ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಸುತ್ತ 8 ಕಿ.ಮೀ ವ್ಯಾಪ್ತಿಯನ್ನು ಡಿಜಿಸಿಎ 'ರೆಡ್ ಝೋನ್' ಎಂದು ಘೋಷಿಸಿದ್ದು, ಡ್ರೋಣ್ ಹಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಬೆಳಗಾವಿ (ಮಾ.05): ಕುಂದಾನಗರಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇನ್ಮುಂದೆ ಸಾಂಬ್ರಾ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವನ್ನು 'ರೆಡ್ ಝೋನ್' (Red Zone) ಎಂದು ಘೋಷಿಸಲಾಗಿದ್ದು, ಯಾವುದೇ ರೀತಿಯ ದ್ರೋಣ್ ಅಥವಾ ಮಾನವರಹಿತ ವೈಮಾನಿಕ ವಾಹನಗಳ (UAV) ಹಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

Add Asianetnews Kannada as a Preferred SourcegooglePreferred

8 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿರ್ಬಂಧ:

ಡಿಜಿಸಿಎ ನಿಯಮಾವಳಿಗಳ ಪ್ರಕಾರ, ವಿಮಾನ ನಿಲ್ದಾಣದ ಕೇಂದ್ರ ಬಿಂದುವಿನಿಂದ ಸುತ್ತಲೂ 8 ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ವಲಯ ಎಂದು ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳು, ಫೋಟೋಗ್ರಾಫರ್‌ಗಳು ಅಥವಾ ಯಾವುದೇ ಸಂಸ್ಥೆಗಳು ಅನುಮತಿಯಿಲ್ಲದೆ ಡ್ರೋಣ್‌ಗಳನ್ನು ಹಾರಿಸುವಂತಿಲ್ಲ. ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗಬಾರದು ಮತ್ತು ಭದ್ರತಾ ಲೋಪ ಉಂಟಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಮಿಷನರ್ ಭೂಷಣ್ ಬೋರಸೆ ಎಚ್ಚರಿಕೆ:

ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಈ ಬಗ್ಗೆ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. 'ವಿಮಾನ ನಿಲ್ದಾಣದ ಭದ್ರತೆ ನಮಗೆ ಅತ್ಯಂತ ಮುಖ್ಯ. ಡ್ರೋಣ್ ಹಾರಾಟಕ್ಕೆ ವಿಧಿಸಲಾಗಿರುವ ಈ ನಿಷೇಧವನ್ನು ಯಾರಾದರೂ ಉಲ್ಲಂಘಿಸಿದರೆ, ಅಂತಹವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನಧಿಕೃತವಾಗಿ ಡ್ರೋಣ್ ಹಾರಾಟ ನಡೆಸುವವರ ಉಪಕರಣಗಳನ್ನು ವಶಪಡಿಸಿಕೊಳ್ಳುವುದಲ್ಲದೆ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು' ಎಂದು ಅವರು ತಿಳಿಸಿದ್ದಾರೆ.

ಏನಿದು ರೆಡ್ ಝೋನ್? ಉಲ್ಲಂಘನೆಯಾದ್ರೆ ಏನಾಗುತ್ತೆ?

ನಾಗರಿಕ ವಿಮಾನಯಾನ ಸಚಿವಾಲಯದ ದ್ರೋಣ್ ನಿಯಮಗಳ ಪ್ರಕಾರ, ವಿಮಾನ ನಿಲ್ದಾಣದಂತಹ ಸೂಕ್ಷ್ಮ ಪ್ರದೇಶಗಳನ್ನು ರೆಡ್ ಝೋನ್ ಎಂದು ಕರೆಯಲಾಗುತ್ತದೆ. ಇಲ್ಲಿ ದ್ರೋಣ್ ಹಾರಾಟ ನಡೆಸಲು ಕೇಂದ್ರ ಸರ್ಕಾರದ ವಿಶೇಷ ಅನುಮತಿ ಅಗತ್ಯವಿರುತ್ತದೆ. ಒಂದು ವೇಳೆ ಸಾರ್ವಜನಿಕರು ಮದುವೆ, ಸಮಾರಂಭ ಅಥವಾ ವೈಯಕ್ತಿಕ ಫೋಟೋಶೂಟ್‌ಗಳಿಗಾಗಿ ಈ 8 ಕಿ.ಮೀ ವ್ಯಾಪ್ತಿಯಲ್ಲಿ ದ್ರೋಣ್ ಬಳಸಿದರೆ, ಅದು ವಾಯುಯಾನ ಸುರಕ್ಷತಾ ಕಾಯ್ದೆಯಡಿ ದೊಡ್ಡ ಅಪರಾಧವಾಗುತ್ತದೆ.

ಸಾರ್ವಜನಿಕರಲ್ಲಿ ಮನವಿ:

ಸಾಂಬ್ರಾ ವಿಮಾನ ನಿಲ್ದಾಣವು ಕೇವಲ ಪ್ರಯಾಣಿಕರಿಗಷ್ಟೇ ಅಲ್ಲದೆ, ವಾಯುಪಡೆಯ ತರಬೇತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಡ್ರೋಣ್ ತಂತ್ರಜ್ಞಾನ ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ವಹಿಸಲಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲ ಗ್ರಾಮಸ್ಥರು ಮತ್ತು ನಗರದ ನಾಗರಿಕರು ಈ ನಿಯಮವನ್ನು ಗೌರವಿಸಬೇಕು ಹಾಗೂ ಭದ್ರತಾ ಕಾರ್ಯಕ್ಕೆ ಸಹಕರಿಸಬೇಕು ಎಂದು ಪೊಲೀಸ್ ಇಲಾಖೆ ಕೋರಿದೆ.