ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ, ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಚಾಂಪಿಯನ್ ಆಗಿದೆ. ಈ ಗೆಲುವಿನಲ್ಲಿ 87 ರನ್ ಸಿಡಿಸಿ ಪ್ರಮುಖ ಪಾತ್ರವಹಿಸಿದ ಮಂಧನಾ, ತೀವ್ರ ಜ್ವರದ ನಡುವೆಯೂ ಫೈನಲ್ ಪಂದ್ಯವನ್ನಾಡಿದ್ದರು ಎಂಬ ಸತ್ಯ ಬಹಿರಂಗವಾಗಿದೆ.

ಬೆಂಗಳೂರು: ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸತತ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್‌ಸಿಬಿ ತಂಡವು ಆರು ವಿಕೆಟ್ ಅಂತರದ ರೋಚಕ ಜಯ ಸಾಧಿಸಿದೆ. 

ಗೆಲ್ಲಲು ಬರೋಬ್ಬರಿ 204 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ಎರಡು ಎಸೆತ ಬಾಕಿ ಇರುವಂತೆಯೇ ರೋಚಕ ಜಯ ಸಾಧಿಸಿತು. ಇನ್ನು ನಾಯಕಿ ಸ್ಮೃತಿ ಮಂಧನಾ ಸ್ಪೋಟಕ ಅರ್ಧಶತಕ ಸಿಡಿಸಿ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಫೈನಲ್ ಪಂದ್ಯಕ್ಕೂ ಮುನ್ನ ಸ್ಮೃತಿ ಮಂಧನಾ ವಿಪರೀತ ಜ್ವರದಿಂದ ಬಳಲುತ್ತಿದ್ದರೂ ಎನ್ನುವ ವಿಚಾರ ಬಹಿರಂಗವಾಗಿದೆ. ಹೀಗಿದ್ದೂ ಮಂಧನಾ 41 ಎಸೆತಗಳಲ್ಲಿ ಆಕರ್ಷಕ 87 ರನ್ ಸಿಡಿಸಿದ್ದರು.

ಫೈನಲ್‌ಗೂ ಮೊದಲು ವಿಪರೀತ ಜ್ವರದಿಂದ ಬಳಲುತ್ತಿದ್ದ ಸ್ಮೃತಿ ಮಂಧನಾ!

ವಡೋದರಾದಲ್ಲಿ ನಡೆದ ಫೈನಲ್‌ನಲ್ಲಿ ಆರ್‌ಸಿಬಿ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಮಾತನಾಡಿದ ಬೆಂಗಳೂರು ಮಹಿಳಾ ತಂಡದ ಹೆಡ್‌ಕೋಚ್ ಮಲೋಲನ್ ರಂಗರಾಜ್, ಸ್ಮೃತಿ ಮಂಧನಾಗೆ ವಿಪರೀತ ಜ್ವರವಿತ್ತು. ಆಕೆಗೆ ತುಂಬಾ ಜ್ವರವಿದ್ದಿದ್ದರಿಂದ, ಆರೋಗ್ಯ ಕೈಕೊಟ್ಟಿತ್ತು. ಆದರೆ ಅದನ್ನು ಆಕೆ ತಂಡದ ಉಳಿದ ಆಟಗಾರ್ತಿಯರಿಗೂ ಗೊತ್ತಾಗದಂತೆ ಇದ್ದರು. ನೀನು ಫೈನಲ್ ಆಡಬಹುದಾ ಎಂದು ನಾನು ಫೈನಲ್‌ಗೂ ಮುಂಚೆ ಸ್ಮೃತಿಯನ್ನು ಕೇಳಿದೆ. ಆಗ ಆಕೆ ತೊಂದರೆಯಿಲ್ಲ, ನಾನು ಆಡುತ್ತೇನೆ ಎಂದು ಫೈನಲ್‌ಗೆ ರೆಡಿಯಾದರು ಎಂದು ಆರ್‌ಸಿಬಿ ಹೆಡ್‌ಕೋಚ್ ಹೇಳಿದ್ದಾರೆ.

ಬೃಹತ್‌ ಗುರಿ ಬೆನ್ನತ್ತಲು ಇಳಿದ ಆರ್‌ಸಿಬಿ ಆರಂಭದಲ್ಲೇ ಆಘಾತ ಎದುರಾಯಿತು. ಗ್ರೇಸ್‌ ಹ್ಯಾರಿಸ್‌ 9 ರನ್‌ಗೆ ಔಟಾದರು. ಆದರೆ ನಾಯಕಿ ಸ್ಮೃತಿ ಮಂಧನಾ ಹಾಗೂ ಜಾರ್ಜಿಯಾ ವೊಲ್‌, ಡೆಲ್ಲಿ ಬೌಲರ್‌ಗಳ ಬೆವರಿಳಿಸಿದರು. ವೇಗವಾಗಿ ರನ್‌ ಕಲೆಹಾಕುತ್ತಾ ಬಂದ ಈ ಜೋಡಿ 2ನೇ ವಿಕೆಟ್‌ಗೆ 92 ಎಸೆತಗಳಲ್ಲಿ 165 ರನ್‌ ಸೇರಿಸಿತು. ವೊಲ್‌ 54 ಎಸೆತಗಳಲ್ಲಿ 79 ರನ್‌ ಸಿಡಿಸಿದರೆ, ಸ್ಮೃತಿ 41 ಎಸೆತಗಳಲ್ಲಿ 87 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಫೈನಲ್‌ನಲ್ಲಿ ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲೇ ಫಾರ್ಮ್‌ನಲ್ಲಿದ್ದ ಆಟಗಾರ್ತಿ ಗ್ರೇಸ್ ಹ್ಯಾರಿಸ್ ವಿಕೆಟ್ ಕಳೆದುಕೊಂಡಿದ್ದರಿಂದ ಕೊಂಚ ಆಘಾತಕ್ಕೊಳಗಾಯಿತು. ಹೀಗಾಗಿ ಸ್ಮೃತಿ ಮೊದಲ ಆರು ಎಸೆತಗಳಲ್ಲಿ 5 ರನ್ ಗಳಿಸಿ ಎಚ್ಚರಿಕೆಯ ಆರಂಭ ಮಾಡಿದರು. ಇದಾದ ಬಳಿಕ ಮೈ ಚಳಿ ಬಿಟ್ಟು ಬ್ಯಾಟ್ ಬೀಸಿದ ಸ್ಮೃತಿ ಮಂಧನಾ ಕೇವಲ 23 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಅಬ್ಬರಿಸಿದರು.

Scroll to load tweet…

ಬ್ರೇಕ್‌ಅಪ್ ನೋವು ಮರೆಸಿದ ಆರ್‌ಸಿಬಿ ಗೆಲುವು!

ಇತ್ತೀಚೆಗಷ್ಟೇ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಚೊಚ್ಚಲ ಬಾರಿಗೆ ಐಸಿಸಿ ಟ್ರೋಫಿ ಗೆದ್ದು ಬೀಗಿತ್ತು. ಇದರ ಬೆನ್ನಲ್ಲೇ ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧನಾ ನಡುವೆ ಮದುವೆಗೆ ಕ್ಷಣಗಣನೆ ಶುರುವಾಗಿತ್ತು. ಆದರೆ ಮದುವೆಯ ಹಿಂದಿನ ದಿನ ಪಲಾಶ್ ಮುಚ್ಚಲ್ ಬೇರೆ ಯುವತಿಯ ಜತೆಗೆ ರೊಮ್ಯಾನ್ಸ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಸ್ಮೃತಿ ತಂದೆಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಮದುವೆ ಮುಂದಾಡಲಾಗಿತ್ತು. ಇನ್ನು ಸ್ಮೃತಿ ತಂದೆ ಚೇತರಿಸಿಕೊಂಡ ಬೆನ್ನಲ್ಲೇ ಸ್ಮೃತಿ ಹಾಗೂ ಪಲಾಶ್ ನಡುವೆ ಬ್ರೇಕ್‌ ಅಪ್‌ ಆಗಿತ್ತು. ಕಳೆದ ಒಂದೂವರೆ ತಿಂಗಳು ಸಾಕಷ್ಟು ನೋವು ಅನುಭವಿಸಿದ್ದ ಸ್ಮೃತಿಗೆ ಈ ಆರ್‌ಸಿಬಿ ಗೆಲುವು ನೋವು ಮರೆಸುವಂತೆ ಮಾಡಿರುವುದಂತೂ ಸುಳ್ಳಲ್ಲ.

Scroll to load tweet…

ಆರೆಂಜ್ ಕ್ಯಾಪ್ ಗೆದ್ದ ಆರ್‌ಸಿಬಿ ಕ್ಯಾಪ್ಟನ್:

ಫೈನಲ್ ಪಂದ್ಯಕ್ಕೂ ಮುನ್ನ 8 ಪಂದ್ಯಗಳನ್ನಾಡಿ 297 ರನ್ ಗಳಿಸಿದ್ದ ನಾಯಕಿ ಸ್ಮೃತಿ ಮಂಧನಾ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್(342), ನ್ಯಾಟ್ ಸೀವರ್ ಬ್ರಂಟ್(321) ಹಾಗೂ ಲಿಜೆಲ್ಲೇ ಲೀ(321) ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸ್ಮೃತಿ ಮಂಧನಾ 9 ಪಂದ್ಯಗಳನ್ನಾಡಿ 53.86ರ ಬ್ಯಾಟಿಂಗ್ ಸರಾಸರಿಯಲ್ಲಿ ಮೂರು ಅರ್ಧಶತಕ ಸಹಿತ 377 ರನ್ ಸಿಡಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು.

Scroll to load tweet…

ಐಪಿಎಲ್‌, ಡಬ್ಲ್ಯುಪಿಎಲ್‌ ಫೈನಲ್‌ ಇತಿಹಾಸದಲ್ಲೇ ಗರಿಷ್ಠ ಸ್ಕೋರ್‌ ಚೇಸ್‌!

ಆರ್‌ಸಿಬಿ ತಂಡ 204 ರನ್‌ ಬೆನ್ನತ್ತಿ ಗೆದ್ದಿದ್ದು, ಐಪಿಎಲ್‌ ಹಾಗೂ ಡಬ್ಲ್ಯುಪಿಎಲ್‌ ಫೈನಲ್‌ ಇತಿಹಾಸದಲ್ಲೇ ಗರಿಷ್ಠ ರನ್‌ ಚೇಸ್‌. 2014ರ ಐಪಿಎಲ್‌ನಲ್ಲಿ ಪಂಜಾಬ್‌ 199 ರನ್‌ ಸಿಡಿಸಿದ್ದರೆ, 200 ರನ್‌ ಬೆನ್ನತ್ತಿ ಕೆಕೆಆರ್‌ ಗೆದ್ದಿತ್ತು. ಇನ್ನು ಡಬ್ಲ್ಯುಪಿಎಲ್‌ನಲ್ಲಿ ಗರಿಷ್ಠ ರನ್‌ ಚೇಸ್‌ ದಾಖಲೆ ಇದ್ದಿದ್ದು ಮುಂಬೈ ಹೆಸರಲ್ಲಿ. 2023ರಲ್ಲಿ ಡೆಲ್ಲಿ ವಿರುದ್ಧ ಮುಂಬೈ 132 ರನ್‌ ಬೆನ್ನತ್ತಿ ಜಯಗಳಿಸಿತ್ತು.