ಇರಾನ್ ಸರ್ವಾಧಿಕಾರಿ ಅಲಿ ಖಮೇನಿ ಸಾವಿಗೆ ಕೆಲವರು ಸಂಭ್ರಮಿಸುತ್ತಿರುವುದರ ಹಿಂದಿನ ಕಾರಣಗಳನ್ನು ಈ ಲೇಖನ ವಿವರಿಸುತ್ತದೆ. ಹಿಜಾಬ್ ವಿಚಾರವಾಗಿ ಅವರ ಆಡಳಿತದಲ್ಲಿ ನಡೆದ ಕ್ರೌರ್ಯಕ್ಕೆ ಬಲಿಯಾದ ಡಾ. ಐದಾ ರಸ್ತೋಮಿ,  ಅತಾಫಿ ರಜಾಬಿ ಹಾಗೂ  ಮಾರ್ಜಿ ಇಸ್ಫಹಾನ್‌ರಂತಹ ಮಹಿಳೆಯರ  ಕಥೆಗಳನ್ನು ಇದು ತೆರೆದಿಡುತ್ತದೆ

ಇರಾನ್​ ಸರ್ವಾಧಿಕಾರಿ ಅಲಿ ಖಮೇನಿ ಹ*ತ್ಯೆಗೀಡಾಗಿರುವ ಬಗ್ಗೆ ಒಂದೆಡೆ ಸಂಭ್ರಮ ಆಚರಿಸುತ್ತಿದ್ದರೆ, ಭಾರತದ ಕೆಲವು ರಾಜಕೀಯ ಮುಖಂಡರು ಸೇರಿ ಕೆಲವರು ಕಣ್ಣೀರು ಇಡುತ್ತಿದ್ದಾರೆ. ಇದರ ನಡುವೆಯೇ ತನ್ನದೇ ದೇಶದ ನಾಯಕನ ಸಾವಿಗೆ ಕಾರಣವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಇರಾನಿಯನ್ನರು ಧನ್ಯವಾದ ಸಲ್ಲಿಸುತ್ತಿದ್ದಾರೆ. ಅಮೆರಿಕ, ಇರಾನ್​ನಲ್ಲಿಯೇ ಸಂಭ್ರಮದ ಆಚರಣೆಯನ್ನೂ ಮಾಡುತ್ತಿದ್ದಾರೆ. ಸಂಭ್ರಮ ಆಚರಣೆ ಮಾಡುತ್ತಿರುವ ಹಿಂದಿರುವ ಘನಘೋರ ಕಾರಣ ಕೇಳಿದರೆ ಖಮೇನಿಯ ಕ್ರೌರ್ಯದ ಅರಿವಿಲ್ಲದವರು ದಿಗ್ಭ್ರಮೆಯಾಗುವುದು ನಿಜ.

Add Asianetnews Kannada as a Preferred SourcegooglePreferred

ಮೂವರು ಹೆಣ್ಣುಮಕ್ಕಳ ಬಗ್ಗೆ...

ಖಮೇನಿಯ ಕ್ರೌರ್ಯಕ್ಕೆ ಬಲಿಯಾದ ಮೂವರು ಹೆಣ್ಣುಮಕ್ಕಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇಂಥ ಅದೆಷ್ಟು ಬಾಲೆಯರು, ಹೆಂಗಸರು ಬರ್ಬರವಾಗಿ ಸಾವಿಗೀಡಾಗಿದ್ದಾರೆ ಎನ್ನುವುದು ಮಾತ್ರ ಲೆಕ್ಕಕ್ಕೆ ನಿಲುಕದ್ದು. ಇಲ್ಲಿ ಚಿತ್ರದಲ್ಲಿ ಇರುವ ಮೊದಲನಾಕೆಯ ಹೆಸರು ಡಾ.ಐದಾ ರಸ್ತೋಮಿ (Aida Rostami). 2022ರಲ್ಲಿ ಈಕೆಯನ್ನು ಅದೆಷ್ಟು ಕ್ರೂರವಾಗಿ ಕೊಲ್ಲಲಾಯಿತು ಎಂದರೆ ದೇಹದ ಎಲ್ಲಾ ಭಾಗಗಳೂ ಹೊರಕ್ಕೆ ಬಂದಿದ್ದವು. ಇದಕ್ಕೆ ಕಾರಣ ಏನು ಗೊತ್ತಾ? ಈಕೆ ವೃತ್ತಿಯಲ್ಲಿ ವೈದ್ಯೆಯಾಗಿದ್ದರು. ಇರಾನ್​ನಲ್ಲಿ 2022ರ ವೇಳೆಗೆ ಹಿಜಾಬ್​ ಸೇರಿದಂತೆ ಹೆಂಗಸರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಬೀದಿಗಿಳಿದು ಹೆಂಗಸರು ಪ್ರತಿಭಟನೆ ಮಾಡುತ್ತಿದ್ದರು. ಆಗ ಅವರ ಮೇಲೆ ಇದೇ ಖಮೇನಿ ಆಡಳಿತ ಕ್ರೌರ್ಯ ಮೆರೆದಿತ್ತು. ಆಗ 36 ವರ್ಷದವರಾಗಿದ್ದ ಐದಾ ಅವರು ಗಾಯಗೊಂಡಿರುವ ಹೆಣ್ಣುಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದರು. ಅಷ್ಟೇ. ಅನುಮಾನಾಸ್ಪದವಾಗಿ ಈಕೆಯ ಭಯಾನಕ ಸಾವಾಗಿ ಹೋಗಿತ್ತು. ಕಣ್ಣುಗುಡ್ಡೆಗಳು ಹೊರಬಂದಿದ್ದು ಸೇರಿದಂತೆ ದೇಹ ಛಿದ್ರ ಛಿದ್ರಗೊಳಿಸಲಾಗಿತ್ತು.

ಹಿಜಾಬ್​ ಸರಿದಿದ್ದ ಕಾರಣ 13ರ ಬಾಲೆ ನೇ*ಣುಗಂಬಕ್ಕೆ!

2004ರಂದು ಇರಾನ್​ನ ನೇಕಾ ಎಂಬಲ್ಲಿ ಸಾರ್ವಜನಿಕವಾಗಿ 13ರ ಬಾಲೆ ಅತಾಫಿ ರಜಾಬಿ ಸಹಾಲೆಯನ್ನು (Atefeh Rajabi Sahaaleh) ನೇಣುಗಂಬಕ್ಕೆ ಏರಿಸಲಾಗಿತ್ತು. ಕ್ರೇನಿನ ತುದಿಗೊಂದು ಹಗ್ಗ ಕಟ್ಟಿ ಆ ಹುಡುಗಿಯನ್ನು ನೇತು ಹಾಕಲಾಗಿತ್ತು. ಜನರೆಲ್ಲಾ ಮೂಕವಿಸ್ಮಿತರಾಗಿ ಇದನ್ನು ನೋಡುತ್ತಿದ್ದರು. ಅಷ್ಟಕ್ಕೂ ಈಕೆ ಮಾಡಿದ ತಪ್ಪೇನೆಂದರೆ, ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಮುಖದ ಮೇಲೆ ಇದ್ದ ಹಿಜಾಬ್​ ಸರಿದುಹೋಗಿದ್ದು! ಪೊಲೀಸರು ಇವಳನ್ನು ನೋಡಿ ಸೀದಾ ಠಾಣೆಗೆ ಕರೆದುಕೊಂಡು ಹೋಗಿದ್ದೂ ಅಲ್ಲದೇ ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆಸಲಾಯಿತು. ಆ ದೇಶದ ಗಂಡಸರಲ್ವಾ, ಅವರಿಗೆ ಎಲ್ಲಾ ಅಧಿಕಾರವೂ ಇತ್ತು (ಇದೆ!). ಆಮೇಲೆ ಈ 13ರ ಬಾಲೆಯ ಮೇಲೆ ವೇ*ಶ್ಯಾವಾಟಿಕೆ ಆರೋಪ ಹೊರಿಸಿ ಕೋರ್ಟ್​ಗೆ ಹಾಜರು ಪಡಿಸಲಾಯಿತು. ಎಷ್ಟು ಅಂಗಲಾಚಿದರೇನು? ಅಲ್ಲಿ ಇದ್ದವರು ಇವರದ್ದೇ ನ್ಯಾಯಾಧೀಶರಲ್ವಾ? ಕೊನೆಗೆ ಸರ್ವಾಧಿಕಾರಿ ಖಮೇನಿ ಕೂಡ ಕ್ಯಾಬ್​ನಲ್ಲಿ ಹೋಗುತ್ತಿದ್ದ ನೀನು ವೇ*ಶ್ಯೆ, ಸಾರ್ವಜನಿಕವಾಗಿ ಗಲ್ಲಿಗೇರಿಸುವುದೇ ಸರಿಯಾದ ನಿರ್ಧಾರ ಎಂದು ಹೇಳಿ, ಆಕೆಯನ್ನು ನೇಣಿನ ಕುಣಿಕೆಗೆ ಏರಿಸಲಾಯಿತು!

ಹಿಜಾಬ್​ ಸರಿದುಹೋಯ್ತೆಂದು ಆ್ಯಸಿಡ್​ ದಾಳಿ!

ಇನ್ನು ಆ್ಯಸಿಡ್​ ದಾಳಿಗೆ ಒಳಗಾದ ಮಾರ್ಜಿ ಇಸ್ಫಹಾನ್‌ (Marji Isfahan) ಸ್ಟೋರಿ ಕೇಳಿ. ಈಕೆ ಬದುಕಿದ್ದಾಳೆ ಎನ್ನುವ ಸಂತೋಷ ಬಿಟ್ಟರೆ, ಸುಂದರವಾದ ಮುಖವನ್ನು ಆ್ಯಸಿಡ್​ ದಾಳಿ ಮಾಡಿಸಿ ಕುರೂಪ ಮಾಡಿದ್ದು ಇದೇ ಖಮೇನಿ ಸರ್ಕಾರ. ಕಾರಣ ಈಕೆ ಹಿಜಾಬ್​ ಸರಿಯಾಗಿ ಧರಿಸಿರಲಿಲ್ಲ ಎನ್ನುವ ಕಾರಣ! 2014 ರಲ್ಲಿ ನಡೆದ ಈ ಘಟನೆ ಇದು. ಖಮೇನಿ ಸರ್ಕಾರ, ಹಿಜಾಬ್​ ಬಗ್ಗೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿತಲ್ಲ, ಆದರೆ, ಇಸ್ಫಹಾನ್‌ ಗಾಡಿಯಲ್ಲಿ ಹೋಗುವಾಗ ಹಿಜಾಬ್​ ಹಾರಿಹೋಗಿತ್ತು ಎನ್ನುವ ಕಾರಣಕ್ಕೆ ಆ್ಯಸಿಡ್​ ಎರಚಿ ಹೋಗಿದ್ದರು. ಇದರಲ್ಲಿ ಅವರು ಒಂದು ಕಣ್ಣು ಕಳೆದುಕೊಂಡಿದ್ದಾರೆ. ಈಕೆಯ ಹಿಜಾಬ್​ ಸರಿದದ್ದು ತಪ್ಪು ಎನ್ನುವ ಕಾರಣಕ್ಕೆ ಖಮೇನಿ ಸರ್ಕಾರ ಈ ಘನಘೋರ ಕೃತ್ಯ ಎಸಗಿದವರನ್ನು ಹುಡುಕುವ ಗೋಚಿಗೆ ಹೋಗಿರಲಿಲ್ಲ. ಇದೀಗ ಖಮೇನಿಯ ಸಾವಿನ ಬಳಿಕ ಮಾರ್ಜಿ ಇಸ್ಫಹಾನ್‌ ಹರ್ಷ ವ್ಯಕ್ತಪಡಿಸಿದ್ದಾರೆ.