RCB Bids Goodbye to Bengaluru: Raipur to Host Home Matches in IPL 2026 ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎರಡು ಐಪಿಎಲ್ 2026 ಪಂದ್ಯಗಳನ್ನು ಆಯೋಜಿಸಲಿದೆ.
ನವದೆಹಲಿ (ಜ.14): ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮಂಗಳವಾರ (ಜನವರಿ 13) ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು 2026 ರಲ್ಲಿ ಎರಡು ಐಪಿಎಲ್ ಪಂದ್ಯಗಳನ್ನು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆ ತಾತ್ಕಾಲಿಕ ನೆಲೆಯಾಗಿ ಆಯೋಜಿಸಲಿದೆ ಎಂದು ದೃಢಪಡಿಸಿದ್ದಾರೆ. "ನಾವು ಇಂದು ಆರ್ಸಿಬಿ ಸಿಇಒ (ರಾಜೇಶ್ ಮೆನನ್) ಅವರೊಂದಿಗೆ ಮಾತನಾಡಿದ್ದೇವೆ. ಅವರು ನಮ್ಮನ್ನು ಭೇಟಿ ಮಾಡಲು ಬಂದರು. ಎರಡು ಐಪಿಎಲ್ ಪಂದ್ಯಗಳು ಇಲ್ಲಿ ನಡೆಯಬೇಕೆಂದು ನಾವು ನಿರ್ಧರಿಸಿದ್ದೇವೆ" ಎಂದು ವಿಷು ದೇವ್ ಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂತರ, ಮುಖ್ಯಮಂತ್ರಿಗಳು ಮೆನನ್ ಅವರೊಂದಿಗಿನ ಭೇಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ದೃಢಪಡಿಸಿದರು, ಅಲ್ಲಿ ಅವರಿಗೆ ಆರ್ಸಿಬಿ ಜೆರ್ಸಿಯನ್ನು ಸಹ ನೀಡಲಾಯಿತು.
"ಇಂದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಜಂಟಿ ಕಾರ್ಯದರ್ಶಿ ಪ್ರಭತೇಜ್ ಸಿಂಗ್ ಭಾಟಿಯಾ ಮತ್ತು ಐಪಿಎಲ್ 2025 ಚಾಂಪಿಯನ್ ತಂಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಉಪಾಧ್ಯಕ್ಷ ರಾಜೇಶ್ ಮೆನನ್ ಅವರೊಂದಿಗೆ ಸಭೆ ನಡೆಯಿತು. ಈ ಸಂದರ್ಭದಲ್ಲಿ, RCB ತಂಡದ ಜೆರ್ಸಿಯನ್ನು ಪ್ರದಾನ ಮಾಡಲಾಯಿತು ಮತ್ತು ಮುಂಬರುವ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಗಳು ಮತ್ತು ಅಗತ್ಯ ವ್ಯವಸ್ಥೆಗಳ ಕುರಿತು ವಿವರವಾದ ಚರ್ಚೆಗಳನ್ನು ನಡೆಸಲಾಯಿತು" ಎಂದು ಅವರು X ನಲ್ಲಿ ಬರೆದಿದ್ದಾರೆ.
ಆರ್ಸಿಬಿ ಆಡಳಿತ ಮಂಡಳಿಯು ಈಗಾಗಲೇ ರಾಯ್ಪುರ ಕ್ರೀಡಾಂಗಣವನ್ನು ಪರಿಶೀಲಿಸಿದ್ದು, ಛತ್ತೀಸ್ಗಢ ರಾಜ್ಯ ಕ್ರಿಕೆಟ್ ಸಂಘದೊಂದಿಗೆ ವಿವರವಾದ ಚರ್ಚೆ ನಡೆಸಿದೆ ಎಂದು ವರದಿಯಾಗಿದೆ. ಮುಖ್ಯಮಂತ್ರಿಯವರ ದೃಢೀಕರಣದೊಂದಿಗೆ, ಪಂದ್ಯಗಳನ್ನು ಆಯೋಜಿಸುವ ಸಿದ್ಧತೆಗಳು ವೇಗ ಪಡೆಯುವ ನಿರೀಕ್ಷೆಯಿದೆ.
ರಾಯ್ಪುರ ಕೊನೆಯ ಬಾರಿಗೆ 2013 ರಲ್ಲಿ ಐಪಿಎಲ್ ಪಂದ್ಯವನ್ನು ಆಯೋಜಿಸಿತ್ತು, ಆಗ ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿತ್ತು. ಅಂದಿನಿಂದ, ರಾಜ್ಯದ ಕ್ರಿಕೆಟ್ ಅಭಿಮಾನಿಗಳು ಪಂದ್ಯಾವಳಿಯ ಪುನರಾಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಉಳಿದ ಐದು ತವರಿನ ಪಂದ್ಯಗಳಿಗೆ ಮುಂಬೈ ಆತಿಥ್ಯ
ಇತರ ವರದಿಗಳ ಪ್ರಕಾರ, ಆರ್ಸಿಬಿ ತನ್ನ ಉಳಿದ ಐದು ತವರು ಪಂದ್ಯಗಳನ್ನು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಲಿದೆ. ಇದು ಖಚಿತವಾದರೆ, ಬೆಂಗಳೂರಿನಲ್ಲಿರುವ ಫ್ರಾಂಚೈಸಿಯ ನಿಷ್ಠಾವಂತ ಅಭಿಮಾನಿ ಬಳಗಕ್ಕೆ ಭಾರಿ ಹೊಡೆತ ಬೀಳಲಿದೆ. ಫ್ರಾಂಚೈಸಿಯ ವಿಜಯೋತ್ಸವದ ಮೆರವಣಿಗೆಯಲ್ಲಿ 11 ಜನರು ದಾರುಣವಾಗಿ ಸಾವನ್ನಪ್ಪಿದ ಕಾಲ್ತುಳಿತದ ಹಿನ್ನೆಲೆಯಲ್ಲಿ, ಆರ್ಸಿಬಿಯ ತವರು ಎಂ ಚಿನ್ನಸ್ವಾಮಿ ಕ್ರೀಡಾಂಗಣವನ್ನು ದೊಡ್ಡ ಸಭೆ ಸಮಾರಂಭಗಳಿಗೆ ಅಸುರಕ್ಷಿತ ಎಂದು ಸ್ವತಂತ್ರ ಆಯೋಗವು ಕಳೆದ ವರ್ಷ ಘೋಷಿಸಿತ್ತು. ಇದರ ಪರಿಣಾಮವಾಗಿ, 2025 ರ ಮಹಿಳಾ ವಿಶ್ವಕಪ್ ಮತ್ತು 2026 ರ ಪುರುಷರ ಟಿ 20 ವಿಶ್ವಕಪ್ ಪಂದ್ಯಗಳು ಶಿಫ್ಟ್ ಆಗಿತ್ತು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಹೊಸ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಲ್ಲಿಯೇ ಆಡಿಸೋದಾಗಿ ಭರವಸೆ ನೀಡಿದ್ದರು.


