ಛತ್ತೀಸ್‌ಗಢದ ಶಾಲೆಯೊಂದರಲ್ಲಿ ಮಕ್ಕಳಿಗೆ ನಾಯಿ ತಿಂದು ಉಳಿದ ಆಹಾರವನ್ನು ಮಧ್ಯಾಹ್ನದ ಊಟದಲ್ಲಿ ಬಡಿಸಿದ ಆರೋಪ. 78 ವಿದ್ಯಾರ್ಥಿಗಳಿಗೆ ರೇಬೀಸ್ ಚುಚ್ಚುಮದ್ದು ನೀಡಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.

ಛತ್ತೀಸ್‌ಗಢದ ಬಲೋದಬಜಾರ್ ಜಿಲ್ಲೆಯ ಪಲಾರಿ ಬ್ಲಾಕ್‌ನ ಲಚನ್‌ಪುರ ಗ್ರಾಮದ ಸರ್ಕಾರಿ ಮಧ್ಯಮ ಶಾಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲೆಯ ಮಕ್ಕಳಿಗೆ ಬೀದಿ ನಾಯಿಗಳು ತಿಂದುಳಿದ ಆಹಾರವನ್ನು ಮಧ್ಯಾಹ್ನದ ಬಿಸಿಯೂಟದಲ್ಲಿ ಬಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಘಟನೆಯಿಂದ 78 ವಿದ್ಯಾರ್ಥಿಗಳಿಗೆ ರೇಬೀಸ್ ವಿರೋಧಿ ಇಂಜೆಕ್ಷನ್ ನೀಡಲಾಗಿದೆ.

Add Asianetnews Kannada as a Preferred SourcegooglePreferred

ಜುಲೈ 29, 2025ರಂದು, ಜೈ ಸ್ವಸಹಾಯ ಗುಂಪಿನ ಮಹಿಳೆಯರು ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಊಟ ತಯಾರಿಸುತ್ತಿದ್ದಾಗ, ಬೀದಿ ನಾಯಿಗಳು ಆಹಾರವನ್ನು ತಿಂದು ಕೊಳಕುಗೊಳಿಸಿದ್ದವು. ಕೆಲವು ಮಕ್ಕಳು ಈ ವಿಷಯವನ್ನು ಶಿಕ್ಷಕರಿಗೆ ತಿಳಿಸಿದರೂ, ನಿರ್ಲಕ್ಷ್ಯ ಮಾಡಿ ಶಿಕ್ಷಕರು ಆಹಾರ ಬಡಿಸದಂತೆ ಸೂಚಿಸಿದ್ದರು. ಅದರಂತೆ ಆಹಾರ ಶುದ್ಧವಾಗಿದೆ ಎಂದು ಹೇಳಿ, ಸ್ವಸಹಾಯ ಗುಂಪಿನ ಮಹಿಳೆಯರು 84 ಮಕ್ಕಳಿಗೆ ನಾಯಿ ತಿಂದು ಬಿಟ್ಟ ತರಕಾರಿಗಳನ್ನು ಬಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೋಷಕರ ಆಕ್ರೋಶ :

ಮಕ್ಕಳು ಈ ವಿಷಯವನ್ನು ಕುಟುಂಬ ಸದಸ್ಯರಿಗೆ ತಿಳಿಸಿದ ನಂತರ, ಪೋಷಕರು ಮತ್ತು ಗ್ರಾಮಸ್ಥರು ಶಾಲೆಗೆ ಧಾವಿಸಿದರು. ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ ನಂತರ, 78 ಮಕ್ಕಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ರೇಬೀಸ್ ವಿರೋಧಿ ಚುಚ್ಚುಮದ್ದು ನೀಡಲಾಯಿತು. ಈ ಘಟನೆಯ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರು ದಾಖಲಿಸಲಾಗಿದೆ.

ತನಿಖೆಗೆ ಆಗ್ರಹ:

ಸ್ಥಳೀಯ ಶಾಸಕ ಸಂದೀಪ್ ಸಾಹು ಅವರು ಘಟನೆಯ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿ, ಮುಖ್ಯಮಂತ್ರಿಗೆ ಪತ್ರ ಬರೆದು, ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ. ಶಾಲೆಗೆ ಭೇಟಿ ನೀಡಿ ಮಕ್ಕಳು ಮತ್ತು ಶಾಲಾ ಆಡಳಿತದೊಂದಿಗೆ ಮಾತನಾಡಿದ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಘಟನೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಎಸ್‌ಡಿಎಂ ದಿನೇಶ್ ನಿಕುಂಜ್, ಬಿಇಒ ನರೇಶ್ ವರ್ಮಾ ಸೇರಿದಂತೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಮಕ್ಕಳು, ಶಿಕ್ಷಕರು, ಕುಟುಂಬ ಸದಸ್ಯರು ಮತ್ತು ಗ್ರಾಮ ಸಮಿತಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಸ್ವಸಹಾಯ ಗುಂಪಿನ ಸದಸ್ಯರ ವಿಚಾರಣೆ ಇನ್ನೂ ಬಾಕಿಯಿದ್ದು, ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಸ್‌ಡಿಎಂ ತಿಳಿಸಿದ್ದಾರೆ.

ಈ ಘಟನೆಯಿಂದ ಶಾಲಾ ಆಡಳಿತದ ನಿರ್ಲಕ್ಷ್ಯ ಮತ್ತು ಮಕ್ಕಳ ಆರೋಗ್ಯದೊಂದಿಗೆ ರಾಜಿ ಮಾಡಿಕೊಂಡಿರುವ ಆರೋಪಗಳು ಕೇಳಿಬಂದಿವೆ. ಸಂಪೂರ್ಣ ತನಿಖೆಯ ನಂತರ ಸತ್ಯಾಂಶ ಬಯಲಾಗುವುದು ಎಂದು ನಿರೀಕ್ಷಿಸಲಾಗಿದೆ