ಕಿರುಗಾವಲು ಸಂತೆಮಾಳದಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಮಾಂಗಲ್ಯ ಸರದ ಬೆಲೆ ೧,೬೪,೫೦೦ ರು. ಎನ್ನಲಾಗಿದೆ. ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಳವಳ್ಳಿ (ಜೂ.30): ಬೈಕ್‌ನಲ್ಲಿ ಬಂದ ಅಪರಿಚಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಂದ ಮಾಂಗಲ್ಯಸರ ಅಪಹರಿಸಿರುವ ಘಟನೆ ತಾಲೂಕಿನ ಕಿರುಗಾವಲು-ಮಂಡ್ಯ ರಸ್ತೆಯ ಚಿಕ್ಕೇಗೌಡನದೊಡ್ಡಿ ಗ್ರಾಮದ ಬಳಿ ನಡೆದಿದೆ.

Add Asianetnews Kannada as a Preferred SourcegooglePreferred

ಚಿಕ್ಕೇಗೌಡನದೊಡ್ಡಿ ಗ್ರಾಮದ ಎಸ್.ಸರಿತಾ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ. ಸರಿತಾ ಅವರು ಕಿರುಗಾವಲು ಸಂತೆಮಾಳದಲ್ಲಿ ತರಕಾರಿ ಖರೀದಿಸಿಕೊಂಡು ಗ್ರಾಮದ ದರ್ಶನ್ ಟೈಲರಿಂಗ್ ಅಂಗಡಿ ಬಳಿ ಬರುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಎರಡು ಎಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡನು. ತಕ್ಷಣವೇ ಸರಿತಾ ಜೋರಾಗಿ ಕೂಗಿಕೊಂಡರೂ ಸುತ್ತಮುತ್ತ ಯಾರೂ ಇರಲಿಲ್ಲವಾದ್ದರಿಂದ ಆತ ಪರಾರಿಯಾಗಿದ್ದಾನೆ. ೫೦ ಗ್ರಾಂ ಚಿನ್ನದ ಮಾಂಗಲ್ಯ ಸರದಲ್ಲಿ ೩ ಗ್ರಾಂ ಸರವನ್ನು ಅಪರಿಚಿತ ವ್ಯಕ್ತಿ ಕಿತ್ತುಕೊಂಡಿದ್ದು ಉಳಿದ ೧೫ ಗ್ರಾಂ ಸರಿತಾ ಅವರ ಬಳಿಯೇ ಇದೆ. ಆರೋಪಿ ಕಪ್ಪು ಬಣ್ಣದ ಜರ್ಕಿನ್, ತಲೆಗೆ ಹೆಲ್ಮೆಟ್ ಹಾಕಿದ್ದನು. ಮಾಂಗಲ್ಯ ಸರದ ಬೆಲೆ ೧,೬೪,೫೦೦ ರು. ಎನ್ನಲಾಗಿದೆ. ಕಿರುಗಾವಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟಿಪ್ಪರ್ ಲಾರಿ ಡಿಕ್ಕಿ: ಗೃಹಿಣಿ ಸ್ಥಳದಲ್ಲೇ ಸಾವು

ಮದ್ದೂರು: ರಸ್ತೆ ಬದಿ ನಡೆದು ಹೋಗುತ್ತಿದ್ದ ಗೃಹಿಣಿಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ತಿಪ್ಪೂರು ಗ್ರಾಮದ ಬಳಿ ಭಾನುವಾರ ಬೆಳಗ್ಗೆ ಜರುಗಿದೆ.

ಗ್ರಾಮದ ಟಿ.ಕೆ.ಬಸವರಾಜು ಪತ್ನಿ ಸಿ.ಭಾರತಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆ ಉಸಿರೆಳದಿದ್ದಾರೆ. ಮೃತ ಭಾರತೀ ಕಾರ್ಯ ನಿಮಿತ್ತ ಗ್ರಾಮದಿಂದ ಹೊರ ಹೋಗಿ ವಾಪಸ್ ಆಗುತ್ತಿದ್ದಾಗ ಅಕ್ರಮವಾಗಿ ಕೆರೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಮದ್ದೂರು ಪೊಲೀಸರು ಲಾರಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲುಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ