ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಸೋತಿದೆ. ಪಂದ್ಯದ ನಂತರ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, 17ನೇ ಓವರ್ ಪಂದ್ಯದ ಗತಿಯನ್ನೇ ಬದಲಿಸಿತು ಎಂದು ಹೇಳಿದ್ದಾರೆ. ಸೋಲಿನ ನಡುವೆಯೂ ಅವರು ಯುವ ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿದರು.

ಲಂಡನ್: ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್‌ಗಳ ಸೋಲು ಅನುಭವಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 0-1 ರ ಹಿನ್ನಡೆ ಅನುಭವಿಸಿದೆ. ಪಂದ್ಯದ ನಂತರ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ತಂಡದ ಸೋಲಿಗೆ ಪ್ರಮುಖ ಕಾರಣವೇನು ಮತ್ತು ಪಂದ್ಯ ಎಲ್ಲಿ ಕೈತಪ್ಪಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮ್ಯಾಚ್ ಟರ್ನಿಂಗ್ ಪಾಯಿಂಟ್ ಯಾವುದು?

ಭಾರತ ನೀಡಿದ್ದ 191 ರನ್‌ಗಳ ಗುರಿ ಬೆನ್ನತ್ತಿ ಇಂಗ್ಲೆಂಡ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಅರ್ಶದೀಪ್ ಸಿಂಗ್ ಮೊದಲ ಓವರ್‌ನಲ್ಲೇ ಫಿಲ್

ಸಾಲ್ಟ್ ಮತ್ತು ಜೋಸ್ ಬಟ್ಲರ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಭರ್ಜರಿ ಆರಂಭ ನೀಡಿದ್ದರು. ಆದರೆ ಹ್ಯಾರಿ ಬ್ರೂಕ್ (39), ಜಾಕೋಬ್ ಬೆಥೆಲ್ (76) ಮತ್ತು ಟಾಮ್ ಬ್ಯಾಂಟನ್ (39) ಅಬ್ಬರದ ಆಟವಾಡಿ ಇಂಗ್ಲೆಂಡ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಪಂದ್ಯದ 16 ಓವರ್‌ಗಳ ಮುಕ್ತಾಯಕ್ಕೆ ಇಂಗ್ಲೆಂಡ್‌ಗೆ 49 ರನ್‌ಗಳ ಅಗತ್ಯವಿತ್ತು (ಸರಾಸರಿ 12 ರನ್). ಆದರೆ ರವಿ ಬಿಷ್ಣೋಯಿ ಎಸೆದ 17ನೇ ಓವರ್‌ನಲ್ಲಿ ಬರೋಬ್ಬರಿ 29 ರನ್ ಹರಿದುಬಂದವು. ಇದು ಪಂದ್ಯದ ಚಿತ್ರಣವನ್ನೇ ಬದಲಿಸಿತು.

ಅಯ್ಯರ್ ನೀಡಿದ ಕಾರಣಗಳೇನು?

ನಾವು ಎಲ್ಲಿ ಎಡವಿದ್ದೇವೆ ಎಂಬುದು ನನಗೆ ಗೊತ್ತು, ಆದರೆ ನಾನು ಯಾವುದೇ ಒಬ್ಬ ಆಟಗಾರನನ್ನು ಗುರಿ ಮಾಡುವುದಿಲ್ಲ. 15 ಓವರ್‌ಗಳ ನಂತರ ನಮ್ಮ ಕೈಯಲ್ಲಿದ್ದ ಪಂದ್ಯದ ವೇಗ ಕೈತಪ್ಪಿತು. 17ನೇ ಓವರ್‌ನಲ್ಲಿ ಪಂದ್ಯ ನಮ್ಮ ಕೈಬಿಟ್ಟು ಹೋಯಿತು. ಅಲ್ಲಿ ಬಂದ ನೋ-ಬಾಲ್ ಕೂಡ ನಮಗೆ ಹೊರೆಯಾಯಿತು. ಬಿಷ್ಣೋಯಿ ಈ ತಪ್ಪಿನಿಂದ ಕಲಿಯುತ್ತಾರೆ ಮತ್ತು ಬಲಿಷ್ಠವಾಗಿ ಮರಳುತ್ತಾರೆ ಎಂಬ ನಂಬಿಕೆ ಇದೆ. ಸ್ಯಾಮ್ ಕರನ್ ಮೈದಾನದ ಆಯಾಮಗಳನ್ನು ಸರಿಯಾಗಿ ಅರ್ಥೈಸಿಕೊಂಡಿದ್ದರು. ಅವರು ನಮ್ಮ ಎಡಗೈ ಬ್ಯಾಟರ್‌ಗಳಿಗೆ ಹೊಡೆಯಲು ಹೆಚ್ಚಿನ ಅವಕಾಶ ನೀಡಲಿಲ್ಲ ಎಂದು ಅಯ್ಯರ್ ತಿಳಿಸಿದರು.

ಸೋಲಿನ ನಡುವೆಯೂ ಅಯ್ಯರ್, ಕೆಲವರನ್ನ ಶ್ಲಾಘಿಸಿದರು. ಕೇವಲ 11 ಎಸೆತಗಳಲ್ಲಿ 24 ರನ್ ಗಳಿಸಿದ ತಿಲಕ್ ವರ್ಮಾ ಮತ್ತು ಯಾವುದೇ ಭಯವಿಲ್ಲದೆ ಆಡಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೈಭವ್ ಆಟವನ್ನು ನೋಡುವುದು ಅದ್ಭುತವಾಗಿತ್ತು, ಅವರು ನರ್ವಸ್ ಆಗಿರಲಿಲ್ಲ ಎಂದು ಅಯ್ಯರ್ ಹೇಳಿದರು.

ನಾಯಕನ ಹೆಸರಲ್ಲಿ ಕೆಟ್ಟ ದಾಖಲೆ!

ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಗೆಲುವಿಗಾಗಿ ಕಾಯುತ್ತಿರುವ ಶ್ರೇಯಸ್ ಅಯ್ಯರ್ ಹೆಸರಲ್ಲಿ ಒಂದು ನಾಚಿಕೆಗೇಡಿನ ದಾಖಲೆ ಸೇರಿಕೊಂಡಿದೆ. ಭಾರತ ತಂಡವನ್ನು 3ಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ 12 ನಾಯಕರಲ್ಲಿ, ಶ್ರೇಯಸ್ ಅಯ್ಯರ್ ಮಾತ್ರ ತಮ್ಮ ಆರಂಭಿಕ 4 ಪಂದ್ಯಗಳಲ್ಲಿ ಒಂದು ಗೆಲುವು ಕೂಡ ಕಂಡಿಲ್ಲ (ಐರ್ಲೆಂಡ್‌ನಲ್ಲಿ 2 ಸೋಲು, ಇಂಗ್ಲೆಂಡ್‌ನಲ್ಲಿ 1 ರದ್ದು ಮತ್ತು 1 ಸೋಲು). ಈಗ ಸರಣಿ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಳ್ಳಲು ಮುಂದಿನ ಪಂದ್ಯದಲ್ಲಿ ಅಯ್ಯರ್ ಪಡೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.