ಆಯ್ಕೆ ಸಮಿತಿ ಮುಖ್ಯಸ್ಥ ಸುನಿಲ್ ಜೋಶಿಗೆ, ಧೋನಿ ಆಯ್ಕೆ ಮಾಡುತ್ತೀರಾ ಎಂದು ಪ್ರಶ್ನೆ!
ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಆಯ್ಕೆ ಸಮಿತಿ ಸಂದರ್ಶನ ಯಾವುದೇ ಸಮಸ್ಯೆಗಳಿಲ್ಲದೆ ಮುಕ್ತಾಯಗೊಂಡಿದೆ. ಇದೀಗ ಸಂದರ್ಶನದ ವಿವರ ಬಹಿರಂಗವಾಗಿದೆ. ರೋಚಕ ಮಾಹಿತಿ ಇಲ್ಲಿದೆ.
ನವದೆಹಲಿ(ಫೆ.05): ಮದನ್ ಲಾಲ್ ನೇತೃತ್ವದ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ), ಬುಧವಾರ ಭಾರತ ತಂಡದ ಆಯ್ಕೆಗಾರನ ಹುದ್ದೆಗಾಗಿ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ‘ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ನಿಮ್ಮ ನಿಲುವೇನು’ ಎನ್ನುವ ಸಾಮಾನ್ಯ ಪ್ರಶ್ನೆಯೊಂದನ್ನು ಕೇಳಿದರು.
ಇದನ್ನೂ ಓದಿ: BCCI ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ!
ಐವರು ಅಭ್ಯರ್ಥಿಗಳಾದ ಎಲ್.ಶಿವರಾಮಕೃಷ್ಣನ್, ವೆಂಕಟೇಶ್ ಪ್ರಸಾದ್, ರಾಜೇಶ್ ಚೌವ್ಹಾಣ್, ಸುನಿಲ್ ಜೋಶಿ ಹಾಗೂ ಹರ್ವಿಂದರ್ ಸಿಂಗ್, ಸಿಎಸಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು. ಕಳೆದ ವರ್ಷ ಏಕದಿನ ವಿಶ್ವಕಪ್ ಸೆಮಿಫೈನಲ್ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಪಾಲ್ಗೊಂಡಿಲ್ಲ. ಆದರೆ ಮಾ.29ರಿಂದ ಆರಂಭಗೊಳ್ಳಲಿರುವ ಐಪಿಎಲ್ನಲ್ಲಿ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮೀಸ್ : ಚಾಂಪಿಯನ್ ಆಗುವ ತವಕ
‘ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ನಿಮ್ಮ ನಿಲುವೇನು, ಅವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡುತ್ತೀರಾ? ಎನ್ನುವ ಪ್ರಶ್ನೆಯನ್ನು ಕೇಳಲಾಯಿತು’ ಎಂದು ಹಿರಿಯ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಧೋನಿಯ ಅಂ.ರಾ.ಕ್ರಿಕೆಟ್ ಭವಿಷ್ಯದ ಬಗ್ಗೆ ಆಯ್ಕೆ ಸಮಿತಿ ಸ್ಪಷ್ಟನಿಲುವು ಹೊಂದಿರಬೇಕು ಎನ್ನುವುದು ಬಿಸಿಸಿಐನ ಉದ್ದೇಶ ಎಂದು ತಿಳಿದುಬಂದಿದೆ.