ನಿಖಿಲ್‌ ಶಿಂಧೆ ಭಯೋತ್ಪಾದನಾ ನಿಗ್ರಹ ದಳದ ಎದುರು ಸಹ ಹೇಳಿಕೆ ನೀಡಿದ್ದು, ಇದನ್ನು ಶಿವಾಜಿನಗರ ಕೋರ್ಟ್‌ನಲ್ಲಿ ಮ್ಯಾಜಿಸ್ಪ್ರೇಟ್‌ ಎದುರು ರೆಕಾರ್ಡ್‌ ಮಾಡಲಾಗಿದೆ ಎಂದು ಎಟಿಎಸ್‌ನ ಹಿರಿಯ ಪೊಲೀಸ್‌ ಅಧಿಕಾರಿ ಸುಜಾತಾ ತಾನ್‌ವಡೆ ಹೇಳಿದ್ದಾರೆ.

ಪುಣೆ (ಮೇ 17, 2023): ಡಿಆರ್‌ಡಿಒ ನಿರ್ದೇಶಕ ಪ್ರದೀಪ ಕುರುಲ್ಕರ್‌ ಅವರ ಬಳಿಕ ವಾಯುಪಡೆಯ ಅಧಿಕಾರಿಯೊಬ್ಬರು ಪಾಕಿಸ್ತಾನದ ಹನಿಟ್ರ್ಯಾಪ್‌ ಬಲೆಗೆ ಬಿದ್ದಿರುವ ಆರೋಪ ಕೇಳಿಬಂದಿದ್ದು, ವಾಯುಪಡೆಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ವಾಯುಪಡೆ ಅಧಿಕಾರಿ ನಿಖಿಲ್‌ ಶಿಂಧೆ, ಹನಿಟ್ರ್ಯಾಪ್‌ಗೆ ಸಿಲುಕಿಕೊಂಡಿದ್ದು, ರಹಸ್ಯ ಮಾಹಿತಿಯನ್ನು ಹಂಚಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಾಯುಪಡೆಯ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. 

ಅಲ್ಲದೇ ನಿಖಿಲ್‌ ಶಿಂಧೆ ಭಯೋತ್ಪಾದನಾ ನಿಗ್ರಹ ದಳದ ಎದುರು ಸಹ ಹೇಳಿಕೆ ನೀಡಿದ್ದು, ಇದನ್ನು ಶಿವಾಜಿನಗರ ಕೋರ್ಟ್‌ನಲ್ಲಿ ಮ್ಯಾಜಿಸ್ಪ್ರೇಟ್‌ ಎದುರು ರೆಕಾರ್ಡ್‌ ಮಾಡಲಾಗಿದೆ ಎಂದು ಎಟಿಎಸ್‌ನ ಹಿರಿಯ ಪೊಲೀಸ್‌ ಅಧಿಕಾರಿ ಸುಜಾತಾ ತಾನ್‌ವಡೆ ಅವರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಹನಿಟ್ರ್ಯಾಪ್‌ಗೆ ಒಳಗಾಗಿ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಜೊತೆ ಹಂಚಿಕೊಂಡಿದ್ದ ಆರೋಪದಲ್ಲಿ ಡಿಆರ್‌ಡಿಒ ನಿರ್ದೇಶಕ ಪ್ರದೀಪ್‌ ಕುರುಲ್ಕರ್‌ ಅವರನ್ನು ಮಹಾರಾಷ್ಟ್ರ ಎಟಿಎಸ್‌ ಬಂಧಿಸಿತ್ತು.

ಇದನ್ನು ಓದಿ: ಪಾಕ್ ಐಎಸ್‌ಐ ಪರ ಭಾರತೀಯ ಸೇನೆ ಮೇಲೆ ಗೂಢಚಾರಿಕೆ ನಡೆಸುತ್ತಿದ್ದ ಗುಜರಾತ್‌ ವ್ಯಕ್ತಿ ಅರೆಸ್ಟ್

ಡಿಆರ್‌ಡಿಒ ಲ್ಯಾಬ್ ನಿರ್ದೇಶಕ ಡಾ.ಪ್ರದೀಪ್ ಕುರುಲ್ಕರ್ (59) ಕೊತ್ರೂಡ್ ನಿವಾಸಿ, ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳ ಹನಿ ಟ್ರ್ಯಾಪ್ ಪ್ರಯತ್ನಕ್ಕೆ ಒಳಗಾಗಿದ್ದಾರೆ ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಸೋಮವಾರ ವಿಶೇಷ ನ್ಯಾಯಾಲಯದಲ್ಲಿ ಬಹಿರಂಗಪಡಿಸಿದ್ದರು. ಅಲ್ಲದೆ, ಹೆಚ್ಚಿನ ತಾಂತ್ರಿಕ ತನಿಖೆಗಳನ್ನು ನಡೆಸಲು ಕುರುಲ್ಕರ್ ಅವರ ಕಸ್ಟಡಿಯನ್ನು ಒಂದು ದಿನದವರೆಗೆ ವಿಸ್ತರಿಸಲು ಎಟಿಎಸ್ ಕೋರಿತ್ತು. ಇನ್ನು, ವಿಶೇಷ ನ್ಯಾಯಾಧೀಶ ಪಿ.ಪಿ.ಜಾಧವ್ ಎಟಿಎಸ್‌ ಮನವಿಯನ್ನು ಪುರಸ್ಕರಿಸಿ, ಪ್ರದೀಪ್‌ ಕುರುಲ್ಕರ್ ಅವರನ್ನು ಮಂಗಳವಾರದವರೆಗೆ (ಮೇ 16) ಎಟಿಎಸ್ ವಶದಲ್ಲಿರಿಸಲು ಆದೇಶಿಸಲಾಗಿತ್ತು. ನಂತರ, 14 ದಿನಗಳ ಕಾಲ ಅಂದರೆ ಮೇ 29 ರವರೆಗೆ ನ್ಯಾಯಂಗ ಬಂಧನದಲ್ಲಿರಿಸಲಾಗಿದೆ.

ಈ ವೇಳೆ ಪ್ರದೀಪ್‌ ಕುರುಲ್ಕರ್ ಜೊತೆಗೆ, ಭಾರತೀಯ ವಾಯುಪಡೆಯ (ಐಎಎಫ್) ಕಾರ್ಪೋರಲ್ ನಿಖಿಲ್ ಶೆಂಡೆ ಕೂಡ ಪಾಕಿಸ್ತಾನಿ ಗುಪ್ತಚರರಿಂದ ಇದೇ ರೀತಿಯ ಹನಿ ಟ್ರ್ಯಾಪ್‌ಗೆ ಗುರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ನಿಖಿಲ್ ಶೆಂಡೆ ಅವರನ್ನು ವಾಯುಪಡೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅವರು ಶಿವಾಜಿನಗರ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಮುಂದೆ ಎಟಿಎಸ್‌ಗೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಎಟಿಎಸ್ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸುಜಾತಾ ತನ್ವಾಡೆ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ 68 ವರ್ಷದ ಮುದುಕನಿಗೆ Honeytrap: 23 ಲಕ್ಷ ಸುಲಿಗೆ ಮಾಡಿದ ವ್ಲೋಗರ್..!

ವಾಯುಪಡೆ ಅಧಿಕಾರಿ ನಿಖಿಲ್ ಶೆಂಡೆ ಅವರನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಪ್ರಯತ್ನಿಸಿವೆ ಎಂದು ಎಟಿಎಸ್ ನ್ಯಾಯಾಲಯಕ್ಕೆ ತಿಳಿಸಿದೆ. ಬೆಂಗಳೂರಿನಲ್ಲಿ ವಾಯುಪಡೆಯ ಹಿರಿಯ ಅಧಿಕಾರಿಗಳು ನಿಖಿಲ್‌ ಶೆಂಡೆ ಅವರನ್ನು ವಿಚಾರಣೆ ನಡೆಸುತ್ತಿದ್ದು, ಅವರ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಗಿದೆ. ಆದರೆ, ಅವರು ಪ್ರಕರಣದಲ್ಲಿ ಆರೋಪಿಯಾಗಿಲ್ಲ. ಪ್ರದೀಪ್‌ ಕುರುಲ್ಕರ್ ಮತ್ತು ನಿಖಿಲ್‌ ಶೆಂಡೆ ಅವರಿಗೆ ಕಳುಹಿಸಲಾದ ಸಂದೇಶಗಳು ಪಾಕಿಸ್ತಾನದ ಐಪಿ ವಿಳಾಸಗಳಿಂದ ಬಂದಿವೆ ಎಂದು ತಾಂತ್ರಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಟಿಎಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.

ತನಿಖಾಧಿಕಾರಿಗಳು ಪ್ರದೀಪ್‌ ಕುರುಲ್ಕರ್‌ಗೆ ಪಾಕಿಸ್ತಾನದಿಂದ ಕಳುಹಿಸಲಾದ ಹಲವಾರು ಇಮೇಲ್‌ಗಳನ್ನು ಪತ್ತೆಹಚ್ಚಿದ್ದಾರೆ. ಈ ಹಿನ್ನೆಲೆ ಅವರು ರಾಷ್ಟ್ರೀಯ ಭದ್ರತೆಗೆ ರಾಜಿ ಮಾಡಿಕೊಳ್ಳುವ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿರಬಹುದು ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಆತನಿಂದ ವಶಪಡಿಸಿಕೊಂಡ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಅನ್ನು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ವರದಿಯನ್ನು ಸ್ವೀಕರಿಸಲಾಗಿದೆ. ಪ್ರದೀಪ್‌ ಕುರುಲ್ಕರ್ ಬಂಧನದಲ್ಲಿರುವಾಗ ಅವರ ಮೊಬೈಲ್ ಫೋನ್‌ನಿಂದ ಹೆಚ್ಚಿನ ಮಾಹಿತಿಯನ್ನು ಹೊರತೆಗೆಯಲು ATS ಪ್ರಯತ್ನಿಸುತ್ತದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅಡ್. ಚಂದ್ರಕಿರಣ್ ಸಾಲ್ವಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪ್ರದೀಪ್‌ ಕುರುಲ್ಕರ್ ಅವರ ಪರವಾಗಿ ವಕೀಲ ಹೃಷಿಕೇಶ್ ಗ್ಯಾನು ವಾದ ಮಂಡಿಸಿದ್ದರು. 

ಇದನ್ನೂ ಓದಿ: Honeytrapನಿಂದ 30 ಕೋಟಿ ರೂ. ಆಸ್ತಿ ಸಂಪಾದಿಸಿದ ಒಡಿಶಾ ಮಹಿಳೆ: ಈಕೆ ಬಾಯಿಬಿಟ್ಟರೆ ಸರ್ಕಾರವೇ ಪತನ..!