ಎಎಸ್‌ಐ ಮನೆ ಮೇಲೆಯೇ ದರೋಡೆಕೋರರು ದಾಳಿ ನಡೆಸಿ ಮನೆ ಮಂದಿ ಮೇಲೆ ಗುಂಡು ಹಾರಿಸಿ ಲಕ್ಷಾಂತರ ರು, ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಬುಧವಾರ ನಡೆದಿದೆ. 

ಚಿಕ್ಕಬಳ್ಳಾಪುರ (ನ.10): ಎಎಸ್‌ಐ ಮನೆ ಮೇಲೆಯೇ ದರೋಡೆಕೋರರು ದಾಳಿ ನಡೆಸಿ ಮನೆ ಮಂದಿ ಮೇಲೆ ಗುಂಡು ಹಾರಿಸಿ ಲಕ್ಷಾಂತರ ರು, ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಬುಧವಾರ ನಡೆದಿದೆ. ಪೆರೇಸಂದ್ರದ ಗ್ರಾಮದ ಗುಡಿಬಂಡೆ ರಸ್ತೆಯಲ್ಲಿನ ಮಂಜುನಾಥ ಕಲ್ಯಾಣ ಮಂಟಪದ ಬಳಿ ವಾಸ ಇದ್ದ ಎಎಸ್‌ಐ ನಾರಾಯಣಸ್ವಾಮಿ ಎಂಬುವರ ಮನೆಗೆ ನುಗ್ಗಿರುವ ಐದು ಮಂದಿ ದರೋಡೆಕೋರರು, ದರೋಡೆಗೆ ಯತ್ನಿಸಿದ್ದು ಕುಟುಂಬಸ್ಥರು ಅಡ್ಡಿಪಡಿಸಿದಾಗ ಬಂದೂಕಿನಿಂದ ಗುಂಡು ಹಾರಿಸಿ ಬೆದರಿಸಿ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

Add Asianetnews Kannada as a Preferred SourcegooglePreferred

ಎಎಸ್ಸೈ ಪುತ್ರನಿಗೆ ತಗುಲಿದ ಗುಂಡು: ನಾರಾಯಣಸ್ವಾಮಿ ಮನೆಯ ದರೋಡೆ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು ಈ ವೇಳೆ ಎಎಸ್‌ಐ ನಾರಾಯಣಸ್ವಾಮಿ ಪುತ್ರ ಶರತ್‌ ಎಂಬುವರ ಸೊಂಟಕ್ಕೆ ಗುಂಡು ತಗಲಿ ಗಾಯವಾಗಿದೆ. ಅದೃಷ್ಟವಶಾತ್‌ ಆತ ಪ್ರಾಣ ಪಾಯದಿಂದ ಪಾರಾಗಿದ್ದಾನೆಂದು ಪೊಲೀಸ್‌ ಮೂಲಗಳು ತಿಳಿಸಿವೆ. ಗಾಯಗೊಂಡಿರುವ ಶರತ್‌ನನ್ನು ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ನಾರಾಯಣಸ್ವಾಮಿ ಮೇಲೆಯೂ ದರೋಡೆಕೋರರು ಹಲ್ಲೆ ನಡೆಸಿದ್ದು ಸಣ್ಣಪುಟ್ಟಗಾಯಗಳಾಗಿವೆ. ಅವರನ್ನು ಕೂಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದು ಅವಮಾನ: ವಿದ್ಯಾರ್ಥಿ ಆತ್ಮಹತ್ಯೆ

ನಾರಾಯಣಸ್ವಾಮಿ ಎಎಸ್‌ಐ ಆಗಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಮೂಲಗಳು ಕನ್ನಡಪ್ರಭಗೆ ತಿಳಿಸಿವೆ. ದರೋಡೆಕೋರರು ಸಾಕಷ್ಟುಪೂರ್ವನಿಯೋಜಿತವಾಗಿ ಎಎಸ್‌ಐ ಮನೆ ದರೋಡೆಗೆ ಸಂಚು ರೂಪಿಸಿದ್ದಂತೆ ಕಂಡು ಬಂದಿದ್ದು ಮನೆಗೆ ಸುತ್ತಲೂ ಸಿಸಿ ಕ್ಯಾಮರಾ ಹಾಕಲಾಗಿತ್ತಾದರೂ ಮನೆ ದೋಚಿದ ಬಳಿಕ ದರೋಡೆಕೋರರು ಸಿಸಿ ಕ್ಯಾಮರಾ ಸ್ಟೋರ್‌ ಮಾಡುವ ಡಿವಿಆರ್‌ ಸಮೇತ ಕಿತ್ತು ಅಲ್ಲಿಂದ ಪರಾರಿಯಾಗಿದ್ದಾರೆ. ಒಟ್ಟು 5 ಮಂದಿ ಎನ್ನಲಾಗಿದ್ದು ಹಿಂದಿ, ಕನ್ನಡ ಭಾಷೆ ಎರಡು ಮಾತನಾಡುತ್ತಿದ್ದರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಸಿಲಿಕಾನ್‌ ಸಿಟಿಯಲ್ಲಿ ಮತ್ತೊಂದು ಬ್ಯಾಂಕ್‌ ಧೋಖಾ: ಐವರ ಬಂಧನ

ಎಸ್ಪಿ, ಡಿವೈಎಸ್‌ಪಿ ಭೇಟಿ: ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌, ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್‌ಪಿ ವಿ.ಕೆ.ವಾಸುದೇವ್‌ ತೆರಳಿ ಪರಿಶೀಲಿಸಿದ್ದಾರೆ. ಬಳಿಕ ಗಾಯಗಳು ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾಸ್ಪತ್ರೆಗೆ ಆಗಮಿಸಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ದರೋಡೆ ಪ್ರಕರಣದ ಬಗ್ಗೆ ಪೆರೇಸಂದ್ರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.