ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಸಂಭಿಸಿದ ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಕಿಮ್ಸ್ ಆಸ್ಪತ್ರಯಲ್ಲಿ  ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹುಬ್ಬಳ್ಳಿ, (ಜುಲೈ.24): ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವಿನ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

Add Asianetnews Kannada as a Preferred SourcegooglePreferred

ಅವಘಡದಲ್ಲಿ ಗಾಯಗೊಂಡಿದ್ದವರನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೂವರು ಸಾವನ್ನಪ್ಪಿದ್ದಾರೆ. ವಿಜಯಲಕ್ಷ್ಮೀ(34), ಗೌರವ್ವ(45), ಮಾಳೇಶ್(27) ಮೃತರು. ಪಾರ್ಕಲ್ಸ್ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ನಿನ್ನೆ(ಶನಿವಾರ) ಅಗ್ನಿ ಅನಾಹುತ ಸಂಭವಿಸಿತ್ತು. 

ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ

ಸ್ಥಳಕ್ಕೆ ಅಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಒಳಗಡೆ ಸಿಲುಕಿಕೊಂಡಿದ್ದ ಹಲವರನ್ನ ಹೊರತಂದು ಕೂಡಲೇ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ, ಈ ಪೈಕಿ ಮೂವರು ಮೃತಪಟ್ಟಿದ್ದಾರೆ.

ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಭೇಟಿ 
ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಇಂದು(ಭಾನುವಾರ) ಭೇಟಿ ನೀಡಿದ್ದು, ಸ್ಫೋಟಕ್ಕೆ ತುತ್ತಾದ ಫ್ಯಾಕ್ಟರಿ ಪರಿಶೀಲನೆ ಮಾಡಿದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹಾಲಪ್ಪ ಆಚಾರ್, ಯಾರನ್ನೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ . ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಒಂದು ದುರ್ಘಟನೆ ನಡೆಯಬಾರದಿತ್ತು . ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ, ಉಳಿದವರಿಗೆ ಚಿಕಿತ್ಸೆ ನೀಡಲಾಗ್ತಿದೆ . ಕಾನೂನು ಬಾಹಿರವಾಗಿ ಕಾರ್ಖಾನೆ ನಡೆಸುತ್ತಿದ್ದಾರೆಂಬ ಮಾಹಿತಿ ಇದೆ. ಕಾರ್ಖಾನೆ ಮಾಲೀಕರ ಜೊತೆ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪರಿಹಾರಕ್ಕೆ ಕುಟುಂಬಸ್ಥರ ಆಗ್ರಹ
ಇನ್ನು ಅಗ್ನಿ ಅವಘಢದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಕುಟುಂಬಸ್ಥರ ಒತ್ತಾಯಿಸುತ್ತಿದ್ದು, ಪರಿಹಾರ ಘೋಷಣೆ ಮಾಡೊವರೆಗೂ ಶವ ಶಿಪ್ಟ್ ಮಾಡಲು ಬಿಡುತ್ತಿಲ್ಲ. ಪರಿಹಾರ ನೀಡಬೇಕು, ಅನಧಿಕೃತ ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಮೃತ ಕುಟುಂಬಸ್ಥರ ಆಗ್ರಹವಾಗಿದೆ. 

ಫ್ಯಾಕ್ಟರಿ ಮ್ಯಾನೇಜರ್ ಬಂಧನ‌
ಹುಬ್ಬಳ್ಳಿಯ ತಾರಿಹಾಳ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಕ್ಟರಿ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮ್ಯಾನೇಜರ್ ಮಂಜುನಾಥ್ ನನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ.

ಇನ್ನೊಬ್ಬ ಆರೋಪಿ ಕಾರ್ಖಾನೆಯ ಮಾಲೀಕ ಮುಂಬೈ ಮೂಲದ ಅಬ್ದುಲ್ ಖಾದೀರ್ ಶೇಕ್ ಬಂಧನಕ್ಕೆ ಪೊಲೀಸರು ಸಿದ್ದತೆ ನಡೆಸಿದ್ದಾರೆ.

 ಈ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವಿಜಯಲಕ್ಷ್ಮೀ ಪತಿ ವೀರಭದ್ರ ನಿಂದ ದೂರು ಪಡೆದಿರುವ ಪೊಲೀಸರು IPC 286, 337, 338, 304, explosive act 1908 ಪ್ರಕಾರ ಕೇಸ್ ದಾಖಲು ಮಾಡಿಕೊಂಡಿದ್ದಾರೆ.