Chitradurga News: ವೃದ್ಧನ ಕೊಲೆ ಮಾಡಿ ಬೈಕ್ ಸಮೇತ ಭದ್ರಾ ಚಾನಲ್‌ಗೆ ಎಸೆದು ಆಕ್ಸಿಡೆಂಟ್ ಎಂದು ಬಿಂಬಿಸಲು ಯತ್ನಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿತ್ರದುರ್ಗ (ಜು. 17): ವೃದ್ಧನ ಕೊಲೆ ಮಾಡಿ ಬೈಕ್ ಸಮೇತ ಭದ್ರಾ ಚಾನಲ್‌ಗೆ ಎಸೆದು ಆಕ್ಸಿಡೆಂಟ್ ಎಂದು ಬಿಂಬಿಸಲು ಯತ್ನಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದ ಕೂದಲಳತೆ ದೂರದಲ್ಲಿರುವ ಹೊಸದುರ್ಗ ರೋಡ್ ನಗರದ ನಿವಾಸಿ ಕೀರ್ತಿರಾಜ್ (60) ಮೃತ ವ್ಯಕ್ತಿ. ಕೀರ್ತಿರಾಜ್ ಆರೋಪಿ ಮಾತು ಕೇಳಿ ಮನಿ ಡಬ್ಲಿಂಗ್ ಆಸೆಗೆ ಬಿದ್ದು ಇದೇ ತಿಂಗಳ 2ನೇ ತಾರೀಖು ಹೊಸದುರ್ಗ ತಾಲ್ಲೂಕಿನ ಬಳ್ಳೆಕೆರೆ ಮತ್ತು ಕಬ್ಬಿನಗೆರೆ ಗ್ರಾಮದ ಮಧ್ಯೆ ಇರುವ ಭದ್ರಾ ಚಾನೆಲ್ ಬಳಿ ಮಾತುಕತೆಗೆ ತೆರಳಿದ್ದರು. 

ಆದರೆ ಅಲ್ಲಿ ಆರೋಪಿ ಹಾಗೂ ಕೀರ್ತಿರಾಜ್ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದಿದ್ದು ಆರೋಪಿ ನವೀನ್, ಶಿವಣ್ಣ ಇಬ್ಬರು ಸೇರಿ ವೃದ್ದನನ್ನು ಕೊಲೆ ಮಾಡಿದ್ದರು. ಯಾವುದೇ ಅನುಮಾನ ಬರಬಾರದು ಎಂದು ಆಕ್ಸಿಡೆಂಟ್ ರೀತಿ ಬಿಂಬಿತವಾಗಲಿ ಎಂದು ಅಲ್ಲೇ ಹತ್ತಿರದಲ್ಲಿದ್ದ ಭದ್ರಾ ಚಾನಲ್‌ಗೆ ವೃದ್ಧನನ್ನು ಬೈಕ್ ಸಮೇತ ತಳ್ಳಿದ್ದರು. ಆದರೆ ಆರೋಪಿಗಳು ಮೃತ ವ್ಯಕ್ತಿಯ ಎಟಿಎಂ ಕದ್ದು ಪರಾರಿಯಾಗಿದ್ದರು. 

ಅನುಮಾನಸ್ಪದ ಸಾವು ಕೇಸ್ ದಾಖಲಿಸಿದ್ದ ಹೊಸದುರ್ಗ ಪೊಲೀಸರು ತನಿಖೆ ಚುರುಕುಗೊಳಿಸಿದಾಗ, ಎಟಿಎಂನಲ್ಲಿ ಬೇರೆ ಬೇರೆ ಕಡೆ ಹಣ ಡ್ರಾ ಆಗಿದ್ದನ್ನು ಪರಿಶೀಲಿಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ನವೀನ್, ನಾಗರಾಜ್, ನಾಗರಾಜಪ್ಪ, ಲೋಕೇಶ್ ನಾಲ್ವರು ಆರೋಪಿಗಳು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಇದನ್ನೂ ಓದಿ: ಮಾಜಿ ಪ್ರೇಯಸಿ ಮನೆ ಬಳಿ ಗಲಾಟೆ ಮಾಡಿದ್ದವನ ಕೊಲೆ!

ಈ ಕೇಸ್ ಗೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಸಾಕು ಮಗಳು ಅಲಿಯಾಸ್ ಅವರ ಅಕ್ಕನ ಮಗಳೇ ಇವರ ಪೋಷಣೆ ಮಾಡುತ್ತಿದ್ದರು. ಆದ್ರೆ ವಯಸ್ಸಾಗಿರೋ ಮೃತ ವ್ಯಕ್ತಿ ಹೊಸದುರ್ಗ ರೋಡ್ ನಲ್ಲಿಯೇ ಮನೆ ಕಟ್ಟಿ ಇಬ್ಬರೂ ಅಲ್ಲಿಗೇ ಶಿಫ್ಟ್ ಆಗೋಣ ಎಂದು ಹೇಳುತ್ತಿದ್ದರು. 

"ಕೊಲೆಯಾಗುವ ಕೊನೆಯ ದಿನವೂ ನನ್ನ ಜೊತೆಯಲ್ಲಿಯೇ ಕಾಲ್ ಮಾಡಿ ಮಾತನಾಡಿದ್ದರು. ಆದ್ರೆ ಮರು ದಿನ ಅವರಿಗೆ ಆಕ್ಸಿಡೆಂಟ್ ಆಗಿದೆ ಎಂದು ಆಸ್ಪತ್ರೆಯಿಂದ ಕಾಲ್ ಬಂದ ಕೂಡಲೇ ನಾನು ತೆರಳಿದ್ದೆ" ಎಂದು ಮೃತರ ಸಾಕು ಮಗಳು ತಿಳಿಸಿದ್ದಾರೆ. 

ಇದನ್ನೂ ಓದಿ: ರಾಮನಗರದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಗೃಹಣಿಯ ಕೊಲೆ

"ನನಗೆ ಆ ಸಾವಿನ ಬಗ್ಗೆ ಅನುಮಾನವಿತ್ತು, ಆದ್ದರಿಂದ ಪೊಲೀಸರಿಗೆ ಕೊಲೆ ಶಂಕೆ ಕೇಸ್ ದಾಖಲಿದ್ದೆ‌. ಅದರ ಪರಿಣಾಮವಾಗಿ ಹೊಸದುರ್ಗ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಗೆ ಹೆಡೆಮುರಿಕಟ್ಟಿದ್ದಾರೆ, ಅವರ ಸೇವೆ ಶ್ಲಾಘನೀಯ. ಇಡೀ ಊರಿನಲ್ಲಿಯೇ ಉತ್ತಮ ಹೆಸರು ಇಟ್ಟುಕೊಂಡು ಜೀವನ ಮಾಡುತ್ತಿದ್ದರು. ಅಂತವರಿಗೆ ಕಿರಾತಕರು ಈ ರೀತಿ ಮೋಸ ಮಾಡಿ ಕೊಲೆ ಮಾಡಿರೋದು ಖಂಡನೀಯ. ಇಂತಹ ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಬೇಕು, ಕಠಿಣ ಶಿಕ್ಷೆಯಾಗಿ ಅವರು ಯಾವತ್ತೂ ಜೈಲಿನಿಂದ ಹೊರಗೆ ಬರಬಾರದು" ಎಂದು ಮೃತರ ಸಾಕು ಮಗಳು ಆಗ್ರಹಿಸಿದ್ದಾರೆ.