ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ವೇಗಿ ಅಸಿತ ಫೆರ್ನಾಂಡೊ ಜೊತೆಗಿನ ಜಟಾಪಟಿ ಬಗ್ಗೆ ಯಶಸ್ವಿ ಜೈಸ್ವಾಲ್ ಸ್ಪಷ್ಟನೆ ನೀಡಿದ್ದಾರೆ. ಪ್ರಚೋದನೆಗೆ ತಕ್ಕ ಉತ್ತರ ನೀಡುವುದು 'ಹೊಸ ಭಾರತ'ದ ನೀತಿ ಎಂದು ಹೇಳಿಕೊಂಡಿರುವ ಅವರು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆಗಾಗಿ ಐಸಿಸಿ ಇಬ್ಬರೂ ಆಟಗಾರರಿಗೆ ದಂಡ ವಿಧಿಸಿದೆ.

ಕೊಲಂಬೊ: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನ, ವೇಗಿ ಅಸಿತ ಫೆರ್ನಾಂಡೊ ಜೊತೆ ಮೈದಾನದಲ್ಲಿ ನಡೆದ ಜಟಾಪಟಿ ಬಗ್ಗೆ ಭಾರತದ ಓಪನರ್ ಯಶಸ್ವಿ ಜೈಸ್ವಾಲ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ತಾನು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಮತ್ತು ಗಡಿ ಮೀರುವವರಿಗೆ ತಕ್ಕ ಉತ್ತರ ನೀಡಲೇಬೇಕು ಎಂದು ಜೈಸ್ವಾಲ್ ಖಡಾಖಂಡಿತವಾಗಿ ಹೇಳಿದ್ದಾರೆ.

ಪಂದ್ಯದಲ್ಲಿ 45 ರನ್ ಗಳಿಸಿ ಆಡುತ್ತಿದ್ದಾಗ, ಫೆರ್ನಾಂಡೊ ಬೌಲಿಂಗ್‌ನಲ್ಲಿ ಜೈಸ್ವಾಲ್ ಔಟಾದರು. ವಿಕೆಟ್ ಪಡೆದ ನಂತರ ಫೆರ್ನಾಂಡೊ ಪ್ರಚೋದನಕಾರಿಯಾಗಿ ಸಂಭ್ರಮಿಸಿದರು. ಇದರಿಂದ ಕೋಪಗೊಂಡ ಜೈಸ್ವಾಲ್, ಪೆವಿಲಿಯನ್‌ಗೆ ಹೋಗುವುದನ್ನು ನಿಲ್ಲಿಸಿ, ಬೌಲರ್ ಬಳಿ ಬಂದು ತಲೆಯಿಂದ ಗುದ್ದಿದ್ದರು. ನಂತರ, ಲಂಕಾ ನಾಯಕ ಧನಂಜಯ ಡಿ ಸಿಲ್ವ ಮತ್ತು ಇತರ ಆಟಗಾರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು.

ಹರ್ಷಾ ಬೋಗ್ಲೆಗೆ ಖಡಕ್ ತಿರುಗೇಟು ಕೊಟ್ಟ ಜೈಸ್ವಾಲ್:

ಈ ಘಟನೆಯ ನಂತರ, ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಅವರು 'ಜೈಸ್ವಾಲ್ ಮೈದಾನದಲ್ಲಿ ತಮ್ಮ ಕೋಪವನ್ನು ನಿಯಂತ್ರಿಸಲು ಕಲಿಯಬೇಕು' ಎಂದು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಜೈಸ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಘಟನೆಯ ವಿಡಿಯೋ ಹಂಚಿಕೊಂಡು ಉತ್ತರ ನೀಡಿದ್ದಾರೆ. "ಬೌಲರ್ ನನಗೇನು ಹೇಳಿದ ಅಂತ ನಿಮಗೆ ಗೊತ್ತಿಲ್ಲದಿದ್ದರೆ, ದಯವಿಟ್ಟು ಅದರ ಬಗ್ಗೆ ತೀರ್ಪು ಕೊಡಬೇಡಿ. ಯಾರಾದ್ರೂ ಗಡಿ ಮೀರಲು ಪ್ರಯತ್ನಿಸಿದರೆ, ಅವರಿಗೆ ಸರಿಯಾಗಿಯೇ ತಿಳಿಸಬೇಕಾಗುತ್ತದೆ. ಇದು ಹೊಸ ಭಾರತ, ಬಲವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ತಿರುಗೇಟು ನೀಡುತ್ತದೆ' ಎಂದು ಜೈಸ್ವಾಲ್ ಬರೆದುಕೊಂಡಿದ್ದಾರೆ.

Scroll to load tweet…

ಕೋಚ್‌ಗಳು ಮತ್ತು ಬೋರ್ಡ್ ನಿಲುವು

ಘಟನೆಯ ನಂತರ, ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಅವರು ಜೈಸ್ವಾಲ್‌ರನ್ನು ಭಾಗಶಃ ಸಮರ್ಥಿಸಿಕೊಂಡಿದ್ದಾರೆ. 'ಬೌಲರ್ ಏನಾದರೂ ಹೇಳಿರಬಹುದು, ಆಟದ ರಭಸದಲ್ಲಿ ಹೀಗಾಗಿದೆ. ಆದರೆ ಜೈಸ್ವಾಲ್ ಬೌಲರ್‌ನ ಅಷ್ಟು ಹತ್ತಿರ ಹೋಗಿ ಪ್ರತಿಕ್ರಿಯಿಸಬಾರದಿತ್ತು' ಎಂದು ಅವರು ಹೇಳಿದರು.

ಜೈಸ್ವಾಲ್-ಅಸಿತಗೆ ದಂಡದ ಬರೆ ಎಳೆದ ಐಸಿಸಿ:

ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಕ್ರೀಡಾಸ್ಪೂರ್ತಿಯನ್ನು ಉಲ್ಲಂಘಿಸಿದ ತಪ್ಪಿಗೆ ಟೀಂ ಇಂಡಿಯಾ ಓಪನ್ನರ್ ಯಶಸ್ವಿ ಜೈಸ್ವಾಲ್ ಹಾಗೂ ಲಂಕಾ ವೇಗಿ ಅಸಿತ ಫೆರ್ನಾಂಡೊ ಅವರು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12 ಉಲ್ಲಂಘಿಸಿರುವುದರಿಂದ ಇಬ್ಬರಿಗೂ ಪಂದ್ಯದ ಸಂಭಾವನೆಯ 25% ದಂಡ ವಿಧಿಸಲಾಗಿದೆ.