ನರಗುಂದ ಪಟ್ಟಣದಲ್ಲಿ ನಡೆದಿದ್ದ ಗಲಾಟೆ ಹಾಗೂ ಚಾಕು ಇರಿತ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಸಿಪಿಐ ನಂದೇಶ್ವರ ಕುಂಬಾರ್ ಅವರನ್ನು ಅಮಾನತು ಮಾಡಲಾಗಿದೆ. ಬೆಳಗಾವಿಯ ಉತ್ತರ ವಲಯ ಐಜಿಪಿ ಎನ್ ಸತೀಶ್ ಕುಮಾರ್ ಅಮಾನತು ಆದೇಶವನ್ನು ಹೊರಡಿಸಿದ್ದಾರೆ.

ಗದಗ (ಜ.30): ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದ್ದ ಗಲಾಟೆ ಹಾಗೂ ಚಾಕು ಇರಿತ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಸಿಪಿಐ ನಂದೇಶ್ವರ ಕುಂಬಾರ್ (CPI Nandeshwara Kumbara) ಅವರನ್ನು ಅಮಾನತು (Suspend) ಮಾಡಲಾಗಿದೆ. ಬೆಳಗಾವಿಯ ಉತ್ತರ ವಲಯ ಐಜಿಪಿ ಎನ್ ಸತೀಶ್ ಕುಮಾರ್ (N Satish Kumar) ಅಮಾನತು ಆದೇಶವನ್ನು ಹೊರಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಜನವರಿ 17 ರಂದು ನರಗುಂದ ಪಟ್ಟಣದಲ್ಲಿ ನಡೆದಿದ್ದ ಗಲಾಟೆ ಹಾಗೂ ಚಾಕು ಇರಿತದಲ್ಲಿ ಶಮೀರ್ ಶಹಪುರ ಎಂಬಾತನ ಹತ್ಯೆಯಾಗಿತ್ತು. ಮಾತ್ರವಲ್ಲದೇ ಶಮ್ ಶೇರ್ ಖಾನ್ ಎಂಬಾತನಿಗೆ ಗಂಭೀರ ಗಾಯವಾಗಿತ್ತು. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ ಬಂಧನವಾದರೂ ಪೊಲೀಸ್ ವೈಫಲ್ಯದ ಹಿನ್ನೆಲೆಯಲ್ಲಿ ಗಲಾಟೆ ನಡೆದ ಬಗ್ಗೆ ಆರೋಪವಿತ್ತು. ಹಾಗಾಗಿ ಸಿಪಿಐ ನಂದೇಶ್ವರ ಕುಂಬಾರ್ ಅವರನ್ನು ಅಮಾನತು ಮಾಡಲಾಗಿದೆ. 

ಪೊಲೀಸರ ವೈಫಲ್ಯವೇ ಕಾರಣ: ಪೊಲೀಸರ ವೈಫಲ್ಯದಿಂದ ಮುಸ್ಲಿಂ ಯುವಕನ ಕೊಲೆ ನಡೆದಿದೆ. ಇದನ್ನು ವಿಧಾನಸಭೆ ಅಧಿವೇಶನದಲ್ಲಿ ಸಮಗ್ರ ಚರ್ಚೆಗೆ ಒತ್ತಾಯಿಸುವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ಇತ್ತೀಚೆಗೆ ಕೊಲೆಯಾದ ಮುಸ್ಲಿಂ ಯುವಕ ಸಮೀರ ಶಹಪೂರನ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರನ್ನು ಸಂತೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾದ ಯುವಕನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಲು ಅಧಿವೇಶನದಲ್ಲಿ ಆಗ್ರಹಿಸಲಾಗುವುದು. 

Muslim Youth's Murder: ಗೃಹ ಸಚಿವ ಆರಗ ರಾಜೀನಾಮೆಗೆ SDPI ಆಗ್ರಹ

ಪ್ರಕರಣದ ಕುರಿತು ಗದಗ ಎಸ್ಪಿಯೊಂದಿಗೆ ಮಾತನಾಡಿದ್ದೇನೆ. ಇದಕ್ಕೆ ಪೊಲೀಸರ ವೈಫಲ್ಯವೇ ಆಗಿದೆ ಎಂದು ತಿಳಿಸಿದ್ದೇನೆ. ಇದರಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಸರ್ಕಾರಕ್ಕೆ ಒತ್ತಾಯಿಸುವೆ. ಜತೆಗೆ ಯಾವುದಾದರೂ ತನಿಖಾ ಸಂಸ್ಥೆಯಿಂದ ಅಥವಾ ಸಿಬಿಐಗೆ ವಹಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆಡಳಿತ ಪಕ್ಷ ಬಿಜೆಪಿ ಬಜರಂಗದಳ, ಸಂಘ ಪರಿವಾರವನ್ನು ಪ್ರೋತ್ಸಾಹಿಸುತ್ತಿರುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಘಟನೆ ನಡೆಯಲು ಪ್ರಚೋದನೆ ನೀಡಿದವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. 

ಈ ರೀತಿ ಘಟನೆಗಳು ಮರುಕಳಿಸದಂತೆ ಪೊಲೀಸ್‌ ಇಲಾಖೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು. ಈ ಯುವಕನ ಮನೆಗೆ ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಾದ ಸಿ.ಸಿ. ಪಾಟೀಲ ಭೇಟಿ ನೀಡಬೇಕಿತ್ತು. ಭೇಟಿ ನೀಡದೇ ಇರುವುದು ರಾಜ್ಯ ಸರ್ಕಾರದ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ತಂದೆಗೆ ಸಾಂತ್ವನ: ಯುವಕನ ತಂದೆ ಸುಬಾನಸಾಬನ್ನು ಸಂತೈಸಿ ಯುವಕನ ಬಗ್ಗೆ ಮಾಹಿತಿ ಪಡೆದರು. ನಂತರ ಎಸ್ಪಿಗೆ ಪೋನ್‌ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದರು. ಸ್ಥಳೀಯ ಪೊಲೀಸರು ಏಕೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರು. ಕೂಡಲೇ ಕ್ರಮಕ್ಕೆ ಆಗ್ರಹಿಸಿದರು.

Murder Case: ಹಳೆ ವೈಷಮ್ಯಕ್ಕೆ ಯುವಕನ ಬಲಿ: ನರ​ಗುಂದ​ದಲ್ಲಿ ಬಿಗು​ವಿನ ವಾತಾ​ವ​ರಣ

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಿ.ಆರ್‌. ಯಾವಗಲ್‌, ಎನ್‌.ಎಚ್‌. ಕೋನರಡ್ಡಿ, ವಿಧಾನಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ, ರಾಜು ಕಲಾಲ, ಡಾ. ಸಂಗಮೇಶ ಕೊಳ್ಳಿಯವರ, ಸಿಕಂದರ ಪಠಾಣ, ಸಮದ್‌ ಮುಲ್ಲಾ, ಪ್ರವೀಣ ಯಾವಗಲ್‌, ಗುರಪಾದಪ್ಟ, ಕೃಷ್ಣಾ ಗೊಂಬಿ, ಖಲೀಫ, ಡಿ.ಎಂ. ನಾಯ್ಕರ. ದಾವಲ್‌ ಹೂಲಿ, ಸಾಠೆ, ಶಿವಾನಂದ ಬನಹಟ್ಟಿ, ಎಂ.ಎಂ. ಜಾವೂರ ಮುಸ್ಲಿಂ ಸಮಾಜದ ಹಿರಿಯರು, ಕಾಂಗ್ರೆಸ್‌ ಮುಖಂಡರಿದ್ದರು.