ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬೃಂದಾವನದಲ್ಲಿ ಪ್ರೇಮಾನಂದ ಮಹಾರಾಜರ ಆಶೀರ್ವಾದ ಪಡೆದರು. ಮಹಾರಾಜರು ದೈವಾನುಗ್ರಹ, ಆಂತರಿಕ ಶಾಂತಿಯ ಮಹತ್ವ ವಿವರಿಸಿ "ರಾಧಾ" ನಾಮಜಪ, ಧ್ಯಾನದ ಮಂತ್ರ ನೀಡಿದರು. ಬಾಹ್ಯ ಸುಖಗಳಿಗಿಂತ ಆಂತರಿಕ ಬದಲಾವಣೆಯೇ ದೈವಕೃಪೆ ಎಂದು ತಿಳಿಸಿದರು. ಜೀವನಶೈಲಿ ಬದಲಿಸದೇ, ಚಿಂತನೆ ಬದಲಿಸಿ, ಭಕ್ತಿಯಿಂದ ದೇವರನ್ನು ಸ್ಮರಿಸಲು ಉಪದೇಶಿಸಿದರು.
ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ (International Test Cricket) ಗೆ ವಿದಾಯ ಹೇಳಿದ ಮರುದಿನವೇ ವಿರಾಟ್ ಕೊಹ್ಲಿ (Virat Kohli), ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಜೊತೆ ಪ್ರೇಮಾನಂದ ಮಹಾರಾಜ್ ದರ್ಶನಕ್ಕೆ ಬೃಂದಾವನಕ್ಕೆ ತೆರಳಿದ್ದರು. ಪ್ರೇಮಾನಂದರ ಆಶೀರ್ವಾದ ಪಡೆದ ಜೋಡಿ, ತಮ್ಮ ಸರಳತೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ವಿರುಷ್ಕಾ ಹೋಗಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರು ಪ್ರೇಮಾನಂದರ ಆಶೀರ್ವಾದ ಪಡೆದಿದ್ದರು. ಈ ಬಾರಿ, ಪ್ರೇಮಾನಂದ ಮಹಾರಾಜ್ (Premanand Maharaj), ವಿರುಷ್ಕಾ ಜೋಡಿಗೆ ಗುರು ಮಂತ್ರವನ್ನು ನೀಡಿದ್ದಾರೆ.
ತಮ್ಮ ಚಿಂತನೆಗಳ ಮೂಲಕ ಲಕ್ಷಾಂತರ ಭಕ್ತರಿಗೆ ಭಕ್ತಿಮಾರ್ಗವನ್ನು ಬೋಧಿಸುತ್ತ ಬಂದಿರುವ ಪ್ರೇಮಾನಂದ ಮಹಾರಾಜ್, ದೇವರ ಆಶೀರ್ವಾದ ಸಿಕ್ಕಾಗ ಆ ವ್ಯಕ್ತಿಗೆ ಏನಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಯಾವ ಕೆಲ್ಸ ಮಾಡಿದ್ರೆ ನಿಮಗೆ ದೇವರ ಆಶೀರ್ವಾದ ಸಿಗುತ್ತೆ ಎಂಬುದನ್ನು ಕೂಡ ಹೇಳಿದ್ದಾರೆ. ಪ್ರೇಮಾನಂದ ಮಹಾರಾಜ್ ಪ್ರಕಾರ, ಸಂಪತ್ತು ದೇವರ ಅನುಗ್ರಹದಿಂದ ಬಂದದ್ದಲ್ಲ. ಅದು ಹಿಂದಿನ ಜನ್ಮಗಳ ಪುಣ್ಯ ಕರ್ಮಗಳ ಫಲ. ಸಂಪತ್ತು ಅಥವಾ ಖ್ಯಾತಿಯನ್ನು ದೇವರ ಅನುಗ್ರಹವೆಂದು ಪರಿಗಣಿಸಲಾಗುವುದಿಲ್ಲ. ಒಬ್ಬರ ಆಲೋಚನೆಗಳನ್ನು ಒಳಗಿನಿಂದ ಬದಲಾಯಿಸುವುದು ದೇವರ ಅನುಗ್ರಹ ಎಂದು ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ. ಖ್ಯಾತಿ, ವೈಭವ, ಲಾಭ ಮತ್ತು ಗೆಲುವು ಬಾಹ್ಯ ಸಂತೋಷವಾಗಿದೆ. ಇದು ಭಗವಂತನ ಕೃಪೆಯಲ್ಲ. ದೇವರ ಕೃಪೆಯಾದ್ರೆ ವ್ಯಕ್ತಿ ಒಳಗಿನಿಂದ ಬದಲಾಗ್ತಾನೆ. ದೇವರು ಶಾಂತಿಯ ಮಾರ್ಗವನ್ನು ನೀಡುತ್ತಾನೆ ಎಂದವರು ಹೇಳಿದ್ದಾರೆ.
ಗುರು ಮಂತ್ರ ಏನು? : ನೀವು ಈಗ ಸಂಸಾರದಲ್ಲಿ ಹೇಗೆ ಬದುಕುತ್ತಿದ್ದೀರೋ ಹಾಗೆ ಜೀವನ ಮುಂದುವರೆಸಿ ಎಂದು ವಿರಾಟ್ ಮತ್ತು ಅನುಷ್ಕಾಗೆ ಹೇಳುತ್ತಾರೆ. ಆದರೆ, ಒಳಗಿನ ಚಿಂತನೆ ಬದಲಾಗಬೇಕು. ಮನಸ್ಸಿನಲ್ಲಿ ಖ್ಯಾತಿಯ ಆಸೆಯಾಗಲಿ ಅಥವಾ ಸಂಪತ್ತನ್ನು ಹೆಚ್ಚಿಸುವ ಬಯಕೆಯಾಗಲಿ ಇರಬಾರದು. ದೇವರೇ, ನನ್ನ ಪ್ರಪಂಚ, ನೀನೇ ಬೇಕು ಎಂಬ ಆಲೋಚನೆ ಇರಬೇಕು. ಭಗವಂತನ ಹೆಸರನ್ನು ಸಂತೋಷದಿಂದ ಜಪಿಸಬೇಕು ಎಂದು ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಾಮ ಜಪಿಸುವುದರಿಂದ ಎಲ್ಲವೂ ಸಾಧ್ಯವೇ ಎಂದು ಅನುಷ್ಕಾ ಪ್ರಶ್ನೆ ಕೇಳ್ತಾರೆ. ಅದಕ್ಕೆ ಉತ್ತರಿಸಿದ ಪ್ರೇಮಾನಂದ್ ಮಹಾರಾಜ್, ನಾವು ಸಾಂಖ್ಯ ಯೋಗ, ಭಕ್ತಿ ಯೋಗ, ಅಷ್ಟಾಂಗ ಯೋಗ ಮತ್ತು ಕರ್ಮಯೋಗಗಳಿಗೆ ಪ್ರವೇಶ ಪಡೆದಿದ್ದೇವೆ. ಸಾಂಖ್ಯ ಯೋಗ, ಅಷ್ಟಾಂಗ ಯೋಗ ಮತ್ತು ಕರ್ಮಯೋಗವನ್ನು ಅರ್ಥಮಾಡಿಕೊಂಡ ನಂತ್ರವೇ ಭಕ್ತಿಗೆ ಬಂದಿದ್ದೇವೆ. ನಿಮ್ಮ ಮನಸ್ಸಿನಲ್ಲಿ ರಾಧಾ ರಾಧಾ ಎಂಬ ಹೆಸರು ಓಡುತ್ತಿದ್ದರೆ ನೀವು ದೇವರನ್ನು ತಲುಪುತ್ತೀರಿ ಎಂದು ಮಹಾರಾಜ್ ಹೇಳಿದ್ದಾರೆ. ರಾಧ ಹೆಸರನ್ನು ಜಪಿಸಬೇಕು ಮತ್ತು ಬರೆಯಬೇಕು ಎಂದಿರುವ ಪ್ರೇಮಾನಂದ್ ಮಹಾರಾಜ್, ಮಂತ್ರವನ್ನು ಎಲ್ಲೆಂದರಲ್ಲಿ ಜಪಿಸಬಾರದು ಎಂದಿದ್ದಾರೆ. ಸ್ನಾನ ಮಾಡಿದ ನಂತ್ರ ಶಾಂತವಾಗಿ ಕುಳಿತು ರಾಧೆಯನ್ನು ಧ್ಯಾನಿಸಬೇಕು. ಮತ್ತು ರಾಧೆ ಹೆಸರನ್ನು ಬರೆಯಬೇಕು. ಇದೇ ನಿಮ್ಮ ಜೀವನವನ್ನಾಗಿ ಮಾಡಿಕೊಳ್ಳಿ, ಆಗ ನೀವು ಫಲಿತಾಂಶಗಳನ್ನು ಕಾಣುತ್ತೀರಿ ಎಂದು ಪ
್ರೇಮಾನಂದ ಮಹಾರಾಜ್ ಹೇಳಿದ್ದಾರೆ.
ಕಷ್ಟ ಬಂದ್ರೆ ದೇವರು ನಮ್ಮನ್ನು ಆಶೀರ್ವದಿಸುತ್ತಿದ್ದಾನೆಂದು ನೀವು ಅರ್ಥಮಾಡಿಕೊಳ್ಳಬೇಕು. ಸರಿಯಾದ ಮಾರ್ಗವನ್ನು ಅನುಸರಿಸಲು ನಮಗೆ ಸ್ಫೂರ್ತಿ ಸಿಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದಿರುವ ಪ್ರೇಮಾನಂದ್ ಮಹಾರಾಜ್, ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿದ ವಿಷ್ಯವನ್ನು ಹೇಳಿದ್ದಾರೆ. ಈ ಜನ್ಮದಲ್ಲಿ ನೀವು ದೇವರನ್ನು ಪಡೆಯದಿದ್ದರೆ, ಭಕ್ತ ನಾಶವಾಗುವುದಿಲ್ಲ. ಶ್ರೀ ಕೃಷ್ಣ ಶ್ರೀಮಂತ ಮತ್ತು ಉದಾತ್ತ ಕುಟುಂಬದಲ್ಲಿ ನಿಮಗೆ ಜನ್ಮ ನೀಡುತ್ತಾನೆ. ಆದ್ರೆ ಭಜನೆಯನ್ನು ತಪ್ಪಿಸಬಾರದು ಎಂದು ಪ್ರೇಮಾನಂದ ಮಹಾರಾಜ್ ಸಲಹೆ ನೀಡಿದ್ದಾರೆ.


