ಭಾರತ 'ಎ' ಕ್ರಿಕೆಟ್ ತಂಡವು ಮತ್ತೊಮ್ಮೆ ಆಸ್ಟ್ರೇಲಿಯಾ 'ಎ' ಎದುರು ಮುಗ್ಗರಿಸಿದೆ. 

ಮೆಲ್ಬರ್ನ್: ಆಸ್ಟ್ರೇಲಿಯಾ ವೇಗಿಗಳ ಬೌನ್ಸರ್ ಎಸೆತಗಳನ್ನು ಸಮರ್ಥವಾಗಿ ಎದುರಿಸಿ ತಂಡದ ಪಾಲಿಗೆ ಧ್ರುವ್ ಜುರೆಲ್ ಆಪಾಂಧವರಾಗಿ ಮೂಡಿಬಂದರೂ, ಇತರ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಭಾರತ 'ಎ' 2ನೇ ಅನಧಿಕೃತ ಟೆಸ್ಟ್‌ನಲ್ಲೂ ಸೋಲನುಭವಿಸಿದೆ. ಶನಿವಾರ ಕೊನೆಗೊಂಡ ಪಂದ್ಯದಲ್ಲಿ ಆಸೀಸ್ ಎ ತಂಡ 6 ವಿಕೆಟ್ ಜಯಗಳಿಸಿ, ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿತು.

ಮೊದಲ ಇನ್ನಿಂಗ್ಸ್‌ನಲ್ಲಿ 62 ರನ್ ಹಿನ್ನಡೆ ಅನುಭವಿಸಿದ್ದ ಭಾರತ, ಪಂದ್ಯದ 3ನೇ ದಿನ 2ನೇ ಇನ್ನಿಂಗ್ಸ್‌ನಲ್ಲಿ 229 ರನ್‌ಗೆ ಆಲೌಟಾಯಿತು. 56ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಜುರೆಲ್ ಆಸರೆಯಾದರು. ನಿತೀಶ್ ರೆಡ್ಡಿ(38) ಜೊತೆಗೂಡಿ 6ನೇ ವಿಕೆಟ್‌ಗೆ 94 ರನ್ ಸೇರಿಸಿದ ಅವರು, 68 ರನ್‌ಗೆ ವಿಕೆಟ್ ಒಪ್ಪಿಸಿದರು. ತನುಶ್ ಕೋಟ್ಯನ್ 44, ಪ್ರಸಿದ್ಧ ಕೃಷ್ಣ29 ರನ್‌ ಗಳಿಸಿ ಆಸೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಲು ಸಹಕರಿಸಿದರು.

ರಣಜಿ ಟ್ರೋಫಿ: ಬಂಗಾಳ ವಿರುದ್ಧ ಕರ್ನಾಟಕಕ್ಕಿಲ್ಲ ಗೆಲುವು, ಸಿಕ್ಕಿದ್ದು ಕೇವಲ ಒಂದು ಅಂಕ!

168 ರನ್ ಗುರಿ ಪಡೆದ ಆಸೀಸ್ 1 ರನ್ ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡರೂ ಎದೆಗುಂದಲಿಲ್ಲ. ಸ್ಯಾಮ್ ಕಾನ್‌ಸ್ಟಸ್ ಔಟಾಗದೆ 13, ಬ್ಯೂ ವೆಬ್‌ಸ್ಟರ್ ಔಟಾಗದೆ 46 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಪ್ರಸಿದ್ಧ ಕೃಷ್ಣ 2 ವಿಕೆಟ್ ಕಿತ್ತರು.

ಸ್ಕೋರ್: ಭಾರತ 'ಎ' 161/10 ಮತ್ತು 229/10 (ಜುರೆಲ್ 68, ತನುಶ್ 44, ಕೋರೆ 4-74), ಆಸ್ಟ್ರೇಲಿಯಾ 'ಎ' 223/10 ಮತ್ತು 169/4 (ಕಾನ್‌ಸ್ಟಸ್ 73*, ವೆಬ್‌ಸ್ಟರ್ 46*, ಪ್ರಸಿದ್ಧ 2-37)

ಆಸ್ಟ್ರೇಲಿಯಾದಲ್ಲೂ ಸೋತರೆ ಗಂಭೀರ್‌ಗೆ ಸಂಕಷ್ಟ: ಲಕ್ಷ್ಮಣ್‌ರನ್ನು ಟೆಸ್ಟ್‌ ಕೋಚ್‌ ಮಾಡುತ್ತಾ ಬಿಸಿಸಿಐ?

ನವದೆಹಲಿ: ತವರಿನಲ್ಲೇ ನ್ಯೂಜಿಲೆಂಡ್‌ ವಿರುದ್ಧ ಭಾರತದ 0-3 ಅಂತರದ ಟೆಸ್ಟ್‌ ಸರಣಿ ಸೋಲು ಕೋಚ್‌ ಗೌತಮ್‌ ಗಂಭೀರ್‌ ಅವರ ಹುದ್ದೆ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.

ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಗೆಲ್ಲಲೇಬೇಕೆಂದು ಬಿಸಿಸಿಐ ಖಡಕ್‌ ಸೂಚನೆ ನೀಡಿದ್ದು, ಒಂದು ವೇಳೆ ಆಸೀಸ್‌ನಲ್ಲೂ ವೈಫಲ್ಯ ಅನುಭವಿಸಿದರೆ ಟೆಸ್ಟ್‌ ತಂಡಕ್ಕೆ ಹೊಸ ಕೋಚ್‌ ನೇಮಿಸಲು ಚಿಂತನೆ ಸಿದ್ಧತೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಂಜು ಸ್ಯಾಮ್ಸನ್ ಭರ್ಜರಿ ಶತಕ: ಡರ್ಬನ್‌ನಲ್ಲಿ ಟೀಂ ಇಂಡಿಯಾ ದರ್ಬಾರ್‌

ಸದ್ಯ ಗಂಭೀರ್‌ ಭಾರತ ಟಿ20, ಏಕದಿನ, ಟೆಸ್ಟ್‌ ತಂಡಕ್ಕೆ ಕೋಚ್‌ ಆಗಿದ್ದಾರೆ. ಆದರೆ ಅವರ ಅವಧಿಯಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಒಂದು ವೇಳೆ ತಂಡ ಆಸೀಸ್‌ ಸರಣಿಯಲ್ಲೂ ವೈಫಲ್ಯ ಅನುಭವಿಸಿದರೆ, ಗಂಭೀರ್‌ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದೆ.

ಕೇವಲ ಏಕದಿನ, ಟಿ20 ತಂಡಗಳಿಗೆ ಗಂಭೀರ್‌ನ್ನು ಕೋಚ್‌ ಆಗಿ ಮುಂದುವರಿಸಲಿರುವ ಬಿಸಿಸಿಐ, ಟೆಸ್ಟ್‌ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್‌ರನ್ನು ನೇಮಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಲಕ್ಷ್ಮಣ್‌ ಸದ್ಯ ದ.ಆಫ್ರಿಕಾ ಟಿ20 ಸರಣಿಗೆ ಭಾರತದ ಹಂಗಾಮಿ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋಚ್‌ ಹುದ್ದೆಯ ಬದಲಾವಣೆ ಬಗ್ಗೆ ಬಿಸಿಸಿಐನಲ್ಲಿ ಈಗಾಗಲೇ ಚರ್ಚೆ ಆರಂಭಗೊಂಡಿದ್ದು, ಆಸೀಸ್‌ ಸರಣಿಯ ಫಲಿತಾಂಶ ಆಧರಿಸಿ ಮತ್ತೆ ಸಭೆ ನಡೆಸಲು ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ.