ಬೆಂಗಳೂರಿನ ಗೋವಿಂದರಾಜನಗರದಲ್ಲಿ, 65 ವರ್ಷದ ಪತಿಯೊಬ್ಬ ತನ್ನ 57 ವರ್ಷದ ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇತ್ತೀಚೆಗೆ ಕೇರಳ ಪ್ರವಾಸಕ್ಕೆ ಹೋಗಿದ್ದಾಗ ಪತ್ನಿ ಡ್ರೈವರ್ ಜೊತೆ ಮಾತನಾಡಿದ್ದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಫೆ.18): ವೃದ್ಧೆಯ ಶೀಲ ಶಂಕಿಸಿ ಆಕೆಯ ಪತಿಯೇ ಭೀಕರವಾಗಿ ಹತ್ಯೆಗೈದ ಆಘಾತಕಾರಿ ಕೃತ್ಯ ಸಿಲಿಕಾನ್ ಸಿಟಿ ಬೆಂಗಳೂರಿನ ಗೋವಿಂದರಾಜನಗರದಲ್ಲಿ ತಡರಾತ್ರಿ ನಡೆದಿದೆ.
ಕೇವಲ ಸಂಶಯದ ಸುಳಿಗೆ ಸಿಲುಕಿದ 65 ವರ್ಷದ ವೃದ್ಧನೊಬ್ಬ ತನ್ನ 57 ವರ್ಷದ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವುದು ಸ್ಥಳೀಯರನ್ನೇ ಬೆಚ್ಚಿಬಿಳಿಸಿದೆ.
ಮಲಗಿದ್ದಾಗ ಮಚ್ಚಿನೇಟು, ಪತ್ನಿ ದೇವಿಕಾ ದಾರುಣ ಅಂತ್ಯ
ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 57 ವರ್ಷದ ದೇವಿಕಾ ಕೊಲೆಯಾದ ದುರ್ದೈವಿ. ಪತಿ ಕುಮಾರ್ (65) ತಡರಾತ್ರಿ ಸುಮಾರು 12.45 ರ ವೇಳೆಗೆ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ದೇವಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೇರಳ ಪ್ರವಾಸ: ಡ್ರೈವರ್ ಜೊತೆ ಮಾತಾಡಿದ್ದೇ ತಪ್ಪಾಯ್ತಾ?
ಪೊಲೀಸ್ ಮೂಲಗಳ ಪ್ರಕಾರ, ಈ ದಂಪತಿ ಇತ್ತೀಚೆಗಷ್ಟೇ ಕುಟುಂಬ ಸಮೇತ ಕೇರಳ ಪ್ರವಾಸಕ್ಕೆ ಹೋಗಿದ್ದರು. ಪ್ರವಾಸದ ಸಮಯದಲ್ಲಿ ಪತ್ನಿ ದೇವಿಕಾ ಅವರು ವಾಹನದ ಚಾಲಕನ (ಡ್ರೈವರ್) ಜೊತೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ಘಟನೆಯಿಂದಲೇ ಪತ್ನಿಯ ಶೀಲದ ಬಗ್ಗೆ ಶಂಕಿಸಿರುವ ಪತಿ ಕುಮಾರ್, ಪ್ರವಾಸದುದ್ದಕ್ಕೂ ಕುದಿಯುತ್ತಿದ್ದ ಎನ್ನಲಾಗಿದೆ. ಆ ಸಂಶಯವೇ ಮನೆಗೆ ಬಂದ ಮೇಲೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆ ಮಾಡಿ ಆತ್ಮ೧ಹತ್ಯೆಗೆ ಯತ್ನಿಸಿದ ಆರೋಪಿ ಪತಿ ವಶಕ್ಕೆ
ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಗಾಬರಿಗೊಂಡ ಆರೋಪಿ ಕುಮಾರ್ ತಾನೂ ಕೂಡ ಆತ್ಮ೧ಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಆದರೆ ಆರೋಪಿಯನ್ನ ರಕ್ಷಿಸಲಾಗಿದೆ. ಸದ್ಯ ಆರೋಪಿ ಕುಮಾರ್ನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



