ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸಿರೀಸ್ ಆಡಲಿದೆ. ನಾಳೆಯಿಂದ ಮೊದಲ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಪ್ಲೇಯಿಂಗ್-11 ಮಾಜಿ ಕ್ರಿಕೆಟಿಕ ಆಕಾಶ್ ಚೋಪ್ರಾ ಪ್ರಕಟಿಸಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯವು ಶನಿವಾರದಿಂದ (ನಾಳೆ) ಗಾಲ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಪಂದ್ಯವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿದ್ದು ಇದು ಟೀಮ್ ಇಂಡಿಯಾದ 600ನೇ ಐತಿಹಾಸಿಕ ಟೆಸ್ಟ್ ಪಂದ್ಯವಾಗಿದೆ. ಈ ಮೈಲಿಗಲ್ಲು ತಲುಪಿದ ವಿಶ್ವದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ (ಈ ಮೊದಲು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಾತ್ರ ಈ ಸಾಧನೆ ಮಾಡಿವೆ).

ಈ ಮಹತ್ವದ ಪಂದ್ಯಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ಕಾಮೆಂಟೇಟರ್ ಆಕಾಶ್ ಚೋಪ್ರಾ ತಮ್ಮ ನೆಚ್ಚಿನ ಪ್ಲೇಯಿಂಗ್ 11 ಅನ್ನು ಆಯ್ಕೆ ಮಾಡಿದ್ದಾರೆ. ಅವರು ಆಯ್ಕೆ ಮಾಡಿದ ತಂಡದಲ್ಲಿ ಕೆಲವು ಅಚ್ಚರಿಯ ನಿರ್ಧಾರಗಳಿವೆ. ಆರಂಭಿಕ ಆಟಗಾರರ ಸ್ಥಾನದ ಬಗ್ಗೆ ಮಾತನಾಡಿದ ಚೋಪ್ರಾ, ಓಪನರ್‌ಗಳಾಗಿ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನುಭವಿ ರಾಹುಲ್ ಮತ್ತು ಯುವ ಪ್ರತಿಭೆ ಜೈಸ್ವಾಲ್ ಜೋಡಿ ತಂಡಕ್ಕೆ ಭದ್ರ ಬುನಾದಿ ನೀಡಬಲ್ಲದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

3ನೇ ಕ್ರಮಾಂಕದಲ್ಲಿ ಪಡಿಕ್ಕಲ್

ಸಾಯಿ ಸುದರ್ಶನ್ ಅಲಭ್ಯತೆಯಿಂದಾಗಿ ಮೂರನೇ ಕ್ರಮಾಂಕದ ಬಗ್ಗೆ ಕುತೂಹಲವಿತ್ತು. ಈ ಸ್ಥಾನಕ್ಕೆ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಚೋಪ್ರಾ ಆಯ್ಕೆ ಮಾಡಿದ್ದಾರೆ. ಪಡಿಕ್ಕಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು 3ನೇ ಕ್ರಮಾಂಕಕ್ಕೆ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 4ನೇ ಕ್ರಮಾಂಕದಲ್ಲಿ ನಾಯಕ ಗಿಲ್ ಮತ್ತು 5ನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಪಂತ್ ಅವರನ್ನು ಹೆಸರಿಸಿದ್ದಾರೆ.

ಇತ್ತೀಚೆಗಷ್ಟೇ ತಂಡಕ್ಕೆ ಸೇರ್ಪಡೆಯಾಗಿರುವ ಸರ್ಫರಾಜ್ ಖಾನ್ ಅವರಿಗೆ ಆಕಾಶ್ ಚೋಪ್ರಾ ತಮ್ಮ ಪ್ಲೇಯಿಂಗ್ 11 ನಲ್ಲಿ ಅವಕಾಶ ನೀಡಿಲ್ಲ. ಬದಲಾಗಿ 6ನೇ ಕ್ರಮಾಂಕಕ್ಕೆ ಧ್ರುವ್ ಜುರೆಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಜುರೆಲ್ ಸ್ಪಿನ್ ಬೌಲಿಂಗ್ ಅನ್ನು ಚೆನ್ನಾಗಿ ಎದುರಿಸುತ್ತಾರೆ. ಹೀಗಾಗಿ ಅವರು ನನ್ನ ಆಯ್ಕೆ ಎಂದು ಚೋಪ್ರಾ ಹೇಳಿದ್ದಾರೆ.

ಬೌಲಿಂಗ್ ವಿಭಾಗ ಹೇಗಿದೆ?

ಗಾಲ್ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುವ ಸಾಧ್ಯತೆ ಇರುವುದರಿಂದ ಚೋಪ್ರಾ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಜಡೇಜಾ, ಕುಲದೀಪ್ ಯಾದವ್ ಮತ್ತು ಯುವ ಸ್ಪಿನ್ನರ್ ಮಾನವ್ ಸುತಾರ್ ಅವರಿಗೆ ಸ್ಥಾನ ನೀಡಿದ್ದಾರೆ. ವೇಗಿಗಳಾಗಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ಅವರನ್ನು ತಂಡದಲ್ಲಿ ಇರಿಸಿಕೊಂಡಿದ್ದಾರೆ.

ಆಕಾಶ್ ಚೋಪ್ರಾ ಆಯ್ಕೆಯ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

Scroll to load tweet…