ಟೀಂ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಪದೇ ಪದೇ ತಂಡದಿಂದ ಹೊರಗಿಡುತ್ತಿರುವುದಕ್ಕೆ ಆರ್. ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಕುಲ್ದೀಪ್‌ಗೆ ಅವಕಾಶ ನೀಡದ ಟೀಂ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಪ್ರಶ್ನಿಸಿರುವ ಅವರು, ಇದು ಆಟಗಾರನ ಆತ್ಮವಿಶ್ವಾಸಕ್ಕೆ ಧಕ್ಕೆ ತರುತ್ತದೆ ಎಂದು ಎಚ್ಚರಿಸಿದ್ದಾರೆ.

ಲಂಡನ್: ಟೀಂ ಇಂಡಿಯಾದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಪದೇ ಪದೇ ತಂಡದಿಂದ ಹೊರಗಿಡುತ್ತಿರುವುದಕ್ಕೆ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಗರಂ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಕುಲ್ದೀಪ್‌ರನ್ನು ಆಡುವ ಬಳಗದಲ್ಲಿ ಸೇರಿಸದ ಟೀಂ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಅಶ್ವಿನ್ ಪ್ರಶ್ನಿಸಿದ್ದಾರೆ. ಇದು ಆಟಗಾರನ ಆತ್ಮವಿಶ್ವಾಸ ಮತ್ತು ಫಾರ್ಮ್ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ಅಶ್ವಿನ್ ಎಚ್ಚರಿಕೆ ನೀಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಗಾಯಗೊಂಡು ಹೊರಗುಳಿದಿದ್ದರು, ವಾಷಿಂಗ್ಟನ್ ಸುಂದರ್‌ಗೆ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಯಾಗಿತ್ತು. ಹೀಗಿದ್ದಾಗ ಕುಲ್ದೀಪ್‌ರನ್ನು ಆಡಿಸಲು ಟೀಂ ಇಂಡಿಯಾಗೆ ಒಳ್ಳೆ ಅವಕಾಶವಿತ್ತು. ಆದರೆ, ತಂಡ ನಾಲ್ವರು ವೇಗಿಗಳು ಮತ್ತು ಸ್ಪಿನ್ನರ್ ಆಗಿ ಅಕ್ಷರ್ ಪಟೇಲ್ ಅವರನ್ನು ಮಾತ್ರ ಉಳಿಸಿಕೊಂಡು ಪ್ರಯೋಗ ಮುಂದುವರಿಸಿತು. ಎಂಟನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಬಲವಿದ್ದರೂ, ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್‌ನನ್ನು ಯಾಕೆ ಕೈಬಿಟ್ರಿ ಅನ್ನೋದೇ ಅಶ್ವಿನ್ ಪ್ರಶ್ನೆ.

ಅಸಮಾಧಾನ ಹೊರಹಾಕಿದ ಅಶ್ವಿನ್

ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಅಶ್ವಿನ್, 'ಸಾಮಾನ್ಯವಾಗಿ ಕುಲ್ದೀಪ್‌ನನ್ನು ಆಡಿಸದೇ ಇರಲು ಹೇಳುವ ಕಾರಣ ಅಂದ್ರೆ, ಏಳನೇ ನಂಬರ್ ನಂತರ ಬ್ಯಾಟಿಂಗ್ ಇಲ್ಲ ಅನ್ನೋದು. ಆದರೆ ಇಂದು ಅರ್ಶ್‌ದೀಪ್ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಾಗಲೂ ಕುಲ್ದೀಪ್‌ನನ್ನು ಹೊರಗಿಟ್ಟಿರುವುದು ಆಶ್ಚರ್ಯ ತಂದಿದೆ. ಬುಮ್ರಾ ಇಲ್ಲದಿರುವುದನ್ನು ಪರಿಗಣಿಸಿದರೆ, ಕುಲ್ದೀಪ್ ಪರಿಸ್ಥಿತಿ ನೋಡಿ ಬೇಜಾರಾಗುತ್ತಿದೆ. ನಂಬಿ, ಇದು ಒಬ್ಬ ಬೌಲರ್‌ನ ಲಯ ಮತ್ತು ಆತ್ಮವಿಶ್ವಾಸದ ಮೇಲೆ ದೊಡ್ಡ ಹೊಡೆತ ನೀಡುತ್ತದೆ' ಎಂದು ಅಶ್ವಿನ್ ಪೋಸ್ಟ್ ಮಾಡಿದ್ದಾರೆ.

ಮುಂದುವರಿದ ಕಡೆಗಣನೆ

ಇಂಗ್ಲೆಂಡ್ ಪ್ರವಾಸದ ಮೂರೂ ಏಕದಿನ ಪಂದ್ಯಗಳಲ್ಲಿ ಕುಲ್ದೀಪ್‌ಗೆ ಅವಕಾಶ ಸಿಗಲಿಲ್ಲ. ಟಿ20 ಸರಣಿಯಲ್ಲೂ ಅವರು ಬೆಂಚ್ ಕಾಯಬೇಕಾಯ್ತು. ಇದಕ್ಕೂ ಮುನ್ನ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲೂ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕುಲ್ದೀಪ್ ಆಡಿದ್ದರು. ಬ್ಯಾಟರ್‌ಗಳ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಟೀಂ ಮ್ಯಾನೇಜ್‌ಮೆಂಟ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಹೆಚ್ಚಾಗಿ ಆಡಿಸುತ್ತಿದೆ. ಇವರಿಬ್ಬರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚುತ್ತಿದ್ದರೂ, ಭಾರತದ ಪ್ರಮುಖ ರಿಸ್ಟ್ ಸ್ಪಿನ್ನರ್ ಕುಲ್ದೀಪ್‌ಗೆ ಅವಕಾಶ ಸಿಗದಿರುವುದು ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಕುಲ್ದೀಪ್ ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಐಪಿಎಲ್ 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವಾಗ ಅವರು ಸ್ಥಿರ ಪ್ರದರ್ಶನ ನೀಡಿರಲಿಲ್ಲ. ನಂತರ ಲಕ್ನೋ ಸೂಪರ್ ಜೈಂಟ್ಸ್‌ಗೆ ವರ್ಗಾವಣೆ ಆಗಿದ್ದು ಕೂಡ ಗಮನಾರ್ಹ.