Asianet Suvarna News Asianet Suvarna News

Rowdy Shot in Bengaluru: ಎಸ್‌ಐಗೆ ಚಾಕು ಇರಿದಿದ್ದ ರೌಡಿಗೆ ಗುಂಡೇಟಿನ ಪಾಟ!

*ಬಂಧಿಸಲು ಹೋದಾಗ ಎಸ್‌ಐಗೆ ಇರಿದು ಪರಾರಿಯಾಗಿದ್ದ ಕಾಳ
*ಶುಕ್ರವಾರ ಮತ್ತೆ ಬಂಧಿಸಲು ಹೋದಾಗ ದಾಳಿ: ರಕ್ಷಣೆಗಾಗಿ ಫೈರಿಂಗ್‌̇
*ನಗರದಲ್ಲಿ ಹಾವಳಿ ಶುರುವಿಟ್ಟಿದ್ದ ಉಲ್ಲಾಳ ನಿವಾಸಿ ದಿವಾಕರ್‌
 

Absconding rowdy who had hurt ASI during Arrest was shot by police in Bengaluru mnj
Author
Bengaluru, First Published Jan 1, 2022, 8:59 AM IST

ಬೆಂಗಳೂರು (ಜ. 1): ಎರಡು ದಿನಗಳ ಹಿಂದೆ ದರೋಡೆ ಪ್ರಕರಣದಲ್ಲಿ ತನ್ನನ್ನು ಬಂಧಿಸಲು ಬಂದ ಸಬ್‌ ಇನ್‌ಸ್ಪೆಕ್ಟರ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ರೌಡಿಯೊಬ್ಬನಿಗೆ ಸಂಜಯನಗರ ಠಾಣೆ ಪೊಲೀಸರು ಬಂದೂಕಿನ ಮೂಲಕ ಶುಕ್ರವಾರ ‘ಪಾಠ’ ಹೇಳಿದ್ದಾರೆ. ನಗರದ ಉಲ್ಲಾಳ ನಿವಾಸಿ ದಿವಾಕರ್‌ ಅಲಿಯಾಸ್‌ (Diwakar) ಕಾಳನಿಗೆ ಗುಂಡೇಟು ಬಿದ್ದಿದ್ದು, ಪಿಎಸ್‌ಐ (PSI) ಮೇಲಿನ ಹಲ್ಲೆ ಸಂಬಂಧ ಜಾಲಹಳ್ಳಿಯ ಎಚ್‌ಎಂಟಿ ಕಾರ್ಖಾನೆ ಸಮೀಪ ಬಂಧಿಸಲು ತೆರಳಿದ ಪೊಲೀಸರ ಮೇಲೆ ಮತ್ತೆ ಆರೋಪಿ ತಿರುಗಿ ಬಿದ್ದಿದ್ದಾನೆ. ಆ ವೇಳೆ ಆತ್ಮರಕ್ಷಣೆಗೆ ದಿವಾಕರ್‌ ಕಾಲಿಗೆ ಇನ್‌ಸ್ಪೆಕ್ಟರ್‌ ಬಾಲರಾಜ್‌ ಗುಂಡು ಹೊಡೆದಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್‌ ಪಾಟೀಲ್‌ ತಿಳಿಸಿದ್ದಾರೆ.

ನಗರದಲ್ಲಿ ಹಾವಳಿ ಶುರುವಿಟ್ಟಿದ್ದ ಕಾಳ

ದಿವಾಕರ್‌ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಆತನ ವಿರುದ್ಧ ಗಿರಿನಗರ, ಸಂಜಯನಗರ ಹಾಗೂ ಯಶವಂತಪುರ ಸೇರಿದಂತೆ ಇತರೆ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. ಈ ಕ್ರಿಮಿನಲ್‌ ಕೃತ್ಯಗಳ ಹಿನ್ನೆಲೆಯಲ್ಲಿ ಆತನ ಮೇಲೆ ಗಿರಿನಗರ ಠಾಣೆಯಲ್ಲಿ ರೌಡಿಪಟ್ಟಿತೆರೆಯಲಾಗಿತ್ತು. ಇತ್ತೀಚೆಗೆ ತನ್ನ ಸಹಚರರನ್ನು ಕಟ್ಟಿಕೊಂಡು ನಗರದ ಉತ್ತರ, ದಕ್ಷಿಣ ಹಾಗೂ ಪಶ್ಚಿಮ ಪ್ರದೇಶದಲ್ಲಿ ದಿವಾಕರ್‌ ಹಾವಳಿ ಶುರು ಮಾಡಿದ್ದ.

ಕೆಲ ದಿನಗಳ ಹಿಂದೆ ಯಶವಂತಪುರ ಠಾಣಾ ವ್ಯಾಪ್ತಿಯ ಎಸ್‌ಬಿಎ ಕಾಲೋನಿಯಲ್ಲಿ ವೃದ್ಧೆ ಮನೆಗೆ ನುಗ್ಗಿ ಬೆದರಿಸಿ ದಿವಾಕರ್‌ ತಂಡ ದರೋಡೆ ನಡೆಸಿತ್ತು. ಈ ಕೃತ್ಯ ಸಂಬಂಧ ಹೆಬ್ಬಾಳ-ಭೂಪಸಂದ್ರ ರಸ್ತೆಯ ಪಾಳು ಬಿದ್ದ ತೋಟವೊಂದರಲ್ಲಿ ಬುಧವಾರ ರಾತ್ರಿ ಇದ್ದ ಆರೋಪಿಯ ಬಂಧನಕ್ಕೆ ತೆರಳಿದ್ದ ಯಶವಂತಪುರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ವಿನೋದ್‌ ರಾಥೋಡ್‌ ಅವರ ಕೈಗೆ ಚಾಕುವಿನಿಂದ ಇರಿದು ದಿವಾಕರ್‌ ತಪ್ಪಿಸಿಕೊಂಡಿದ್ದ.

ತನಿಖಾ ತಂಡದ ವಿರುದ್ಧವೇ ತಿರುಗಿ ಬಿದ್ದ ಆರೋಪಿ!

ಪಿಎಸ್‌ಐ ಹಲ್ಲೆ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಬಳಿಕ ಆರೋಪಿ ಬೆನ್ನುಹತ್ತಿದ್ದ ಸಂಜಯನಗರ ಠಾಣೆ ಇನ್‌ಸ್ಪೆಕ್ಟರ್‌ ಬಾಲರಾಜ್‌ ತಂಡಕ್ಕೆ, ಜಾಲಹಳ್ಳಿಯ ಎಚ್‌ಎಂಟಿ ಕಾರ್ಖಾನೆ ಸಮೀಪ ಶುಕ್ರವಾರ ಮುಂಜಾನೆ ಆರೋಪಿ ಇರುವ ಬಗ್ಗೆ ಸುಳಿವು ಲಭಿಸಿತು. ಕೂಡಲೇ ಆತನ ಬಂಧನಕ್ಕೆ ತೆರಳಿದ ತನಿಖಾ ತಂಡದ ವಿರುದ್ಧವೇ ಮತ್ತೆ ಆರೋಪಿ ತಿರುಗಿ ಬಿದ್ದಿದ್ದಾನೆ. ಈ ಹಂತದಲ್ಲಿ ಕಾನ್‌ಸ್ಟೇಬಲ್‌ ಪ್ರದೀಪ್‌ಗೆ ಪೆಟ್ಟಾಗಿದೆ. ಕೂಡಲೇ ಎಚ್ಚೆತ್ತ ಇನ್‌ಸ್ಪೆಕ್ಟರ್‌ ಅವರು, ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಈ ಮಾತಿಗೆ ಬಗ್ಗದೆ ಹೋದಾಗ ಆರೋಪಿ ಕಾಲಿಗೆ ಇನ್‌ಸ್ಪೆಕ್ಟರ್‌ ಬಾಲರಾಜ್‌ ಗುಂಡು ಹೊಡೆದಿದ್ದಾರೆ ಎಂದು ಡಿಸಿಪಿ ವಿನಾಯಕ್‌ ಪಾಟೀಲ್‌ ವಿವರಿಸಿದ್ದಾರೆ.

ಇದನ್ನೂ ಓದಿ:

1) Cybercrime : Omicron ಫ್ರೀ ಟೆಸ್ಟ್‌ ಹೆಸರಲ್ಲಿ ವಂಚಕರು ಬಲೆ ಬೀಸ್ತಾರೆ.. ಸರ್ಕಾರದ ಎಚ್ಚರಿಕೆ!

2) Suvarna FIR : ಟ್ವಿಸ್ಟ್ ಮೇಲೆ ಟ್ವಿಸ್ಟ್... 38ರ ಸುಂದರಿ.. ಇಬ್ಬರು ಗಂಡಂದಿರು. ಇನ್ನೊಬ್ಬ ಬಾಯ್ ಫ್ರೆಂಡ್!

3) ಶಾಮಿನಿಸಂ ಪ್ರಭಾವ, ಬೆಂಗಳೂರಿನ 17 ವರ್ಷದ ಬಾಲಕಿ 2 ತಿಂಗಳಿನಿಂದ ನಿಗೂಢವಾಗಿ ನಾಪತ್ತೆ!

Follow Us:
Download App:
  • android
  • ios