Asianet Suvarna News Asianet Suvarna News

ಪ್ರದೀಪ್‌ ಸಾವಿನ ಉನ್ನತ ತನಿಖೆಗಾಗಿ ಆಟೋ ಮುಷ್ಕರ

ತಿಂಗಳ ಹಿಂದೆ ಸಾವನ್ನಪ್ಪಿದ ಕೊಪ್ಪ ಆಟೋ ಚಾಲಕ ಪ್ರದೀಪ್‌ ಸಾವಿನ ಉನ್ನತ ತನಿಖೆಗಾಗಿ ಆಗ್ರಹಿಸಿ ಶೃಂಗೇರಿ ಕ್ಷೇತ್ರ ಆಟೋ ಚಾಲಕ ಬೆಂಬಲದೊಂದಿಗೆ ಕೊಪ್ಪ ಆಟೋ ಚಾಲಕರು ಮಂಗಳವಾರ ತಾಲೂಕಿನಾದ್ಯಂತ ಆಟೋ ಓಡಾಟವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು.

Auto strike for higher probe into Pradeep death rav
Author
First Published Sep 28, 2022, 9:54 AM IST

ಕೊಪ್ಪ (ಸೆ.28) :ತಿಂಗಳ ಹಿಂದೆ ಸಾವನ್ನಪ್ಪಿದ ಕೊಪ್ಪ ಆಟೋ ಚಾಲಕ ಪ್ರದೀಪ್‌ ಸಾವಿನ ಉನ್ನತ ತನಿಖೆಗಾಗಿ ಆಗ್ರಹಿಸಿ ಶೃಂಗೇರಿ ಕ್ಷೇತ್ರ ಆಟೋ ಚಾಲಕ ಬೆಂಬಲದೊಂದಿಗೆ ಕೊಪ್ಪ ಆಟೋ ಚಾಲಕರು ಮಂಗಳವಾರ ತಾಲೂಕಿನಾದ್ಯಂತ ಆಟೋ ಓಡಾಟವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು. ಬೆಳಗ್ಗೆಯೇ ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋಗಳು ಸೇವೆ ಸ್ಥಗಿತಗೊಳಿಸಿದ್ದರಿಂದ ಅನೇಕ ಮಕ್ಕಳು ಶಾಲೆಗೆ ಹೋಗದಂತಾಯಿತು. ಹೀಗಾಗಿ ಮಂಗಳವಾರ ನಡೆಯಬೇಕಿದ್ದ ಮಧ್ಯಂತರ ಕಿರುಪರೀಕ್ಷೆ ಬುಧವಾರಕ್ಕೆ ಮುಂದೂಡಲಾಯಿತು. ಪ್ರತಿಭಟನಾಕಾರರು ಪುರಭವನದಿಂದ ಬಸ್‌ ನಿಲ್ದಾಣದವರೆಗೂ ಮೆರವಣಿಗೆ ಸಾಗಿ ಬಸ್‌ ನಿಲ್ದಾಣ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು.

ಬಿಜೆಪಿ ಶಾಸಕನ ತಾಯಿಯ ಕಿವಿ ಕತ್ತರಿಸಿ ಕಿವಿಯೋಲೆ ಕದ್ದ ಕಳ್ಳರು!

ಶೃಂಗೇರಿ ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಹೆಚ್‌.ಆರ್‌.ಜಗದೀಶ್‌ ಮಾತನಾಡಿ, ಕೊಪ್ಪದ ಆಟೋ ಚಾಲಕ ಪ್ರದೀಪ್‌ ಸಾವನ್ನಪ್ಪಿ 41 ದಿನಗಳು ಕಳೆದರೂ ಸಮರ್ಪಕ ತನಿಖೆಯಾಗಿಲ್ಲ. ಪ್ರದೀಪ್‌ ಮೃತದೇಹವನ್ನು ಕಂಡ ಶೇ.80ಕ್ಕಿಂತಲೂ ಹೆಚ್ಚು ಸಾರ್ವಜನಿಕರು ಇದು ಸಹಜ ಅಥವಾ ಆತ್ಮಹತ್ಯೆ ಸಾವಾಗಿರಲು ಸಾಧ್ಯವಿಲ್ಲವೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆಟೋ ಚಾಲಕರಲ್ಲೂ ಕೂಡ ಅದೇ ಶಂಕೆ ವ್ಯಕ್ತವಾಗುತ್ತಿದ್ದು ಸದೃಢ ಶರೀರದ ಯುವಕ ಪ್ರದೀಪ್‌ ಕೇವಲ ಒಂದೂವರೆ ಅಡಿ ನೀರಿರುವ ಜಾಗದಲ್ಲಿ ಕಾಲು ಜಾರಿ ಬಿದ್ದು ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಾವಿನ ಉನ್ನತ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು. ಸಮರ್ಪಕ ತನಿಖೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಕಾರಿಗಳ ಕಚೇರಿ ಮತ್ತು ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಉನ್ನತ ತನಿಖೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಳ್ಳಲಾಗುವುದು. ಕೂಡಲೇ ಸಮರ್ಪಕ ಹಾಗೂ ಪ್ರಾಮಾಣಿಕ ತನಿಖೆ ನಡೆದು ಬಡ ಆಟೋ ಚಾಲಕನ ಸಾವಿಗೆ ನ್ಯಾಯ ದೊರಕಲಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಬಳಿಕ ತಹಶೀಲ್ದಾರ್‌ ಹಾಗೂ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ಮನವಿಯನ್ನು ಸ್ವೀಕರಿಸಿ ಮಾತನಾಡಿ ನಾವು ಈಗಾಗಲೇ ಉನ್ನತ ತನಿಖೆಗಾಗಿ ಆಗ್ರಹಿಸಿ ಗೃಹ ಸಚಿವರು ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು. ಶಾಸಕರ ಮನವಿಯ ಪ್ರತಿಯನ್ನು ಸಭೆಯಲ್ಲಿ ಓದಲಾಯಿತು.

ಬೆಂಗಳೂರು: ಮಂಗಳಮುಖಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ಅರೆಸ್ಟ್

ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿಜೇಂದ್ರ ಎಜಿಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಮಧುಸೂದನ್‌, ಸುರೇಂದ್ರ ಶೆಟ್ಟಿ, ವಿಕ್ರಂ ಕೊಪ್ಪ, ಚಂದ್ರಶೇಖರ್‌, ಕೊಪ್ಪ ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಯು.ಪಿ.ವಿಜಯ್‌ ಕುಮಾರ್‌, ಕೊಪ್ಪ ಸಮನ್ವಯ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶ್ರೀಕಾಂತ್‌ ಸೇರಿದಂತೆ ಎನ್‌.ಆರ್‌.ಪುರ, ಜಯಪುರ, ಕುದ್ರೆಗುಂಡಿ, ಶೃಂಗೇರಿ ಭಾಗಗಳಿಂದ ಬಂದಿರುವ ಆಟೋ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios