ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಹೀನಾಯ ಸೋಲಿಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಿರಿಯ ಕ್ರಿಕೆಟಿಗರನ್ನು ಟಿ20 ತಂಡದಿಂದ ಕಿತ್ತೆಸೆಯಿರಿ ಅನ್ನೋ ಒತ್ತಡವೂ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಸಭೆ ಕರೆದಿದೆ. ಈ ಮೂಲಕ ಮೇಜರ್ ಸರ್ಜರಿಗೆ ಮುಂದಾಗಿದೆ.

ಮುಂಬೈ(ನ.11):  ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೀನಾಯ ಪ್ರದರ್ಶನ ಅರಗಿಸಿಕೊಳ್ಳಲು ಸಾಧ್ಯಾವಾಗುತ್ತಿಲ್ಲ. ಐಸಿಸಿ ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ಪರದಾಡುತ್ತಿದೆ. ಬಲಿಷ್ಠ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿ ಸೆಮಿಫೈನಲ್ ಹಂತದಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಹಿರಿಯ ಕ್ರಿಕೆಟಿಗರನ್ನು ಟೀಂ ಇಂಡಿಯಾದಿಂದ ಕೈಬಿಡಿ ಅನ್ನೋ ಒತ್ತಾಯ ಹೆಚ್ಚಾಗುತ್ತಿದೆ. ಈ ಆರೋಪ, ಟೀಕೆ, ಒತ್ತಾಯದ ಬೆನ್ನಲ್ಲೇ ಬಿಸಿಸಿಐ ಮಹತ್ವದ ಮೀಟಿಂಗ್ ಕರೆದಿದೆ. ಹಿರಿಯ ಕ್ರಿಕೆಟಿಗರನ್ನು ಕೈಬಿಡುವ ಕುರಿತು ಹಾಗೂ ಭವಿಷ್ಯದ ಟೀಂ ಇಂಡಿಯಾ ರೂಪಿಸುವ ಕುರಿತು ಬಿಸಿಸಿಐ ಸಭೆ ಕರೆದಿದೆ. ಈ ಸಭೆಯಲ್ಲಿ ಸೋಲಿಗೆ ಕಾರಣಗಳನ್ನು ಹೇಳುವಂತೆ ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್‌ಗೆ ಸೂಚಿಸಲಾಗಿದೆ. ಇನ್ನು ಈ ಸಭೆ ಮಾಜಿ ನಾಯಕ ವಿರಾಟ್ ಕೊಹ್ಲಿಗೂ ಹಾಜರಾಗುವಂತೆ ಸೂಚಿಸಲಾಗಿದೆ. ಈ ಮೂವರ ಅಭಿಪ್ರಾಯದ ಬಳಿಕ ಬಿಸಿಸಿಐ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದೆ.

ಟಿ20 ಮಾದರಿಯಲ್ಲಿ ಬಲಿಷ್ಠ ತಂಡ ರಚಿಸಲು ಬಿಸಿಸಿಐ ಮೀಟಿಂಗ್ ಕರೆಯಲಾಗಿದೆ. ಈ ಮೀಟಿಂಗ್ ಬಳಿಕ ಹಲವು ಮಹತ್ವದ ನಿರ್ಧಾರಗಳು ಹೊರಬೀಳಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಮೊದಲು ಟೀಂ ಇಂಡಿಯಾ ಮ್ಯಾನೇಜ್ಮೆಂಟ್, ಆಟಗಾರರು ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗುತ್ತದೆ. ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಗೆಲ್ಲದ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ; ಹಿರಿಯರಿಗೆ ಗೇಟ್‌ಪಾಸ್?

ಐಸಿಸಿ ವಿಶ್ವ ರಾರ‍ಯಂಕಿಂಗ್‌ನಲ್ಲಿ ನಂ.1 ತಂಡವಾಗಿ ವಿಶ್ವಕಪ್‌ಗೆ ಕಾಲಿಟ್ಟಭಾರತ, ಸೂಪರ್‌-12 ಹಂತದಲ್ಲಿ 5 ಪಂದ್ಯಗಳ ಪೈಕಿ ನಾಲ್ಕನ್ನು ಗೆದ್ದು ಗುಂಪು-2ರ ಅಗ್ರಸ್ಥಾನಿಯಾಯಿತಾದರೂ, ಅದರ ಯಾವ ಗೆಲುವೂ ಅಧಿಕಾರಯುತವಾಗಿರಲಿಲ್ಲ. ಇನ್ನೂ ಕ್ರಿಕೆಟ್‌ ಶಿಶುಗಳಾಗಿಯೇ ಇರುವ ನೆದರ್ಲೆಂಡ್‌್ಸ, ಜಿಂಬಾಬ್ವೆ ವಿರುದ್ಧ ದೊಡ್ಡ ಗೆಲುವು ಸಾಧಿಸಿದ್ದು ಹೊರತುಪಡಿಸಿದರೆ, ಯಾವ ಪಂದ್ಯದಲ್ಲೂ ಭಾರತ ಸರ್ವಾಂಗೀಣವಾಗಿ ಸಶಕ್ತ ಎನಿಸುವಂತಿರಲಿಲ್ಲ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಕೊನೆ ಎಸೆತದಲ್ಲಿ ಗೆದ್ದು ಸೋಲಿನ ದವಡೆಯಿಂದ ಪಾರಾಗಿದ್ದ ಭಾರತ, ದ.ಆಫ್ರಿಕಾಕ್ಕಂತೂ ಸುಲಭವಾಗಿ ಶರಣಾಗಿತ್ತು. ಸೆಮಿಫೈನಲ್‌, ಫೈನಲ್‌ಗಳನ್ನು ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಆತ್ಮವಿಶ್ವಾಸ ಸ್ವತಃ ತಂಡಕ್ಕೂ, ಅದರ ಅಭಿಮಾನಿಗಳಿಗೂ ಇದ್ದಂತಿರಲಿಲ್ಲ.

ರಾಹುಲ್ ದ್ರಾವಿಡ್‌ಗೆ ರೆಸ್ಟ್‌, ನ್ಯೂಜಿಲೆಂಡ್ ಪ್ರವಾಸಕ್ಕೆ ಲಕ್ಷ್ಮಣ್ ಟೀಂ ಇಂಡಿಯಾ ಹೆಡ್ ಕೋಚ್..!

ಮೊತ್ತಮೊದಲನೆಯದಾಗಿ, ಆಟಗಾರರ ಆಯ್ಕೆಯಲ್ಲೇ ತಂಡದ ಆಡಳಿತ ಎಡವಿತ್ತು. ಲಯದಲ್ಲಿದ್ದ ಆಟಗಾರರನ್ನು ಬಿಟ್ಟು ಖ್ಯಾತನಾಮರಿಗಷ್ಟೇ ಮಣೆ ಹಾಕಿದ್ದು, ತಂಡಕ್ಕೆ ದುಬಾರಿ ಆಯಿತು. ಕಣಕ್ಕಿಳಿದವರಲ್ಲಿ ಬಹುತೇಕ ಮಂದಿಗೆ ಪಂದ್ಯ ಗೆಲ್ಲಿಸಿಕೊಡುವ ಛಾತಿಯೇ ಇರಲಿಲ್ಲ. ವಿಶ್ವಕಪ್‌ಗೂ ಮೊದಲು ಟಿ20 ಪಂದ್ಯಗಳ ಪವರ್‌-ಪ್ಲೇನಲ್ಲಿ ಭಾರತದ ರನ್‌ ರೇಟ್‌ 8.6 ರನ್‌ ಇತ್ತು. ಆದರೆ, ಆರಂಭಿಕರ ವೈಫಲ್ಯದಿಂದಾಗಿ ವಿಶ್ವಕಪ್‌ನಲ್ಲಿ ಪವರ್‌ಪ್ಲೇ ರನ್‌ರೇಟ್‌ 6ಕ್ಕೆ ಕುಸಿಯಿತು. ಇದರಿಂದಾಗಿ ದೊಡ್ಡ ಮೊತ್ತ ಪೇರಿಸುವ ಒತ್ತಡ ಮಧ್ಯಮ ಕ್ರಮಾಂಕಕ್ಕೆ ಬಿತ್ತು

ಆರಂಭಿಕರಾಗಿ ಪದೇ ಪದೇ ವಿಫಲರಾಗುತ್ತಿದ್ದ ಕೆ.ಎಲ್‌.ರಾಹುಲ್‌ಗೆ ಪರಾರ‍ಯಯ ಆಟಗಾರ ಇರಲೇ ಇಲ್ಲ. ರಾಹುಲ್‌ ಅವರನ್ನು ಅತಿಯಾಗಿ ನೆಚ್ಚಿದ್ದು ಮತ್ತು ಶುಭ್‌ಮನ್‌ ಗಿಲ್‌, ಸಂಜು ಸ್ಯಾಮ್ಸನ್‌, ಪೃಥ್ವಿ ಶಾ ಅವರಂಥ ಲಯದಲ್ಲಿರುವವರನ್ನು ಕಡೆಗಣಿಸಿದ್ದು ಮುಳುವಾಯಿತು