ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್‌ನಲ್ಲಿ ಶಿವಮೊಗ್ಗ ಯೋಧಾಸ್‌ ತಂಡವು ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಚಾಂಪಿಯನ್‌ ಪಟ್ಟಕ್ಕೇರಿತು. ನಾಯಕ ಲವ್‌ನಿತ್‌ ಸಿಸೋಡಿಯಾ ಅವರ ಸ್ಫೋಟಕ 87 ರನ್‌ಗಳ ನೆರವಿನಿಂದ ಶಿವಮೊಗ್ಗ ಗೆಲುವಿನ ನಗೆ ಬೀರಿದರೆ, ಬೆಂಗಳೂರು ಪರ ಸಮಿತ್ ದ್ರಾವಿಡ್ ಅವರ ಆಲ್‌ರೌಂಡ್ ಪ್ರದರ್ಶನ ವ್ಯರ್ಥವಾಯಿತು.

ಬೆಂಗಳೂರು: ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶಿವಮೊಗ್ಗ ಯೋಧಾಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ 5ನೇ ಆವೃತ್ತಿ ಟೂರ್ನಿಯ ಫೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಎರಡು ಎಸೆತಗಳು ಬಾಕಿ ಇರುವಂತೆಯೇ ಶಿವಮೊಗ್ಗ 4 ವಿಕೆಟ್ ರೋಚಕ ಗೆಲುವು ಸಾಧಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 8 ವಿಕೆಟ್‌ಗೆ 185 ರನ್‌ ಕಲೆಹಾಕಿತು. ಭುವನ್‌ ರಾಜು 23, ರೋಹನ್‌ ಪಾಟೀಲ್‌ 11, ಸಮಿತ್‌ ದ್ರಾವಿಡ್‌ 37, ನಾಯಕ ಶುಭಾಂಗ್‌ ಹೆಗ್ಡೆ 31 ರನ್‌ ಗಳಿಸಿದರು. ತಂಡ 16 ಓವರ್‌ ಅಂತ್ಯಕ್ಕೆ 5 ವಿಕೆಟ್‌ಗೆ 115 ರನ್‌ ಗಳಿಸಿತ್ತು. ಆದರೆ ಕೊನೆಯಲ್ಲಿ ಅಬ್ಬರಿಸಿದ ವಾಹಿದ್‌ ಫೈಝಾನ್‌ ಖಾನ್‌(8 ಎಸೆತಗಳಲ್ಲಿ 29) ಹಾಗೂ ರೋಹನ್‌ ನವೀನ್‌(8 ಎಸೆತಕ್ಕೆ ಔಟಾಗದೆ 25) ದೊಡ್ಡ ಮೊತ್ತ ಕಲೆಹಾಕಲು ನೆರವಾದರು.

ಶಿವಮೊಗ್ಗ ಯೋಧಾಸ್ ಪರ ಧನುಶ್ ಗೌಡ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ಅಭಿಲಾಷ್ ಶೆಟ್ಟಿ, ಯಶೋವರ್ಧನ್ ಪರನ್‌ತಾಪ್, ನವೀನ್ ಎಂ.ಜಿ., ಶ್ರೀಶಾ ಆಚಾರ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಶಿವಮೊಗ್ಗಕ್ಕೆ ಆಸರೆಯಾದ ನಾಯಕ ಸಿಸೋಡಿಯಾ

ಗುರಿ ಬೆನ್ನತ್ತಿದ ಶಿವಮೊಗ್ಗ ಆರಂಭದಲ್ಲೇ ತುಷಾರ್ ಸಿಂಗ್ ವಿಕೆಟ್ ಕಳೆದುಕೊಂಡಿತು. ಸಮಿತ್ ದ್ರಾವಿಡ್ ಎಸೆತದಲ್ಲಿ ಖಾತೆ ತೆರೆಯುವ ಮುನ್ನವೇ ತುಷಾರ್ ಪೆವಿಲಿಯನ್ ಹಾದಿ ಹಿಡಿದರು. ಆದರೆ ಮತ್ತೋರ್ವ ಆರಂಭಿಕ ಬ್ಯಾಟರ್ ಹಾಗೂ ನಾಯಕ ಲವ್‌ನಿತ್‌ ಸಿಸೋಡಿಯಾ ಆಸರೆಯಾದರು. ಅವರು 45 ಎಸೆತಗಳಲ್ಲಿ 87 ರನ್‌ ಸಿಡಿಸಿ, ತಂಡವನ್ನು 19.4 ಓವರ್‌ಗಳಲ್ಲಿ ಗೆಲ್ಲುವಂತೆ ಮಾಡಿದರು. ಕೆ.ವಿ.ಅನೀಶ್‌ 19 ಎಸೆತಕ್ಕೆ 38 ರನ್‌ ಕೊಡುಗೆ ನೀಡಿದರು. ಇನ್ನುಳಿದಂತೆ ನವೀನ್ ಎಂ.ಜಿ. 28 ಹಾಗೂ ಹರ್ಷಿಲ್ ಧರ್ಮಾನಿ 17 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.

Scroll to load tweet…

ಸಮಿತ್ ದ್ರಾವಿಡ್ ಹೋರಾಟ ವ್ಯರ್ಥ!

ಇನ್ನು ಬೆಂಗಳೂರು ಬ್ಲಾಸ್ಟರ್ಸ್‌ ಪರವಾಗಿ ಮಧ್ಯಮ ವೇಗದ ಬೌಲರ್ ಸಮಿತ್ ದ್ರಾವಿಡ್ ಮಿಂಚಿನ ದಾಳಿ ನಡೆಸುವ ಮೂಲಕ ಫೈನಲ್‌ನಲ್ಲಿ ಗಮನ ಸೆಳೆದರು. ಸಮಿತ್ ದ್ರಾವಿಡ್ 3.4 ಓವರ್‌ನಲ್ಲಿ 36 ರನ್ ನೀಡಿ ಶಿವಮೊಗ್ಗ ತಂಡದ ಪ್ರಮುಖ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಆದರೆ ಉಳಿದ ಬೌಲರ್‌ಗಳಿಂದ ಸಮಿತ್‌ಗೆ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ ಸಮಿತ್ ಹೋರಾಟ ವ್ಯರ್ಥವಾಯಿತು.