾಯುವವರೆಗೂ ಥಳಿಸಿದ್ದಾನೆ. ಆ ಬಳಿಕ ಪತ್ನಿಯ ಕತ್ತು ಕೊಯ್ದಿದ್ದಾನೆ. ಪತ್ನಿಯ ಹತ್ಯೆಯ ನಂತರ ಪತಿ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರಿಗೆ ವಿಷಯ ತಿಳಿಸಿ ಶರಣಾಗಿದ್ದಾನೆ. ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.

Add Asianetnews Kannada as a Preferred SourcegooglePreferred

ಮೀರತ್‌ನ (Meerut)ಖಾರ್ಖೋಡಾ ಪೊಲೀಸ್ ಠಾಣೆ (Kharkhoda police station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 35 ವರ್ಷದ ವಿನೋದ್ (Vinod) ತನ್ನ ಪತ್ನಿ ಪೂನಂ (Poonam) ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಹಿಂದೆ ವಿನೋದ್ ಮತ್ತು ಪೂನಂ ನಡುವೆ ಜಗಳ ನಡೆದಿದ್ದು, ನಂತರ ವಿನೋದ್ ಪೂನಂಳನ್ನು ಚಾಕುವಿನಿಂದ ಇರಿದು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆರೋಪಿ ವಿನೋದ್ ಕುಮಾರ್ ತನ್ನ ತಾಯಿ ಜೈದೇವಿ (Jaidevi), ಪತ್ನಿ ಪೂನಂ ಹಾಗೂ ಇಬ್ಬರು ಮಕ್ಕಳಾದ ಬಬ್ಲು (6)(Bablu) ಹಾಗೂ ಮಗಳು ವಂದನಾ (4) (Vandana) ಅವರೊಂದಿಗೆ ಪಟ್ಟಣದ ಮೂರನೇ ಬಡಾವಣೆಯಲ್ಲಿ ವಾಸಿಸುತ್ತಿದ್ದರು. 

Mysuru: ಮಗು ಹುಟ್ಟುವ ವೇಳೆ ಅಡ್ಡ ಬಂದ ಜಾತಿ...ಗರ್ಭಿಣಿ ಪತ್ನಿ ಕೊಲೆ

ಕೌಟುಂಬಿಕ ಕಲಹದ ವಿಚಾರವಾಗಿ ಇಂದು ಬೆಳಗ್ಗೆ ವಿನೋದ್​ ತನ್ನ ಪತ್ನಿ ಪೂನಂ ಜೊತೆ ಜಗಳವಾಡಿದ್ದಾನೆ. ಇದರ ಬೆನ್ನಲ್ಲೇ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಆರೋಪಿ ಪತಿಯೇ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆ ಮಾಡಿ ಬಂದ ಆರೋಪಿಯನ್ನು ನೋಡಿ ಪೊಲೀಸರು ತರಾತುರಿಯಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಜೊತೆಗೆ ಸ್ಥಳದಲ್ಲಿ ಪೊಲೀಸ್ ಮತ್ತು ವಿಧಿವಿಜ್ಞಾನ (forensic)ತಂಡವು ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದೆ.

ಬೆಂಗಳೂರು: ಶೀಲ‌ ಶಂಕಿಸಿ ಪತ್ನಿ ಕೊಲೆಗೈದ ಪತಿರಾಯ: ಕಳೆದೊಂದು ವಾರದಲ್ಲಿ 3ನೇ ಪ್ರಕರಣ
ಆರೋಪಿ ಕೊಲೆಗೆ ಬಳಸಿದ್ದ ಆಯುಧವನ್ನೂ ಸ್ಥಳದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಾರ್ಖೋಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಹರಿತವಾದ ಆಯುಧದಿಂದ ಕೊಂದಿದ್ದಾನೆ ಎಂದು ಮೀರತ್ ಪೊಲೀಸ್ ವರಿಷ್ಠಾಧಿಕಾರಿ ದೇಹತ್ ಕೇಶವ್ ಕುಮಾರ್ ( Dehat Keshav Kumar) ಹೇಳಿದ್ದಾರೆ. ಪತಿಯ ಹೆಸರು ವಿನೋದ್, ಆರೋಪಿ ಪತಿಯನ್ನು ಬಂಧಿಸಲಾಗಿದ್ದು, ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದರು. ಎಸ್ಪಿ ದೇಹತ್ ಕೇಶವ್ ಕುಮಾರ್ ಪ್ರಕಾರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪತ್ನಿ ತನ್ನ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಳು ಇದರಿಂದ ಸಿಟ್ಟಿಗೆದ್ದ ಆತ ಆಕೆಯನ್ನೇ ಮುಗಿಸಿದ್ದಾನೆ.

ಕೌಟುಂಬಿಕ ಕಲಹಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಪತಿ ಪತ್ನಿಯನ್ನು ಪತ್ನಿ ಪತಿಯನ್ನು ಕೊಲೆ ಮಾಡುವ ವಿಚಾರ ಮತ್ತೆ ಮತ್ತೆ ಕೇಳಿ ಬರುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಪತ್ನಿ ಶೀಲ‌ ಶಂಕಿಸಿದ ಪತಿ ಮರದ ದೊಣ್ಣೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ನಡೆದಿತ್ತು. ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪತ್ನಿ ಪದ್ಮಾಳನ್ನ ಪತಿ ಮಾರಪ್ಪ ಹತ್ಯೆಗೈದಿದ್ದ. ಆರೋಪಿ ಮಾರಪ್ಪನನ್ನು ಪೊಲೀಸರು ಬಳಿಕ ಬಂಧಿಸಿದ್ದರು. 

ಇನ್ನೂ ಬೆಂಗಳೂರಿನಲ್ಲಿ ಕಳೆದ ಒಂದು ವಾರದಲ್ಲಿ ಇದೇ ರೀತಿ ಇನ್ನೆರಡು ಘಟನೆಗಳು ನಡೆದಿವೆ. ಪತ್ನಿಯ ಶೀಲ ಶಂಕಿಸಿ, ಚಾಕುವಿನಿಂದ ಆಕೆಯ ಕತ್ತನ್ನು ಸೀಳಿ ಕೊಲೆ ಬಳಿಕ ತಾನೇ ಪೊಲೀಸರಿಗೆ ಶರಣಾದ ಘಟನೆ ಆನೇಕಲ್‌ನಲ್ಲಿ ನಡೆದಿದೆ. ಇನ್ನು ಸದಾ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಹಿನ್ನೆಲೆಯಲ್ಲಿ ಶೀಲ ಶಂಕಿಸಿ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕ್ಯಾಬ್‌ ಚಾಲಕನೊಬ್ಬ ಕೊಂದಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.