ಐಪಿಎಲ್‌ನಲ್ಲಿ ಅಬ್ಬರಿಸಿದ 15ರ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧರಿದ್ದಾರೆ ಎಂದು ಟೀಮ್ ಮ್ಯಾನೇಜ್‌ಮೆಂಟ್ ಹೇಳಿದರೂ, ಅವರ ಪಾದಾರ್ಪಣೆ ವಿಳಂಬವಾಗುತ್ತಿರುವುದಕ್ಕೆ ಕಾರಣವೇನು ಮತ್ತು ಇಂಗ್ಲೆಂಡ್ ಸರಣಿಯಲ್ಲಾದರೂ ಅವಕಾಶ ಸಿಗುವುದೇ ಎಂಬ ಪ್ರಶ್ನೆಗಳು ಎದ್ದಿವೆ.

ಬೆಂಗಳೂರು: 16 ಮ್ಯಾಚ್ 776 ರನ್, 72 ಸಿಕ್ಸರ್ ಹಾಗೂ 230ಕ್ಕೂ ಹೆಚ್ಚಿನ ಸ್ಟ್ರೈಕ್‌ರೇಟ್‌. ಐಪಿಎಲ್‌ನ 15 ವರ್ಷದ ಅಸಾಧಾರಣ ಪ್ರತಿಭೆ, ಭಾರತ ತಂಡಕ್ಕೆ ಈಗಾಗಲೇ ಆಯ್ಕೆಯಾಗಿದ್ದರೂ ಆಡುವ ಹನ್ನೊಂದರ ಬಳಗದಲ್ಲಿ ಇನ್ನೂ ಸ್ಥಾನ ಸಿಕ್ಕಿಲ್ಲ. ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವುದು ಯಾವಾಗ ಎನ್ನುವ ಪ್ರಶ್ನೆಗಿಂತ ಹೆಚ್ಚಾಗಿ, ಸ್ವತಃ ಟೀಮ್ ಮ್ಯಾನೇಜ್‌ಮೆಂಟ್ ಈ ಹುಡುಗ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ರೆಡಿಯಿದ್ದಾನೆ ಎಂದು ತೀರ್ಮಾನಿಸಿದ್ದರೂ, ಆತನ ಪಾದಾರ್ಪಣೆಗೆ ಅಡ್ಡಿಯಾಗಿರುವುದು ಯಾರು ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ರಿಕೆಟ್ ಶಿಶು ಐರ್ಲೆಂಡ್ ಎದುರು ಭಾರತ ತಂಡವು 0-2 ಅಂತರದ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಟೀಂ ಇಂಡಿಯಾ ಸಹಾಯಕ ಕೋಚ್ ರೆಯಾನ್ ಟೆನ್ ಡೆಸ್ಕ್ಯಾಟ್, ವೈಭವ್ ಸೂರ್ಯವಂಶಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ರೆಡಿಯಾಗಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆದರೆ ಇದಕ್ಕಾಗಿ ಉಳಿದ ಆಟಗಾರರಂತೆ ಈತ ಕೂಡಾ ಕೆಲವು ಸಮಯ ಕಾಯಬೇಕಾಗುತ್ತದೆ' ಎಂದು ಹೇಳಿದ್ದರು.

ರೆಡಿಯಿದ್ದಾನೆ ಆದ್ರೆ ಆಡಲು ಅವಕಾಶ ಸಿಗ್ತಿಲ್ಲ! ಏನಿದು ಲೆಕ್ಕಾಚಾರ?

ತಂಡಕ್ಕೆ ಆಯ್ಕೆಯಾದ ಬಳಿಕ ಆಟಗಾರನಿಗೆ ಸ್ಥಾನ ಸಿಕ್ಕಿಲ್ಲ ಅಂದ್ರೆ ಅದಕ್ಕೆ ಕೇವಲ ಎರಡು ಕಾರಣಗಳಿರುತ್ತವೆ. ಮೊದಲನೆಯದ್ದು ಆಟಗಾರ ಮ್ಯಾಚ್ ಆಡಲು ರೆಡಿಯಿಲ್ಲದಿದ್ದರೇ, ಎರಡನೆಯದ್ದು ಆಟಗಾರ ಫಿಟ್ ಇಲ್ಲದಿದ್ದರೇ ಅವಕಾಶ ಸಿಗುವುದಿಲ್ಲ. ಆದರೆ ವೈಭವ್ ಸೂರ್ಯವಂಶಿ ಕೇಸ್ ತುಂಬಾನೆ ಡಿಫರೆಂಟ್‌ ಆಗಿದೆ. ವೈಭವ್ ಸೂರ್ಯವಂಶಿ ಫಿಟ್ ಆಗಿದ್ದಾರೆ. ಇನ್ನು ಟೀಮ್ ಮ್ಯಾನೇಜ್‌ಮೆಂಟ್ ವೈಭವ್ ಮ್ಯಾಚ್ ಆಡಲು ರೆಡಿಯಾಗಿದ್ದಾರೆ ಎಂದು ಹೇಳಿದೆ. ಹೀಗಿದ್ದೂ 15 ವರ್ಷದ ವೈಭವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಿಲ್ಲ.

ವೈಭವ್ ಸೂರ್ಯವಂಶಿ ಇನ್ನೆಷ್ಟು ಸಮಯ ಕಾಯಬೇಕು?

ಪ್ರತಿ ಆಟಗಾರನು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ತನ್ನ ಸಮಯಕ್ಕೆ ಕಾಯಲೇಬೇಕು. ಇದೊಂದು ಸಿದ್ದಾಂತ. ಆದರೆ ಸಿದ್ದಾಂತಕ್ಕೂ ಕೆಲವೊಮ್ಮೆ ಅಪವಾದಗಳು ಇರುತ್ತವೆ. ಒಂದು 16 ವರ್ಷದಲ್ಲಿ ಸಚಿನ್ ತೆಂಡೂಲ್ಕರ್‌ಗೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ಅವಕಾಶ ಸಿಗದೇ ಇದ್ದಿದ್ದರೇ ಬಹುಶಃ ಇಂದು ಕ್ರಿಕೆಟ್ ಇತಿಹಾಸ ಬೇರೆಯದ್ದೇ ಆಗಿರುತ್ತಿತ್ತೇನೋ. ಅದೇ ರೀತಿ 15 ವರ್ಷಕ್ಕೆ ಐಪಿಎಲ್‌ನಲ್ಲಿ ವಿಶ್ವದ ದಿಗ್ಗಜ ಬೌಲರ್‌ಗಳನ್ನು ಚೆಂಡಾಡಿರುವ ವೈಭವ್ ಸೂರ್ಯವಂಶಿ, ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ಇನ್ನೆಷ್ಟು ಸಮಯ ಕಾಯಬೇಕು ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಟೀಮ್ ಮ್ಯಾನೇಜ್‌ಮೆಂಟ್ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ:

ಐಪಿಎಲ್ ಹಾಗೂ ಇಂಡಿಯಾ 'ಎ' ಪರ ಮಿಂಚಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿಯನ್ನು ಆದಷ್ಟು ಬೇಗ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಕಲ್ಪಿಸಬೇಕು ಎನ್ನುವ ಕುರಿತಂತೆ ಒಂದು ನಿಲುವು ತೆಗೆದುಕೊಳ್ಳಬೇಕಾದ ಒತ್ತಡವಿದೆ. ಯಾಕೆಂದರೆ ಪ್ರತಿ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ವೈಭವ್ ಸೂರ್ಯವಂಶಿ ಪಾದಾರ್ಪಣೆ ಯಾವಾಗ ಎನ್ನುವ ಪ್ರಶ್ನೆ ಟೀಮ್ ಮ್ಯಾನೇಜ್‌ಮೆಂಟ್ ಎದುರಿಸುತ್ತಲೇ ಇದೆ.

ಎಲ್ಲರ ಕಣ್ಣು ಇಂಗ್ಲೆಂಡ್ ಸರಣಿಯ ಮೇಲೆ:

ಅಂದಹಾಗೆ ಐರ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿ ಬೆಂಚ್ ಕಾಯಿಸಿದ್ದರು. ಇದೀಗ ಜುಲೈ 01ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಾದರೂ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುತ್ತಾ ಎನ್ನುವ ಕುತೂಹಲ ಜೋರಾಗಿದೆ. ಒಂದು ವೇಳೆ ಇಂಗ್ಲೆಂಡ್ ಎದುರಿನ ಸರಣಿಯಲ್ಲೂ ವೈಭವ್ ಅವರನ್ನು ಹೊರಗೆ ಕೂರಿಸಿದರೆ ಅವರ ಮನಸ್ಥಿತಿ ಕುಗ್ಗುವ ಸಾಧ್ಯತೆಯಿದೆ.