Asianet Suvarna News Asianet Suvarna News

ರಾಯ​ಚೂರು ವೇಗಿ ವಿದ್ಯಾಧರ್ ಪಾಟೀಲ್‌ಗೆ ವಿಶ್ವ​ಕಪ್‌ ಗೆಲ್ಲು​ವ ಕನ​ಸು!

ಕರ್ನಾಟಕದ ಯುವ ಪ್ರತಿಭೆ ವಿದ್ಯಾಧರ್ ಪಾಟೀಲ್ ಮುಂಬರುವ ಅಂಡರ್ 19 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಾಯಚೂರಿನ ಹಳ್ಳಿ ಹುಡುಗ ಇದೀಗ ವಿಶ್ವಕಪ್ ಗೆಲ್ಲುವ ಕನಸನ್ನು ಹೊತ್ತು ದಕ್ಷಿಣ ಆಫ್ರಿಕಾ ತೆರಳಲಿದ್ದಾರೆ. ವಿದ್ಯಾಧರ್ ಪಾಟೀಲ್ ಕ್ರಿಕೆಟ್ ಜರ್ನಿಯ ಎಕ್ಸ್‌ಕ್ಲೂಸಿವ್ ಸಂದರ್ಶನವನ್ನು ಸುವರ್ಣ ನ್ಯೂಸ್‌.ಕಾಂ ಸೋದರ ಸಂಸ್ಥೆಯಾದ ಕನ್ನಡಪ್ರಭ ಮಾಡಿದೆ. ವಿದ್ಯಾಧರ್ ಏನಂದ್ರು, ನೀವೇ ನೋಡಿ...

U 19 world cup 2020 Karnataka Speed youngster Vidyadhar Patil Exclusive Interview
Author
Bengaluru, First Published Dec 8, 2019, 11:44 AM IST

ಸಂದರ್ಶನ: ಧನಂಜಯ ಎಸ್‌. ಹಕಾರಿ

ಬೆಂಗಳೂರು(ಡಿ.08): ಪೃಥ್ವಿ ಶಾ ಹಾಗೂ ತಂಡ ಅಂಡರ್‌-19 ವಿಶ್ವ​ಕಪ್‌ ಗೆದ್ದು ಸಂಭ್ರ​ಮಿ​ಸಿ​ದ ದಿನ​ವ​ನ್ನು ಭಾರ​ತೀಯ ಕ್ರಿಕೆಟ್‌ ಅಭಿ​ಮಾ​ನಿ​ಗಳು ಇನ್ನೂ ಮರೆ​ತಿಲ್ಲ. ಅಷ್ಟ​ರಾ​ಗಲೇ ಮತ್ತೊಂದು ಅಂಡರ್‌-19 ವಿಶ್ವ​ಕಪ್‌ ಬಂದಿದೆ. ಜ.17ರಿಂದ ಫೆ.9ರ ವರೆಗೂ ದಕ್ಷಿಣ ಆಫ್ರಿ​ಕಾ​ದಲ್ಲಿ ನಡೆ​ಯ​ಲಿ​ರುವ ಟೂರ್ನಿಗೆ ಕಳೆದ ವಾರ ಬಿಸಿ​ಸಿಐ ಭಾರತ ತಂಡ​ವನ್ನು ಆಯ್ಕೆ ಮಾಡಿತು. ತಂಡ​ದಲ್ಲಿ ಕರ್ನಾ​ಟ​ಕದ ಇಬ್ಬರು ಆಟ​ಗಾ​ರರು ಸ್ಥಾನ ಪಡೆ​ದರು. ಅದ​ರಲ್ಲಿ ವಿದ್ಯಾ​ಧರ್‌ ಪಾಟೀಲ್‌ ಸಹ ಒಬ್ಬರು. ರಾಯ​ಚೂರಿನ ವೇಗದ ಬೌಲರ್‌ ತಮ್ಮ ಸಂಭ್ರ​ಮ​ವನ್ನು ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆಯಾದ ‘ಕನ್ನ​ಡ​ಪ್ರಭ’ದೊಂದಿಗೆ ಹಂಚಿಕೊಂಡಿದ್ದು, ವಿಶ್ವ​ಕಪ್‌ಗೆ ನಡೆ​ಸಿ​ರುವ ತಯಾರಿ ಬಗ್ಗೆ ವಿವ​ರಿ​ಸಿ​ದ್ದಾರೆ.

ಹಳ್ಳಿ ಹುಡುಗ ವಿದ್ಯಾಧರ್ ಪಾಟೀಲ್ ಟೀಂ ಇಂಡಿಯಾ ಸೇರಿದ್ಹೇಗೆ..?

ಇಂಗ್ಲೆಂಡ್‌ ಪ್ರವಾಸ ಟರ್ನಿಂಗ್‌ ಪಾಯಿಂಟ್‌

2011ರಲ್ಲಿ ಭಾರತ ತಂಡದ ವಿಶ್ವ​ಕಪ್‌ ಗೆಲುವು ವಿದ್ಯಾಧರ್‌ರಲ್ಲಿದ್ದ ಕ್ರಿಕೆಟ್‌ ಪ್ರೇಮ​ವನ್ನು ಹೆಚ್ಚಿ​ಸಿತು. ಆ ಗೆಲು​ವಿ​ನಿಂದ ಸ್ಫೂರ್ತಿ ಪಡೆದು ತಾವು ಕ್ರಿಕೆಟಿಗರಾಗ​ಬೇಕು ಎಂದು ನಿರ್ಧ​ರಿ​ಸಿದ ವಿದ್ಯಾ​ಧರ್‌, ರಾಯ​ಚೂ​ರಿನ ಸಿಟಿ ಇಲೆ​ವೆನ್‌ ಕ್ರಿಕೆಟ್‌ ಕ್ಲಬ್‌ಗೆ ಸೇರಿ​ಕೊಂಡರು. ಅಲ್ಲಿಂದ ಅವರ ಕ್ರಿಕೆಟ್‌ ಪಯಣ ಆರಂಭ​ಗೊಂಡಿತು. 2019ರಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಂಡ ಭಾರತ ಅಂಡರ್‌-19 ತಂಡ​ದ​ಲ್ಲಿದ್ದ ಅವರು, ತ್ರಿಕೋನ ಸರ​ಣಿ​ಯಲ್ಲಿ ಗಮ​ನಾರ್ಹ ಪ್ರದ​ರ್ಶನ ತೋರಿ​ದರು. ಬಳಿಕ ಶ್ರೀಲಂಕಾ​ದಲ್ಲಿ ನಡೆದ ಏಷ್ಯಾ​ಕಪ್‌ ಹಾಗೂ ತವ​ರಿ​ನಲ್ಲಿ ನಡೆದ ಆಫ್ಘಾನಿ​ಸ್ತಾನ ವಿರುದ್ಧದ ಸರ​ಣಿ​ಯಲ್ಲಿ ಅತ್ಯ​ದ್ಭುತ ಪ್ರದ​ರ್ಶನ ತೋರಿ, ವಿಶ್ವ​ಕಪ್‌ ತಂಡ​ದಲ್ಲಿ ಸ್ಥಾನ ಗಿಟ್ಟಿ​ಸಿ​ದರು.

ಕೋಚ್‌ ರಾಹುಲ್‌ ದ್ರಾವಿಡ್‌ ನೆರ​ವು

ಅಂಡರ್‌-19 ತಂಡದ ಕೋಚ್‌ ಆಗಿದ್ದ ರಾಹುಲ್‌ ದ್ರಾವಿಡ್‌, ವಿದ್ಯಾ​ಧರ್‌ಗೆ ಅತ್ಯ​ಗತ್ಯ ಸಲಹೆ, ಮಾರ್ಗ​ದ​ರ್ಶನ ನೀಡಿ​ದ್ದಾರೆ. ‘ನಾನು ಸಾಕಷ್ಟು ಕಷ್ಟಪಟ್ಟಿ​ದ್ದೇನೆ. ಇಂಗ್ಲೆಂಡ್‌ ಪ್ರವಾಸ ಹೊಸ ಅನು​ಭವ ನೀಡಿತು. ವಾತಾ​ವ​ರಣ ಬದ​ಲಾದಾಗ ಚೆಂಡಿನ ವರ್ತನೆ ಬದ​ಲಾ​ಗು​ತ್ತದೆ. ಇದು ನನ್ನಲ್ಲಿ ಗೊಂದಲ ಮೂಡಿ​ಸಿತ್ತು. ಆದರೆ ರಾಹುಲ್‌ ಸರ್‌, ನನ್ನನ್ನು ಸಮಾ​ಧಾನಗೊಳಿ​ಸಿ​ದರು. ಆಟವನ್ನು ಆನಂದಿ​ಸು​ವಂತೆ ಸಲಹೆ ನೀಡಿ​ದರು. ದೇಶ​ಕ್ಕಾಗಿ ಆಡುವ ಛಲ ಕಳೆ​ದು​ಕೊ​ಳ್ಳ​ದಂತೆ ಹುರಿ​ದುಂಬಿ​ಸಿ​ದ​ರು’ ಎಂದು ವಿದ್ಯಾಧರ್‌ ಹೇಳಿ​ದರು.

ಅಂಡರ್-19 ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ರಾಯಚೂರಿನ ಹುಡುಗ, ನಮ್ಮ ಹೆಮ್ಮೆ

ವಿದ್ಯಾ​ಧರ್‌ಗೆ ಕೆಪಿಎಲ್‌ನಲ್ಲಿ ಕರ್ನಾ​ಟ​ಕದ ಹಿರಿಯ ಹಾಗೂ ಅನು​ಭವಿ ವೇಗಿ​ಗ​ಳಾದ ವಿನಯ್‌ ಕುಮಾರ್‌ ಹಾಗೂ ಎಸ್‌.ಅ​ರ​ವಿಂದ್‌ರಿಂದ ಮಾರ್ಗ​ದ​ರ್ಶನ ಸಿಕ್ಕಿದೆ. 2018ರಲ್ಲಿ ಬೆಂಗ​ಳೂರು ಬ್ಲಾಸ್ಟ​ರ್ಸ್ ತಂಡ​ದ​ಲ್ಲಿದ್ದ ಅವ​ರಿಗೆ ಆಡುವ ಅವ​ಕಾಶ ಸಿಕ್ಕಿ​ರ​ಲಿಲ್ಲ. ಆದರೆ 2019ರಲ್ಲಿ ಹುಬ್ಬಳ್ಳಿ ಟೈಗ​ರ್ಸ್ ತಂಡದಲ್ಲಿ ಸ್ಥಾನ ಪಡೆ​ದಿದ್ದ ವಿದ್ಯಾ​ಧರ್‌, ಉತ್ತಮ ಪ್ರದ​ರ್ಶನ ತೋರಿ​ದ್ದರು.

ಅಭ್ಯಾಸಕ್ಕಾಗಿ 7 ಕಿ.ಮೀ. ಸೈಕಲ್‌ ತುಳಿಯುತ್ತಿದ್ದ ವೇಗಿ!

ರಾಯಚೂರು ಜಿಲ್ಲೆಯ ಚಿಕ್ಕಸಗೂರು ಗ್ರಾಮದಲ್ಲಿ ಹುಟ್ಟಿ ಬೆಳೆದಿರುವ ವಿದ್ಯಾಧರ್‌ ಪಾಟೀಲ್‌, 10ನೇ ವಯಸ್ಸಿನಲ್ಲಿ ಕ್ರಿಕೆಟ್‌ ಆಟಕ್ಕೆ ಮನಸೂರೆ ಗೊಂಡರು. ತಂದೆ ಸೋಮಶೇಖರ್‌ ಆಸೆಯಂತೆ ರಾಯಚೂರು ವಲಯದ ಕ್ರಿಕೆಟ್‌ ಅಕಾಡೆಮಿಗೆ ಸೇರಿಕೊಂಡರು. ವಿದ್ಯಾಧರ್‌ ಬ್ಯಾಟ್ಸ್‌ಮನ್‌ ಆಗಬೇಕು ಎನ್ನುವುದು ತಂದೆಯ ಆಸೆಯಾಗಿತ್ತು. ಆದರೆ ವಿದ್ಯಾಧರ್‌ಗೆ ತರಬೇತಿ ನೀಡುತ್ತಿದ್ದ ಕೋಚ್‌ ವೆಂಕಟ್‌ ರೆಡ್ಡಿ ಅವರಿಗೆ ಮಾತ್ರ ಇವರಲ್ಲಿ ಬೌಲರ್‌ ಒಬ್ಬ ಕಾಣಿಸಿಕೊಂಡಿದ್ದ. ವಿದ್ಯಾಧರ್‌ ಎತ್ತರದ ಹುಡುಗ, ವೇಗದ ಬೌಲರ್‌ಗೆ ಇರ​ಬೇ​ಕಿ​ರುವ ಗುಣಗಳು ಇವ​ರ​ಲ್ಲಿದ್ದ ಕಾರಣ ಕೋಚ್‌ ವೆಂಕಟ್‌ ವೇಗದ ಬೌಲರ್‌ ಆಗಲು ಸೂಚಿಸಿದ್ದರಂತೆ. ವಿದ್ಯಾಧರ್‌ ವೇಗದ ಬೌಲರ್‌ ಆಗಿ ರೂಪುಗೊಳ್ಳಲು ಸುಮಾರು 7 ವರ್ಷ ಕಷ್ಟಪಟ್ಟಿದ್ದಾರೆ. ‘ವಿದ್ಯಾಧರ್‌ ಪ್ರತಿದಿನ ಚಿಕ್ಕಸಗೂರಿನಿಂದ 7 ಕಿ.ಮೀ. ಸೈಕಲ್‌ ತುಳಿದುಕೊಂಡು ರಾಯಚೂರು ವಲಯ ಕ್ರಿಕೆಟ್‌ ಅಕಾಡೆಮಿಗೆ ಅಭ್ಯಾಸಕ್ಕೆ ಹೋಗುತ್ತಿದ್ದ. ಆತನ ಶ್ರಮಕ್ಕೆ ಈಗ ಪ್ರತಿಫಲ ದೊರೆಯುತ್ತಿದೆ’ ಎಂದು ವಿದ್ಯಾ​ಧರ್‌ರ ತಾಯಿ ಕವಿತಾ ಪಾಟೀಲ್‌ ಸಂತಸ ವ್ಯಕ್ತ​ಪ​ಡಿ​ಸಿ​ದ​ರು.

ಸದ್ಯ ರಾಯಚೂರಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾಧರ್‌, ಭವಿ​ಷ್ಯ​ದಲ್ಲಿ ಭಾರತ ತಂಡ​ದಲ್ಲಿ ಆಡುವ ಕನಸು ಕಾಣು​ತ್ತಿ​ದ್ದಾ​ರೆ. ಅಂಡರ್‌-19 ವಿಶ್ವ​ಕಪ್‌ನಲ್ಲಿ ಉತ್ತಮ ಪ್ರದ​ರ್ಶನ ತೋರಿ, ಸದ್ಯದಲ್ಲೇ ಕರ್ನಾ​ಟಕ ಹಿರಿಯರ ತಂಡಕ್ಕೆ ಪದಾ​ರ್ಪಣೆ ಮಾಡು​ವುದು ಅವರ ಗುರಿ​ಯಾ​ಗಿದೆ.
 

Follow Us:
Download App:
  • android
  • ios