ಸಮಿತ್ ದ್ರಾವಿಡ್ ತಂದೆಯ ಹೆಜ್ಜೆಯನ್ನೇ ಹಿಂಬಾಲಿಸುತ್ತಿದ್ದಾರೆ. ಕೆಎಸ್‌ಸಿಎ ಅಂಡರ್ 14 ಟೂರ್ನಿಯಲ್ಲಿ ಆಲ್ರೌಂಡ್ ಪ್ರದರ್ಶನದ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಬೆಂಗಳೂರು(ಜ.19): ಕರ್ನಾಟಕ ಅಂಡರ್‌-14 ತಂಡದ ಪರ ಮೊದಲ ಬಾರಿಗೆ ಆಡುತ್ತಿರುವ ಭಾರತದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ರ ಪುತ್ರ ಸಮಿತ್‌, ಆಲ್ರೌಂಡ್‌ ಆಟದ ಮೂಲಕ ಗಮನ ಸೆಳೆದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕ ಅಂಡರ್‌-14 ತಂಡಕ್ಕೆ ದ್ರಾವಿಡ್‌ ಪುತ್ರ

ಇಲ್ಲಿನ ಆಲೂರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಕ್ರಿಕೆಟ್‌ ಟೂರ್ನಿಯ ಗೋವಾ ವಿರುದ್ಧದ 2 ದಿನಗಳ ಪಂದ್ಯದ ಮೊದಲ ದಿನವಾದ ಭಾನುವಾರ, ಮಧ್ಯಮ ವೇಗಿ ಸಮಿತ್‌ 7 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು. ಗೋವಾ ತಂಡ 84 ರನ್‌ಗೆ ಆಲೌಟ್‌ ಆಯಿತು. ಬಳಿಕ ಅಜೇಯ 86 ರನ್‌ ಗಳಿಸಿ, 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡರು.

ಭರ್ಜರಿ ದ್ವಿಶತಕ ಬಾರಿಸಿದ ದ್ರಾವಿಡ್‌ ಪುತ್ರ ಸಮಿತ್‌

ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ 3 ವಿಕೆಟ್ ಕಳೆದುಕೊಂಡು 193 ರನ್ ಬಾರಿಸಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ಸಮಿತ್ 152 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 86 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಮೊದಲು ಸಮಿತ್ ಅಂಡರ್ 14 ಕೆಎಸ್‌ಸಿಎ ಅಂತರ ವಲಯದ ಕ್ರಿಕೆಟ್‌ನಲ್ಲಿ ಧಾರವಾಡ ವಲಯದ ವಿರುದ್ಧ ದ್ವಿಶತಕ ಚಚ್ಚಿದ್ದರು.

ಒಟ್ಟಿನಲ್ಲಿ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಕ್ರಿಕೆಟ್ ಪ್ರದರ್ಶನ ಕರ್ನಾಟಕ ಹಾಗೂ ಭಾರತದ ಪಾಲಿಗೆ ಹೊಸ ಆಶಾಕಿರಣ ಹುಟ್ಟುಹಾಕಿದೆ ಎಂದರೆ ಅತಿಶಯೋಕ್ತಿಯಲ್ಲ. ತಂದೆಯಂತೆಯೇ ಮಗನೂ ಕ್ರಿಕೆಟ್ ಜಗತ್ತಿನಲ್ಲಿ ಮಿನುಗಲಿ ಎನ್ನುವುದು ಕ್ರಿಕೆಟ್‌ ಅಭಿಮಾನಿಗಳ ಹಾರೈಕೆಯಾಗಿದೆ. ಈ ಯಶಸ್ಸನ್ನು ಸಮಿತ್ ಹೀಗೆಯೇ ಮುಂದುವರೆಸಿಕೊಂಡು ಹೋಗುತ್ತಾರಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.