ಎಸಿಸಿ ಸಿಮೆಂಟ್‌ ಕಾರ್ಖಾನೆ ಆಡಳಿತ ಮಂಡಳಿಯ ವಿಆರ್‌ಎಸ್‌ ಕಿರುಕುಳಕ್ಕೆ ಬೇಸತ್ತು ಇಂಜಿನಿಯರ್‌ ಆತ್ಮಹತ್ಯೆ, ಸ್ವಯಂ ನಿವೃತ್ತಿ ಘೋಷಿಸಿ, ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕುತ್ತೇವೆಂದು ಆಡಳಿತ ಮಂಡಳಿಯಿಂದ ನಿರಂತರ ಒತ್ತಡ, ಸಾಯುವ ಮುನ್ನ 7 ನಿಮಿಷದ ವಿಡಿಯೋ, ಕಂಪನಿ ವಿರುದ್ಧ ಕ್ರಮ, ಸಾವಿಗೆ ನ್ಯಾಯ ಕೋರಿದ ಇಂಜಿನಿಯರ್‌ ಪವಾರ್‌. 

ಕಲಬುರಗಿ/ವಾಡಿ(ಡಿ.08):  ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿರುವ ಅದಾನಿ ಒಡೆತನದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ಇಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ರಮೇಶ್ ಪವಾರ್ (45) ಕಂಪನಿ ಆಡಳಿತ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.7ರ ಗುರುವಾರ ಎಸಿಸಿ ಸಿಮೆಂಟ್‌ ಕಂಪನಿಯ ಕಾಲೋನಿಯಲ್ಲಿ ನಡೆದಿದೆ. ಮೃತ ರಮೇಶ ಪವಾರ್‌ ಇವರು ಚಿತ್ತಾಪುರ ಮತಕ್ಷೇತ್ರದ ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕ್‌ ಇವರ ಅಳಿಯಂದಿರಾಗಿದ್ದಾರೆ.

Add Asianetnews Kannada as a Preferred SourcegooglePreferred

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಎಸಿಸಿ ಆಡಳಿತ ಕಾರ್ಮಿಕರನ್ನು ವಿಆರ್‌ಎಸ್ (ಸ್ವಯಂ ನಿವೃತ್ತಿ) ಹೆಸರಿನಲ್ಲಿ ಕೆಲಸದಿಂದ ತೆಗೆದ ಹಾಕುತ್ತಿದ್ದು, ಇಂಜಿನಿಯರಗಳೂ ಕೂಡ ಸ್ವಯಂ ನಿವೃತ್ತಿ ಹೊಂದುವಂತೆ ಆಗ್ರಹಿಸುತ್ತಿದ್ದಾರೆ.
ಸ್ವಯಂ ನಿವೃತ್ತಿ ಘೋಷಿಸಬೇಕು, ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕಲಾಗುವುದು ಎಂಬ ಒತ್ತಡ ಎಸಿಸಿ ಆಡಳಿತ ಮಂಡಳಿಯಿಂದ ಬರುತ್ತಿತ್ತು. ಕೆಲಸ ಕಳೆದು ಕಳೆದುಕೊಳ್ಳುವ ಭೀತಿಯಲ್ಲಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಇಂಜಿನಿಯರ್‌ ರಮೇಶ ಪವಾರ್‌ ಡೆತ್‌ನೋಟ್‌ನಲ್ಲಿ ಹೇಳಿದ್ದಾರೆ.

ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

ತಮ್ಮ ಸಾವಿಗೆ ಎಸಿಸಿ ಘಟಕ ವ್ಯವಸ್ಥಾಪಕ ಮತ್ತು ಎಚ್ಆರ್ ವಿಭಾಗದ ವಿವಿಧ ಅಧಿಕಾರಿಗಳು ಕಾರಣ ಎಂದು ರಮೇಶ್ ಪವಾರ್ ತಮ್ಮ ಡೆತ್ ನೋಟ್ ನಲ್ಲಿ ಅಧಿಕಾರಿಗಳ ಹೆಸರುಗಳ ಸಮೇತ ಬರೆದಿಟ್ಟಿದ್ದಾರೆ. ಅಲ್ಲದೇ ಸಾಯುವ ಮುನ್ನ 7.11 ನಿಮಿಷದ ವಿಡಿಯೋ ಮಾಡುವ ಮೂಲಕ ಎಸಿಸಿ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ನನ್ನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಕ್ಷೇತ್ರದ ಶಾಸಕ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಮನವಿ ಮಾಡಿದ್ದಾರೆ.

ಕಳೆದ 26 ವರ್ಷದಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದದ ರಮೇಶ ಪವಾರ್‌ ಅಲ್ಲಿನ ಕಾರ್ಮಿಕರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದರು, ಇದು ಸ್ಥಳೀಯವಾಗಿರುವ ಕಂಪನಿಯ ಆಡಳಿತ ಮಂಡಳಿಗೆ ನುಂಗಲಾರದ ತುತ್ತಾಗಿತ್ತು, ಎಸಿಸಿ ಆಡಳಿತ ಕಳೆದ 2 ವರ್ಷದಿಂದ ಸ್ವಯಂ ನಿವೃತ್ತಿ ಯೋಜನೆಯಡಿಯಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲು ಶುರು ಮಾಡಿತ್ತು. ಈ ವಿಆರ್‌ಎಸ್‌ ಅಸ್ತ್ರದ ವಿರುದ್ಧವೂ ತಾವು ಧ್ವನಿ ಎತ್ತಿದ್ದೇ ನನ್ನ ವಿರುದ್ಧ ಕಂಪನಿಯ ಕಿರುಕುಳ ಶುರುವಾಯ್ತು ಎಂದು ರಮೇಶ ಪವಾರ್‌ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಹಾಗೂ ವಿಡಿಯೋದಲ್ಲಿ ವಿವರ ನೀಡಿದ್ದಾರೆಂದು ಗೊತ್ತಾಗಿದೆ.

ಬೆಂಗಳೂರು: ಮನೆ ಬಿಟ್ಟು ಓಡಿ ಬಂದು ಮದುವೆಯಾಗಿದ್ದ ಯುವತಿ ಆತ್ಮಹತ್ಯೆ, ಕಾರಣ ನಿಗೂಢ?

ವಾಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಎಸಿಸಿ ಕಂಪನಿಯ ನೂರಾರು ಜನ ಕಾರ್ಮಿಕರು ಸೇರಿದ್ದು ಕಂಪನಿಯ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾವಿಗೆ ಕಾರಣರಾದ ಎಸಿಸಿ ಕಂಪೆನಿಯ ಅಧಿಕಾರಿಗಳನ್ನು ಬಂಧಿಸುವವರೆಗೂ ಶವ ಸಂಸ್ಕಾರ ಮಾಡಲು ಬಿಡೋದಿಲ್ಲವೆಂದೂ ಕೋಪದಲ್ಲಿರುವ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ಈ ಘಟನೆಯಿಂದಾಗಿ ಸಿಮೆಂಟ್‌ ನಗರ ವಾಡಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದೆ, ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.