Bajrang Dal activist Harsha Murder: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ವಿಡಿಯೋ ಕಾಲ್ ಮಾಡಿ ಕುಟುಂಬಸ್ಥರೊಂದಿಗೆ ಮಾತನಾತನಾಡಿದ ವಿಷಯಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. 

ಬೆಂಗಳೂರು (ಜು. 08): ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ (Harsha Murder Case) ಆರೋಪಿಗಳು ವಿಡಿಯೋ ಕಾಲ್ (Video Call) ಮಾಡಿ ಕುಟುಂಬಸ್ಥರೊಂದಿಗೆ ಮಾತನಾತನಾಡಿದ ವಿಷಯಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಪರಪ್ಪನ ಅಗ್ರಹಾರದಲ್ಲಿರುವ (Parappana Agrahara) ಹರ್ಷ ಕೊಲೆ ಆರೋಪಿಗಳು ಜೈಲಿನಲ್ಲಿರುವ ಇಬ್ಬರು ವಿಚಾರಣಾಧೀನ ಖೈದಿಗಳಿಂದಲೇ ಮೊಬೈಲ್ ಪಡೆದಿರುವುದು ಬಹಿರಂಗವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿಹಾರ್, ಮಗ್ದುಬ್ ಎಂಬ ಇಬ್ಬರು ಖೈದಿಗಳು ಕೇಸ್ ಒಂದರಲ್ಲಿ ರಂಜಾನ್ ಹಬ್ಬದ ಸಮಯದಲ್ಲಿ ಅಂದರ್ ಆಗಿದ್ರು. ನಿಹಾರ್ ಬಳಿ ಇದ್ದ ಮೊಬೈಲನ್ನು ಮಗ್ದುಬ್ ಪಡೆದುಕೊಂಡಿದ್ದ. ಈ ವೇಳೆ ಮೊಬೈಲ್ ಕೊಡು ಕುಟುಂಬಸ್ಥರ ಜೊತೆ ಮಾತನಾಡಬೇಕು ಎಂದು ಹರ್ಷ ಕೊಲೆ ಆರೋಪಿಗಳು ಮಗ್ದಮ್ ನನ್ನು ಕೇಳಿದ್ದಾರೆ. 

ತಕ್ಷಣ ಹಿಂದೆ ಮುಂದೆ ನೋಡದೆ ಮಗ್ದುಮ್ ಕೊಲೆ ಆರೋಪಿಗಳಿಗೆ ಮೊಬೈಲ್ ನೀಡಿದ್ದಾನೆ. ಹೀಗಾಗಿ ಆರೋಪಿಗಳು ಮನೆಯವರಿಗೆ ಕರೆ ಮಾಡಿ ಮಾತನಾಡಿದ್ದರು. ಕೊಲೆ ಆರೋಪಿಗಳು ಕಾಲ್ ಮಾಡಿ ಮಾತನಾಡಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳು ಬಿಂದಾಸ್ ಜೀವನ ನಡೆಸುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿತ್ತು. ಹೀಗಾಗಿ ಪರಪ್ಪನ ಅಗ್ರಹಾರ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಬಾಡಿ ವಾರೆಂಟ್ ಪಡೆದು ವಿಚಾರಣೆ ನಡೆಸುತ್ತಿದ್ದಾರೆ‌.

ಇದನ್ನೂ ಓದಿ: ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ, ಮುಖ್ಯ ಅಧಿಕಾರಿ ವರ್ಗಾವಣೆ: ಆರಗ ಆದೇಶ

ಜೈಲಿನಲ್ಲಿ ಮೊಬೈಲ್ ಹೇಗೆ ಸಿಕ್ತು, ಯಾರು ಕೊಟ್ಟಿದ್ದು ಎನ್ನುವುದರ ಬಗ್ಗೆಯೂ ಕೂಲಂಕುಷವಾಗಿ ತನಿಖೆ ನಡೆಸಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ನಿಹಾರ್ ಮತ್ತು ಮಗ್ದುಬ್‌ರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಕಾಲ್ ಮಾಡಿದವರು ಯಾರು, ಯಾವ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೀರಿ.ಇದೇ ಮೊದಲ ಬಾರಿಗೆ ಮೊಬೈಲ್ ಪಡೆದು ನೀವು ಮಾತನಾಡಿರೋದಾ ಅಥವಾ ಹಲವು ಬಾರಿ ಮೊಬೈಲ್ ಪಡೆದುಕೊಂಡಿದ್ರಾ ಎನ್ನುವುದರ ಬಗ್ಗೆಯೂ ಆರೋಪಿಗಳನ್ನು ಪೊಲೀಸರು ಪ್ರಶ್ನಿಸಿದ್ದಾರೆ‌. ಇನ್ನೂ ಜೈಲು ಸಿಬ್ಬಂದಿ ಏನಾದ್ರೂ ಆರೋಪಿಗಳಿಗೆ ಮೊಬೈಲ್ ನೀಡಿದ್ರಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ‌.