ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ನಂತರ ನಿವೃತ್ತಿ ಘೋಷಿಸಲು ಉದ್ದೇಶಿಸಿದ್ದರು ಎಂದು ವರದಿಗಳು ಹೇಳುತ್ತಿವೆ. ಕಳಪೆ ಪ್ರದರ್ಶನದಿಂದಾಗಿ ಮೆಲ್ಬರ್ನ್ ಟೆಸ್ಟ್ ಬಳಿಕ ನಿವೃತ್ತಿ ಬಗ್ಗೆ ಚಿಂತಿಸಿದ್ದರೂ, ಹಿತೈಶಿಗಳ ಒತ್ತಾಯದ ಮೇರೆಗೆ ನಿರ್ಧಾರ ಕೈಬಿಟ್ಟರು. ಇದು ಗಂಭೀರ್ ಅವರೊಂದಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ರೋಹಿತ್ ನಿವೃತ್ತಿ ವದಂತಿಗಳನ್ನು ಅಲ್ಲಗಳೆದಿದ್ದಾರೆ.

ನವದೆಹಲಿ: ಭಾರತದ ನಾಯಕ ರೋಹಿತ್‌ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 4ನೇ ಪಂದ್ಯದ ಬಳಿಕವೇ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

Add Asianetnews Kannada as a Preferred SourcegooglePreferred

ರೋಹಿತ್‌ ಶರ್ಮಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ ಆಡಿರಲಿಲ್ಲ. ಆ ಬಳಿಕ 3 ಪಂದ್ಯದಲ್ಲಿ ಆಡಿದ್ದರೂ, ತೀವ್ರ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಮೆಲ್ಬರ್ನ್‌ ಟೆಸ್ಟ್‌ ಬಳಿಕ ರೋಹಿತ್‌ ನಿವೃತ್ತಿ ಬಗ್ಗೆ ಯೋಚಿಸಿದ್ದರು. ಆದರೆ ಅವರ ಹಿತೈಶಿಗಳು ನಿರ್ಧಾರದಿಂದ ಹಿಂದೆ ಸರಿಯುವಂತೆ ರೋಹಿತ್‌ಗೆ ಒತ್ತಾಯಿಸಿದ್ದಾರೆ. ಹೀಗಾಗಿ ರೋಹಿತ್‌ ಶರ್ಮಾ ನಿವೃತ್ತಿ ನಿರ್ಧಾರ ಕೈಬಿಟ್ಟರು ಎಂದು ವರದಿಯಾಗಿದೆ.

ವಿಜಯ್ ಹಜಾರೆ ಟ್ರೋಫಿ: ದೇವದತ್ ಪಡಿಕ್ಕಲ್ ಆಕರ್ಷಕ ಶತಕ, ಕರ್ನಾಟಕ ರೋಚಕವಾಗಿ ಸೆಮೀಸ್‌ಗೆ ಲಗ್ಗೆ

ಆದರೆ ಇದರಿಂದ ಕೋಚ್‌ ಗೌತಮ್‌ ಗಂಭೀರ್‌ ತೀವ್ರ ಅಸಮಾಧಾನಗೊಂಡಿದ್ದರು. ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಸರಣಿ ವೇಳೆ ಡ್ರೆಸ್ಸಿಂಗ್‌ ಕೋಣೆಯಲ್ಲಿ ಹಿರಿಯ ಆಟಗಾರರು, ಕೋಚ್‌ ನಡುವೆ ಭಿನ್ನಮತ ತಲೆದೋರಿದ್ದಾಗಿ ವರದಿಯಾಗಿತ್ತು. ರೋಹಿತ್‌ ಶರ್ಮಾ ಸರಣಿ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಟೆಸ್ಟ್‌ ನಿವೃತ್ತಿ ಸುದ್ದಿಯನ್ನು ರೋಹಿತ್‌ ಅಲ್ಲಗಳೆದಿದ್ದರು.

ಟೆಸ್ಟ್ ಸೋಲಿನ ಬಗ್ಗೆ ಪರಾಮರ್ಶೆ: ಆದರೆ ಸದ್ಯ ಕಠಿಣ ನಿರ್ಧಾರವಿಲ್ಲ!

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಸರಣಿ ಯಲ್ಲಿ ಭಾರತದ ಕಳಪೆ ಪ್ರದರ್ಶನದ ಬಗ್ಗೆ ಶನಿವಾರ ತಂಡದ ನಾಯಕ ರೋಹಿತ್, ವಿರಾಟ್ ಕೊಹ್ಲಿ, ಕೋಚ್ ಗೌತಮ್ ಗಂಭೀರ್ ಜೊತೆ ಶನಿವಾರ ಬಿಸಿಸಿಐ ಪರಾಮರ್ಶೆ ನಡೆಸಿದೆ. ಆದರೆ ಆಟಗಾರರ ಭವಿಷ್ಯದ ಕುರಿತು ಸದ್ಯಕ್ಕೆ ಯಾವುದೇ ಕಠಿಣ ನಿರ್ಧಾರ ಕೈಗೊಳ್ಳದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ನೂತನ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸಭೆಯಲ್ಲಿ ಪಾಲ್ಗೊಂಡರು. ಆಸ್ಟ್ರೇಲಿಯಾ ಸರಣಿಯಲ್ಲಿ ತಂಡದ ಕಳಪೆ ಆಟದ ಬಗ್ಗೆ ಸುಮಾರು 2 ಗಂಟೆಗಳ ಕಾಲ ವಿಸ್ಕೃತ ಚರ್ಚೆ ನಡೆಸಲಾಯಿತು. ಆದರೆ ಹಿರಿಯ ಆಟಗಾರರ ಟೆಸ್ಟ್ ಭವಿಷ್ಯ, ಕೋಚ್ ಬದಲಾವಣೆ ಕುರಿತು ಸದ್ಯಕ್ಕೆ ನಿರ್ಧಾರ ಕೈಗೊಳ್ಳದಿರಲು ಬಿಸಿಸಿಐ ನಿರ್ಧರಿಸಿದೆ. ಈಗ ಯಾವುದೇ ನಿರ್ಧಾರಕ್ಕೆ ಬಂದರೂ ತಪ್ಪು ಸಂದೇಶ ಹೋಗುತ್ತದೆ. ಹೀಗಾಗಿ ಬಿಸಿಸಿಐ ಕಾದು ನೋಡುವ ತಂತ್ರ ಅನುಸರಿಸಿದೆ ಎನ್ನಲಾಗಿದೆ.

ಗೌತಮ್ ಗಂಭೀರ್ ಓರ್ವ ಕಪಟಿ; ಟೀಂ ಇಂಡಿಯಾ ಕೋಚ್ ಮೇಲೆ ತಿರುಗಿಬಿದ್ದ ಮಾಜಿ ಕ್ರಿಕೆಟಿಗ!

ಇಂದು ಬಿಸಿಸಿಐ ವಾರ್ಷಿಕ ಸಭೆ: ಹೊಸ ಕಾರ್ಯದರ್ಶಿ, ಖಜಾಂಚಿ ಅಧಿಕೃತ ನೇಮಕ

ಮುಂಬೈ: ಭಾನುವಾರ ಬಿಸಿಸಿಐ ವಿಶೇಷ ಸಾಮಾನ್ಯ ಸಭೆ ನಡೆಯಲಿದ್ದು, ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಮತ್ತು ಖಜಾಂಚಿಯಾಗಿ ಪ್ರಭ್‌ತೇಜ್ ಸಿಂಗ್ ಭಾಟಿಕಾ ಅಧಿಕೃತವಾಗಿ ನೇಮಕಗೊಳ್ಳಲಿದ್ದಾರೆ. ಇಬ್ಬರೂ ತಮ್ಮ ತಮ್ಮ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇನ್ನು ಭಾನುವಾರದ ಕಾರ್ಯಕ್ರಮಕ್ಕೆ ಐಸಿಸಿ ನೂತನ ಅಧ್ಯಕ್ಷ ಜಯ್ ಶಾ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಅವರನ್ನು ಬಿಸಿಸಿಐ ರಾಜ್ಯ ಘಟಕಗಳು ಸನ್ಮಾನಿಸಲಿವೆ.