ಯೋಗೇಶಗೌಡ ಹತ್ಯೆ ಪ್ರಕರಣ: ಚಂದ್ರಶೇಖರ ಇಂಡಿಗೆ 2 ದಿನ ಸಿಬಿಐ ಕಸ್ಟಡಿ
ಮಾಜಿ ಸಚಿವ ವಿನಯ್ ಕುಲಕರ್ಣಿ ಸೋದರಮಾವ ಚಂದ್ರಶೇಖರ ಇಂಡಿ| ಎರಡು ದಿನದ ಹಿಂದೆ ಚಂದ್ರಶೇಖರ ಇಂಡಿಯನ್ನು ಬಂಧಿಸಿದ್ದ ಸಿಬಿಐ| ಮಂಗಳವಾರ ಹೆಚ್ಚಿನ ವಿಚಾರಣೆ ನಡೆಸಿ ಸಿಬಿಐ ಮನವಿ ಪುರಸ್ಕರಿಸಿ 2 ದಿನ ಸಿಬಿಐ ಕಸ್ಟಡಿಗೆ ನೀಡಿ ಆದೇಶಿಸಿದ ನ್ಯಾಯಾಲಯ|
ಧಾರವಾಡ(ಡಿ.16): ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಸೋದರಮಾವ ಚಂದ್ರಶೇಖರ ಇಂಡಿ ಅವರನ್ನು ನ್ಯಾಯಾಲಯ ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ.
ಎರಡು ದಿನದ ಹಿಂದೆ ಚಂದ್ರಶೇಖರ ಇಂಡಿಯನ್ನು ಸಿಬಿಐ ಬಂಧಿಸಿ, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಆಗ ನ್ಯಾಯಾಲಯ 14 ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈ ನಡುವೆ ಸಿಬಿಐ ತನ್ನ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿತ್ತು.
'ವಿನಯ್ ಕುಲಕರ್ಣಿಗೆ ನ್ಯಾಯ ಸಿಕ್ಕೇ ಸಿಗುತ್ತದೆ, ಕಾರ್ಯಕರ್ತರು ಧೈರ್ಯದಿಂದ ಇರಬೇಕು'
ಈ ಸಂಬಂಧ ಸೋಮವಾರವೇ ವಿಚಾರಣೆ ನಡೆಸಿತ್ತು. ಅಲ್ಲದೇ, ಮಂಗಳವಾರ ಹೆಚ್ಚಿನ ವಿಚಾರಣೆ ನಡೆಸಿ ಸಿಬಿಐ ಮನವಿಯನ್ನು ಪುರಸ್ಕರಿಸಿ 2 ದಿನ ಸಿಬಿಐ ಕಸ್ಟಡಿಗೆ ನೀಡಿ ಆದೇಶಿಸಿತು. ಡಿ. 17ರವರೆಗೆ ಕಸ್ಟಡಿಗೆ ತೆಗೆದುಕೊಂಡಿರುವ ಸಿಬಿಐ, ಅಂದು ಸಂಜೆ 5ಗಂಟೆಯವರೆಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.