ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಹೊನಗುಂಟಾ ಚಂದ್ರಲಾಂಬ ದೇವಾಲಯದಲ್ಲಿ ದುಷ್ಕರ್ಮಿಗಳು ದೇವಿಯ ಚಿನ್ನದ ತಾಳಿ ಮತ್ತು ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ. ಕಳ್ಳರ ಈ ಕೃತ್ಯವು ದೇವಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಹಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕಲಬುರಗಿ (ಅ.25): ದೇವಸ್ಥಾನದ ಬೀಗ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ದೇವಿಯ ಮೇಲಿದ್ದ ಚಿನ್ನಾಭರಣ ದೋಚಿದ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಹೊನಗುಂಟಾ ಚಂದ್ರಲಾಂಬ ದೇವಾಲಯದಲ್ಲಿ ನಡೆದಿದೆ.
ರಾತ್ರಿ ವೇಳೆ ನಾಲ್ಕೈದು ಜನರ ಗುಂಪು ಬೀಗ ಮುರಿದು ಒಳನುಗ್ಗಿದೆ. ಚಂದ್ರಲಾಂಬಾ ದೇವಿಯ ಮೈಮೇಲಿದ್ದ 20 ಗ್ರಾಂ ಚಿನ್ನದ ತಾಳಿ ಮತ್ತು ಹುಂಡಿಯಲ್ಲಿದ್ದ 20 ಸಾವಿರ ರೂ. ನಗದು ಕಳವು ಮಾಡಿದ್ದಾರೆ ಪರಾರಿಯಾಗಿದ್ದಾರೆ.
ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ:
ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳು ಕಳ್ಳರ ಕೈಚಳಕದ ಸಂಪೂರ್ಣ ಚಿತ್ರಣವನ್ನು ಸೆರೆಹಿಡಿದಿವೆ. ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದರು. ಅವರು ಬೀಗ ಮುರಿದು ಒಳನುಗ್ಗುವುದು, ದೇವಿಯ ಆಭರಣ ಕಿತ್ತುಕೊಳ್ಳುವುದು ಮತ್ತು ಹುಂಡಿ ಒಡೆದು ಹಣ ತೆಗೆದುಕೊಳ್ಳುವುದು ಎಲ್ಲವೂ ಸೆರೆಯಾಗಿದೆ. ಈ ದೃಶ್ಯಗಳು ಪೊಲೀಸರಿಗೆ ಮಹತ್ವದ ಸಾಕ್ಷ್ಯವಾಗಲಿವೆ.
ಪ್ರಕರಣ ದಾಖಲು
ದೇವಾಲಯದ ಅರ್ಚಕರು ಬೆಳಗ್ಗೆ ದೇವಾಲಯಕ್ಕೆ ಬಂದು ಈ ದುರ್ಘಟನೆಯನ್ನು ಗಮನಿಸಿ, ತಕ್ಷಣ ಶಹಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ಕಳ್ಳರನ್ನು ಹುಡುಕುವ ಕಾರ್ಯವನ್ನು ಆರಂಭಿಸಿದ್ದಾರೆ. ಈ ಘಟನೆಯಿಂದ ಚಂದ್ರಲಾಂಬಾ ದೇವಿಯ ಭಕ್ತರು ಆಘಾತಕ್ಕೊಳಗಾಗಿದ್ದಾರೆ. ಸ್ಥಳೀಯರು ದೇವಾಲಯದ ಭದ್ರತೆಯನ್ನು ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ತನಿಖೆ ಮುಂದುವರಿದಿದೆ.
