Asianet Suvarna News Asianet Suvarna News

Bengaluru: ಸಿಲಿಕಾನ್‌ ಸಿಟಿಯಲ್ಲಿ ಮತ್ತೊಂದು ಬ್ಯಾಂಕ್‌ ಧೋಖಾ: ಐವರ ಬಂಧನ

ಕೇವಲ ಜೆರಾಕ್ಸ್‌ ದಾಖಲೆ ಪಡೆದು ಕೋಟ್ಯಂತರ ರುಪಾಯಿ ಸಾಲ ನೀಡಿ ಠೇವಣಿದಾರರು ಹಾಗೂ ಗ್ರಾಹಕರಿಗೆ ವಂಚಿಸಿದ ಆರೋಪದಡಿ ನಗರದ ಚಾಮರಾಜಪೇಟೆ ಕುರುಹಿನಶೆಟ್ಟಿಸೌಹಾರ್ದ ಕ್ರೆಡಿಟ್‌ ಕೋ- ಆಪರೇಟಿವ್‌ ಲಿಮಿಟೆಡ್‌ನ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಐವರನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

five arrested 100 crore scam in kuruhinasetty souharda credit co operative ltd gvd
Author
First Published Nov 9, 2022, 11:53 AM IST

ಬೆಂಗಳೂರು (ನ.09): ಕೇವಲ ಜೆರಾಕ್ಸ್‌ ದಾಖಲೆ ಪಡೆದು ಕೋಟ್ಯಂತರ ರುಪಾಯಿ ಸಾಲ ನೀಡಿ ಠೇವಣಿದಾರರು ಹಾಗೂ ಗ್ರಾಹಕರಿಗೆ ವಂಚಿಸಿದ ಆರೋಪದಡಿ ನಗರದ ಚಾಮರಾಜಪೇಟೆ ಕುರುಹಿನಶೆಟ್ಟಿಸೌಹಾರ್ದ ಕ್ರೆಡಿಟ್‌ ಕೋ- ಆಪರೇಟಿವ್‌ ಲಿಮಿಟೆಡ್‌ನ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಐವರನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಮಲ್ಲೇಶ್ವರ ನಿವಾಸಿ ಕೋಪರೇಟಿವ್‌ ಬ್ಯಾಂಕ್‌ನ ಅಧ್ಯಕ್ಷ ಬಿ.ಎಲ್‌.ಶೀನಿವಾಸ್‌(64), ಶಾಂತಿನಗರ ನಿವಾಸಿ ಉಪಾಧ್ಯಕ್ಷ ಈಶ್ವರಪ್ಪ(71), ಕಾವೇರಿ ಲೇಔಟ್‌ ನಿವಾಸಿ ದಯಾನಂದ ಹೆಗ್ಡೆ(50), ಆರ್‌.ಟಿ.ನಗರ ನಿವಾಸಿ ಚಂದ್ರಶೇಖರ್‌(55), ಬಿಟಿಎಂ ಲೇಔಟ್‌ 2ನೇ ಹಂತದ ನಿವಾಸಿ ಸುರಭಿ ಚಿಟ್‌ ಫಂಡ್‌ನ ಚೇರಮನ್‌ ಬಿ.ಟಿ.ಮೋಹನ್‌(75) ಬಂಧಿತರು. ಇನ್ನೂ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ವಂಚನೆಗೆ ಒಳಗಾದ ಠೇವಣಿದಾರರು ನೀಡಿದ ದೂರಿನ ಮೇರೆಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Belagavi: ಬಾಲಕಿ ಚುಡಾಯಿಸಿದ್ದನ್ನು ಪ್ರಶ್ನಿಸಿದ ನಾಲ್ವರಿಗೆ ಚಾಕು ಇರಿತ

ಚಾಮರಾಜಪೇಟೆಯ 5ನೇ ಮುಖ್ಯರಸ್ತೆಯಲ್ಲಿ 2011ರಲ್ಲಿ ಕುರುಹಿನಶೆಟ್ಟಿ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್‌ ಲಿಮಿಟೆಡ್‌ ಸ್ಥಾಪನೆ ಮಾಡಿದ್ದು, 12 ವರ್ಷಗಳಿಂದ ಬಿ.ಎಲ್‌.ಶ್ರೀನಿವಾಸ್‌ ಮತ್ತು ಈಶ್ವರಪ್ಪ ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿದ್ದಾರೆ. 2011-22ರ ವರೆಗೆ ಸೌಹಾರ್ದ ಸಂಸ್ಥೆಯಲ್ಲಿ ಸಾಲ ಸಮಿತಿಯಲ್ಲಿ ಸಮರ್ಪಕವಾಗಿ ದಾಖಲೆ ಪರಿಶೀಲಿಸಿಲ್ಲ. ಕೇವಲ ಆಸ್ತಿಗಳ ಜೆರಾಕ್ಸ್‌ ಪ್ರತಿ ಸಲ್ಲಿಸಿದ ಅರ್ಜಿದಾರರಿಗೆ ಕೋಟ್ಯಂತರ ರು. ಸಾಲ ನೀಡಲಾಗಿದೆ. ಅದರಲ್ಲಿಯೂ ಆಸ್ತಿ ಮೌಲ್ಯಕ್ಕಿಂತ ಹೆಚ್ಚಿನ ಸಾಲ ನೀಡಲಾಗಿದೆ. ಅಷ್ಟೇ ಅಲ್ಲದೆ, ಒಂದೇ ಸ್ಥಿರಾಸ್ತಿ ಮೇಲೆ ಐದಾರು ಬಾರಿ ಸಾಲ ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ. ಸುರಭಿ ಚಿಟ್ಸ್‌ ಲಿಮಿಟೆಡ್‌ ಕಂಪನಿ ಜತೆಗೆ ಅನಧಿಕೃತವಾಗಿ ಒಳ ಒಪ್ಪಂದ ಮಾಡಿಕೊಂಡು ಸುಸ್ತಿದಾರರಿಗೂ ಕೋಟ್ಯಂತರ ರುಪಾಯಿ ಸಾಲ ನೀಡಲಾಗಿದೆ.

ನಿಶ್ಚಿತ ಠೇವಣಿ ಡ್ರಾ ಮಾಡಿ ಸಾಲ!: ಸಹಕಾರ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷ, ಸಿಇಒ ಹಾಗೂ ಸಾಲ ಮಂಜೂರಾತಿ ಸಮಿತಿ ಸದಸ್ಯರು ಒಳ ಸಂಚು ರೂಪಿಸಿ ಅಕ್ರಮವಾಗಿ ತಮಗೆ ಬೇಕಾದವರಿಗೆ ಕೋಟ್ಯಂತರ ರು. ಸಾಲ ಮಂಜೂರು ಮಾಡಿದ್ದಾರೆ. ಈ ಮೂಲಕ ಅವರಿಗೆ ಲಾಭ ಮಾಡಿಕೊಟ್ಟಿದ್ದಾರೆ. ಸಾಲಕ್ಕಾಗಿ ಆಸ್ತಿಗಳ ಜೆರಾಕ್ಸ್‌ ಪ್ರತಿ ಸಲ್ಲಿಸಿದಾಗ ಅವುಗಳ ಅಸಲಿಯತ್ತು ಪರಿಶೀಲಿಸದೆ ಸಾಲ ನೀಡಲಾಗಿದೆ. ಈ ಮೂಲಕ ಠೇವಣಿದಾರರ ಹಾಗೂ ಹಿತಾಸಕ್ತಿಯನ್ನು ನಿರ್ಲಕ್ಷ್ಯಿಸಲಾಗಿದೆ. ಅಷ್ಟೇ ಅಲ್ಲದೆ, ಠೇವಣಿದಾರರ ಗಮನಕ್ಕೆ ತಾರದೆ ನಿಶ್ಚಿತ ಠೇವಣಿ ಹಣವನ್ನು ಡ್ರಾ ಮಾಡಿಕೊಂಡು ತಮ್ಮ ಸಂಬಂಧಿಕರಿಗೆ ಸಾಲ ನೀಡಿ, ಪ್ರತಿಯಾಗಿ ಕಮಿಷನ್‌ ಪಡೆದಿದ್ದಾರೆ. ಮಾರ್ಟಿಗೇಜ್‌ ಸ್ವತ್ತುಗಳನ್ನು ತಮ್ಮ ಸಂಬಂಧಿಕರಿಗೆ ಮಾರಾಟ ಮಾಡಿ ಠೇವಣಿದಾರರಿಗೆ ವಂಚಿಸಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

90 ಕೋಟಿ ವಂಚನೆ: ಕುರುಹಿನಶೆಟ್ಟಿಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್‌ ಲಿಮಿಟೆಡ್‌ನಲ್ಲಿ ಗ್ರಾಹಕರು, ಠೇವಣಿದಾರರು ಹಾಗೂ ಹೂಡಿಕೆದಾರರು ಸೇರಿ ಒಟ್ಟು 2,400 ಮಂದಿ ಇದ್ದಾರೆ. ನಿಶ್ಚಿತ ಠೇವಣಿ ಡ್ರಾ ಮಾಡಲು ಮತ್ತು ಹೂಡಿಕೆ ಹಣ ವಾಪಸ್‌ ಪಡೆಯಲು ಮುಂದಾದಾಗ, ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಕೆಲ ಠೇವಣಿದಾರರಿಗೆ ಬೆದರಿಕೆ ಹಾಕಿದ ಆರೋಪವೂ ಇದೆ. ಹೀಗಾಗಿ ನೊಂದ ಠೇವಣಿದಾರರು ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ಮಾಡಿದಾಗ ಸುಮಾರು .90 ಕೋಟಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೃಂಗೇರಿ ಮಸೀದಿ ಎದುರು ಬಾವುಟ ಕಟ್ಟುವಾಗ ಗಲಾಟೆ, ಹೊಡೆದಾಟ

ಸುರಭಿ ಚಿಟ್ಸ್‌ ಫಂಡ್‌ ಮಧ್ಯಸ್ಥಿತಿಕೆಯಲ್ಲಿ ಅಕ್ರಮ: ನಗರದ ವಿವಿಧೆಡೆ 10 ಶಾಖೆಗಳನ್ನು ಹೊಂದಿರುವ ಸುರಭಿ ಚಿಟ್ಸ್‌ ಲಿಮಿಟೆಡ್‌ನ ಅಧ್ಯಕ್ಷ ಬಿ.ಟಿ.ಮೋಹನ್‌ ಮಧ್ಯಸ್ಥಿಕೆಯಲ್ಲಿ ಕುರುಹಿನಶೆಟ್ಟಿಸಹಕಾರ ಬ್ಯಾಂಕ್‌ನಲ್ಲಿ ಈ ವಂಚನೆ ನಡೆದಿದೆ. ಈ ಸಹಕಾರ ಬ್ಯಾಂಕ್‌ನೊಂದಿಗೆ ಅಕ್ರಮ ಒಳ ಒಪ್ಪಂದ ಮಾಡಿಕೊಂಡ ಸುರಭಿ ಚಿಟ್ಸ್‌ ಲಿಮಿಟೆಡ್‌, ತಮ್ಮ ಕಡೆಯವರಿಗೆ ಬ್ಯಾಂಕ್‌ನಿಂದ ಕೋಟ್ಯಂತರ ರು. ಸಾಲ ಕೊಡಿಸಿದ್ದಾರೆ. ಸಾಲ ಪಡೆದು ಸುಸ್ತಿದಾರ ಆಗಿದ್ದರೂ ಅದೇ ಅರ್ಜಿದಾರರಿಗೆ ಕೇವಲ ಜೆರಾಕ್ಸ್‌ ದಾಖಲೆಗಳನ್ನು ಸಲ್ಲಿಸಿ ಸಾಲ ಕೊಡಿಸಿದ್ದು, ಈವರೆಗೂ ಅದು ಮರುಪಾವತಿಯಾಗಿಲ್ಲ. ಈ ಸರುಭಿ ಚಿಟ್ಸ್‌ ಫಂಡ್‌್ಸ ಕಡೆಯಿಂದಲೇ ಸುಮಾರು .20 ಕೋಟಿ ವಂಚನೆಯಾಗಿರುವುದು ತನಿಖೆಯಲ್ಲಿ ಬಯಲಾಗಿದೆ.

Follow Us:
Download App:
  • android
  • ios