Asianet Suvarna News Asianet Suvarna News

ರಣಜಿ ಟ್ರೋಫಿ: ಪಡಿಕ್ಕಲ್-ಪವನ್ ಫಿಫ್ಟಿ, ಬೃಹತ್ ಮೊತ್ತದತ್ತ ಕರ್ನಾಟಕ

ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು ತಮಿಳುನಾಡಿನ ವಿರುದ್ಧ ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದೆ. ಮೊದಲ ದಿನದಾಟದಂತ್ಯಕ್ಕೆ ಕರ್ನಾಟಕ 6 ವಿಕೆಟ್ ಕಳೆದುಕೊಂಡು 259 ರನ್ ಗಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

Ranji Trophy Padikkal Pavan fifty helps Karnataka to dominate against Tamil Nadu
Author
Dindigul, First Published Dec 9, 2019, 6:39 PM IST

ದಿಂಡಿಗಲ್[ಡಿ.09]: ದೇಸಿ ಕ್ರಿಕೆಟ್’ನಲ್ಲಿ ಭರ್ಜರಿ ಫಾರ್ಮ್’ನಲ್ಲಿರುವ ದೇವದತ್ ಪಡಿಕ್ಕಲ್[78] ಹಾಗೂ ಪವನ್ ದೇಶಪಾಂಡೆ[65] ಆಕರ್ಷಕ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವು ತಮಿಳುನಾಡು ವಿರುದ್ಧ ಮೊದಲ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 259 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದೆ.

ರಣಜಿ ಟ್ರೋಫಿ: ಇಂದಿ​ನಿಂದ ಕರ್ನಾ​ಟ​ಕಕ್ಕೆ ತಮಿ​ಳು​ನಾಡು ಸವಾ​ಲು

ಇಲ್ಲಿನ NCR ಕಾಲೇಜು ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟ್ಸ್’ಮನ್ ದೇಗಾ ನಿಶ್ಚಲ್[4] ನಾಲ್ಕನೇ ಓವರ್’ನಲ್ಲಿ ಬೌಂಡರಿ ಬಾರಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ಆ ಬಳಿಕ ಮಯಾಂಕ್ ಅಗರ್ ವಾಲ್ ಹಾಗೂ ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಆಡುತ್ತಿದ್ದ ಅಗರ್ ವಾಲ್[43] ಸಿದ್ಧಾರ್ಥ್’ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕರುಣ್ ನಾಯರ್[8] ರನೌಟ್ ಆದಾಗ ಕರ್ನಾಟಕ ಮತ್ತೊಮ್ಮೆ ಆಘಾತಕ್ಕೆ ಒಳಗಾಯಿತು.

ರಾಜ್ಯಕ್ಕೆ ಆಸರೆಯಾದ ಪಡಿಕ್ಕಲ್-ಪವನ್: ಒಂದು ಹಂತದಲ್ಲಿ 88 ರನ್’ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕ ತಂಡಕ್ಕೆ ಎಡಗೈ ಬ್ಯಾಟ್ಸ್’ಮನ್’ಗಳಾದ ದೇವದತ್ ಪಡಿಕ್ಕಲ್ ಹಾಗೂ ಪವನ್ ದೇಶಪಾಂಡೆ ಆಸರೆಯಾದರು. ಈ ಜೋಡಿ ಶತಕದ ಜತೆಯಾಟ ನಿಭಾಯಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ತಮಿಳುನಾಡು ಬಲಿಷ್ಠ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದ ಪಡಿಕ್ಕಲ್ 182 ಎಸೆತಗಳಲ್ಲಿ 7 ಬೌಂಡರಿ ಸಹಿತ 78 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಆಲ್ರೌಂಡರ್ ಪವನ್ ದೇಶಪಾಂಡೆ 142 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 65 ರನ್ ಚಚ್ಚಿದರು. ಪಡಿಕ್ಕಲ್, ಬಾಬಾ ಅಪರಾಜಿತ್’ಗೆ ವಿಕೆಟ್ ಒಪ್ಪಿಸಿದರೆ, ಪವನ್ ಬಲಿ ಪಡೆಯುವಲ್ಲಿ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದರು.

ರಣಜಿ ಟ್ರೋಫಿ: ಮಳೆಯಲ್ಲ, ಬಿಸಿಲಲ್ಲ ಹಾವಿನಿಂದ ಕೆಲಕಾಲ ಪಂದ್ಯ ರದ್ದು..!

ಇದೀಗ ಮತ್ತೋರ್ವ ಆಲ್ರೌಂಡರ್ ಶ್ರೇಯಸ್ ಗೋಪಾಲ್[35] ಹಾಗೂ ರಣಜಿ ಕ್ರಿಕೆಟ್’ಗೆ ಪದಾರ್ಪಣೆ ಮಾಡಿರುವ  ಡೇವಿಡ್ ಮಥಾಯಸ್[0] ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ತಮಿಳುನಾಡಿನ ಪರ ಮಣಿಮರನ್ ಸಿದ್ಧಾರ್ಥ್ 2 ವಿಕೆಟ್ ಪಡೆದರೆ, ಬಾಬಾ ಅಪರಾಜಿತ್, ರವಿಚಂದ್ರನ್ ಅಶ್ವಿನ್, ಕೃಷ್ಣಮೂರ್ತಿ ವಿಘ್ನೇಶ್ ತಲಾ ಒಂದೊಂದು ವಿಕೆಟ್ ಪಡೆದರು.

ರಣಜಿ ಟೂರ್ನಿಯ ಇತರೆ ಪಂದ್ಯಗಳ ಮೊದಲ ದಿನದಾಟದ ವಿವರ:

* ಅಸ್ಸಾಂ ತಂಡವು ಸರ್ವೀಸಸ್ ತಂಡವು ಕೇವಲ 124 ರನ್’ಗಳಿಗೆ ಆಲೌಟ್ ಆಗಿದ್ದು, ದಿನದಾಟದಂತ್ಯಕ್ಕೆ ಅಸ್ಸಾಂ 3 ವಿಕೆಟ್ ಕಳೆದುಕೊಂಡು 81 ರನ್ ಬಾರಿಸಿದೆ. 

* ನಾಗಾಲ್ಯಾಂಡ್ ವಿರುದ್ಧ ಮೇಘಾಲಯ ತಂಡವು 9 ವಿಕೆಟ್ ಕಳೆದುಕೊಂಡು 268 ರನ್ ಗಳಿಸಿದೆ.

* ಮಣಿಪುರ ವಿರುದ್ಧ ಮಿಝೋರಾಂ ತಂಡವು ಕೇವಲ 65 ರನ್’ಗಳಿಗೆ ಆಲೌಟ್ ಆಗಿದೆ. ಮಣಿಪುರ ಬೌಲರ್ ರೆಕ್ಸ್ ಸಿಂಗ್ ಕೇವಲ 22 ರನ್ ನೀಡಿ 8 ವಿಕೆಟ್ ಕಬಳಿಸಿದರು. ಇನ್ನು ಮಣಿಪುರ 7 ವಿಕೆಟ್ ಕಳೆದುಕೊಂಡು 255 ರನ್ ಬಾರಿಸಿದೆ.

* ಜಾರ್ಖಂಡ ವಿರುದ್ಧ ತ್ರಿಪುರ ತಂಡವು 8 ವಿಕೆಟ್ ಕಳೆದುಕೊಂಡು 263 ರನ್ ಬಾರಿಸಿದೆ.

* ಗುಜರಾತ್ ವಿರುದ್ಧ ಹೈದರಾಬಾದ್ ತಂಡವು 233 ರನ್ ಬಾರಿಸಿ ಆಲೌಟ್ ಆಗಿದೆ.

* ಡೆಲ್ಲಿ ವಿರುದ್ಧ ಕೇರಳ ತಂಡವು 3 ವಿಕೆಟ್ ಕಳೆದುಕೊಂಡು 276 ರನ್ ಬಾರಿಸಿದ್ದು, ರಾಬಿನ್ ಉತ್ತಪ್ಪ 102 ರನ್ ಬಾರಿಸಿದರೆ, ಪೂನಮ್ ರಾಹುಲ್ ಕೇವಲ 3 ರನ್’ಗಳಿಂದ ಶತಕ ವಂಚಿತರಾದರು.

* ಮುಂಬೈ ತಂಡವು ಬರೋಡ ವಿರುದ್ಧ 8 ವಿಕೆಟ್ ಕಳೆದುಕೊಂಡು 362 ರನ್ ಬಾರಿಸಿದೆ. 
 

Follow Us:
Download App:
  • android
  • ios