ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸನ್ನಡತೆಯ ಆಧಾರದ ಮೇಲೆ 24 ಜೀವಾವಧಿ ಸಜಾ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ, 15 ವರ್ಷಗಳ ಕಾಲ ಜೈಲಿನಲ್ಲಿದ್ದರೂ ಪ್ರೇಯಸಿ ಕೈಬಿಡದ ಮಣಿಕಂಠ ಹಾಗೂ ಮೂರು ಕೊಲೆಗಳಿಗಾಗಿ 37 ವರ್ಷ ಶಿಕ್ಷೆ ಅನುಭವಿಸಿದ ಸಾಯಿಬಣ್ಣ ಎಂಬುವರ ಕಥೆಗಳು ಗಮನ ಸೆಳೆಯುತ್ತವೆ.
ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ, ಹಲವು ವರ್ಷಗಳಿಂದ ಬಂಧಿಯಾಗಿದ್ದ ಅಪರಾಧಿಗಳು, ಅದರಲ್ಲಿಯೂ ಹೆಚ್ಚಾಗಿ ಕೊಲೆ ಕೇಸ್ನಲ್ಲಿ ಶಿಕ್ಷೆಗೆ ಒಳಗಾದವರಿಗೆ ಇದೀಗ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸನ್ನಡತೆ ತೋರಿ ಸೆರೆಮನೆಯಿಂದ ಬಂಧಮುಕ್ತರಾದ 24 ಜೀವಾವಧಿ ಸಜಾ ಕೈದಿಗಳಿಗೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೀಳ್ಕೊಟ್ಟರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಶನಿವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಬಂಧಮುಕ್ತರಾದ ಕೈದಿಗಳಿಗೆ ಪ್ರಮಾಣ ವಿತರಿಸಿ ಸಮಾಜದ ಮುಖ್ಯವಾಹಿನಿಗೆ ಮರಳಿ ಜವಾಬ್ದಾರಿಯುತ ನಾಗರಿಕರಾಗಿ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಸಚಿವರು ಹಾರೈಸಿದರು.
ಹೀಗೆ ಬಿಡುಗಡೆಯ ಭಾಗ್ಯ ಪಡೆದಿರುವವರದ್ದು ಒಂದೊಂದು ಕಥೆ, ಒಂದೊಂದು ವ್ಯಥೆ. ಇವರಲ್ಲಿ ಹೆಚ್ಚು ಗಮನ ಸೆಳೆದದ್ದು, ಹಾಗೂ ಸದ್ದು ಮಾಡುತ್ತಿರುವುದು ಇಬ್ಬರ ಸ್ಟೋರಿ. ಒಬ್ಬರು ಚಿಕ್ಕಮಗಳೂರಿನ ವ್ಯಕ್ತಿ ಹಾಗೂ ಇನ್ನೊಬ್ಬರು ಜೇವರ್ಗಿಯ ವ್ಯಕ್ತಿ.
ಕೈಬಿಡದ ಪ್ರೇಯಸಿ
ಚಿಕ್ಕಮಗಳೂರಿನ ವ್ಯಕ್ತಿಯ ಸ್ಟೋರಿ ಹೇಳುವುದಾರೆ, ಕೊಲೆ ಕೇಸ್ನಲ್ಲಿ ಇವರು 15 ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಇವರ ಹೆಸರು ಮಣಿಕಂಠ. ಈಗ ಬಿಡುಗಡೆ ಪಡೆದಿರುವ ಅವರು, ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ತಾವು ಮಾಡಿರುವ ಕೃತ್ಯದ ಬಗ್ಗೆ ನೊಂದುಕೊಂಡಿದ್ದಾರೆ. 'ಆಕಸ್ಮಿಕವಾಗಿ ಒಂದು ಕೊಲೆ ಕೇಸ್ನಲ್ಲಿ ಸಿಕ್ಕಾಕಿಕೊಂಡು 15 ವರ್ಷ ಜೈಲಲ್ಲೇ ಇದ್ದೆ. ಜೈಲಿನಲ್ಲಿಯೇ 10 ವರ್ಷ ಬೇಕರಿ ಕೆಲಸ ಮಾಡಿ ಸಂಪಾದನೆ ಮಾಡಿದ್ದೇನೆ' ಎಂದಿದ್ದಾರೆ. ನಡುವೆ ಒಮ್ಮೆ ಮದುವೆಗೆಂದು ಪರೋಲ್ ಮೇಲೆ ಹೊರಕ್ಕೆ ಬಂದೆ. ಜೈಲಿನಲ್ಲಿ ಇದ್ದರೂ ನಾನು ಪ್ರೀತಿಸಿದ ಹುಡುಗಿ ಕೈಬಿಡಲಿಲ್ಲ. ಆಕೆಯ ಜೊತೆ ಮದುವೆಯಾದೆ. ನಾಲ್ಕು ವರ್ಷದ ಮಗುವಿದೆ ಎಂದಿರುವ ಮಣಿಕಂಠ ಅವರು, ಯಾರೂ ಕೂಡ ಕೋಪದ ಕೈಗೆ ಬುದ್ಧಿಕೊಟ್ಟು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಬೇಡಿ, ಅಪರಾಧವನ್ನು ಮಾಡಬೇಡಿ' ಎಂದು ಕಿವಿಮಾತು ಹೇಳಿದ್ದಾರೆ.
3 ಕೊಲೆ- 37 ವರ್ಷ ಶಿಕ್ಷೆ
ಇನ್ನು ಜೇವರ್ಗಿಯ ಸಾಯಿಬಣ್ಣ ಲಿಂಗಪ್ಪ ನಾಟೇಕರ್ ಅವರ ಸ್ಟೋರಿ ಮಾತ್ರ ಸ್ವಲ್ಪ ಭಯಾನಕವಾಗಿದೆ. ಇವರು ಜೈಲಿನಲ್ಲಿ ಇದದ್ದು 37 ವರ್ಷಗಳು! ಏಕೆಂದರೆ, ಇವರು ಮಾಡಿದ್ದು, ಒಂದಲ್ಲ, ಮೂರು ಕೊಲೆಗಳು! ಲಿಂಗಪ್ಪ ಕರ್ನಾಟಕ ಸ್ಟೇಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡು ಕೊಂದೇ ಬಿಟ್ಟರು. ಜೈಲು ಸೇರಿದರು. ಇದು ಅವರ ಮೊದಲ ಕೊಲೆ. 2ನೇ ಮದುವೆಗೆಂದು ಪರೋಲ್ ಪಡೆದು ಬಂದು ಮದುವೆಯಾದರು. ಎರಡು ವರ್ಷದ ನಂತರ ಮತ್ತೆ ಹೊರಕ್ಕೆ ಬಂದಾಗ, 2ನೇ ಪತ್ನಿ ಇನ್ನೊಬ್ಬನ ಜೊತೆ ಇರುವುದನ್ನು ನೋಡಿದರು. ಅವರ ಜೊತೆ ಮಗಳೂ ಇದ್ದಳು. ಪತ್ನಿಯ ಮೇಲೆ ಕೋಪಗೊಂಡ ಸಾಯಿಬಣ್ಣ ಅವರನ್ನೂ ಕೊಲೆ ಮಾಡಿದ್ರು. ಬಿಡಿಸಲು ಬಂದ ಮಗಳ ಮೇಲೆ ಹಲ್ಲೆ ಮಾಡಿದ್ದರಿಂದ ಆಕೆಯೂ ಸಾವನ್ನಪ್ಪಿದಳು. ಎಲ್ಲಾ ಸೇರಿ 37 ವರ್ಷ ಶಿಕ್ಷೆಯಾಯಿತು. ಕೋಪ ತಣ್ಣಗಾದ ಮೇಲೆ ಇವರು, ಚಾಕುನಲ್ಲಿ ತಿವಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಬದುಕುಳಿದಿದ್ದರು. ಅಂದು ಜೈಲು ಸೇರಿದ್ದ ಲಿಂಗಪ್ಪ 37 ವರ್ಷಗಳ ನಂತರ ಇದೀಗ ಬಿಡುಗಡೆಯಾಗಿದ್ದಾರೆ.


