ಬ್ಲೆಸ್ಸಿಂಗ್ ಮುಜರಬಾನಿ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಜೊತೆಗಿನ ಒಪ್ಪಂದವನ್ನು ಉಲ್ಲಂಘಿಸಿ ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೇರಿದ್ದಾರೆ. ಈ ಒಪ್ಪಂದ ಉಲ್ಲಂಘನೆಗಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.
ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ನಲ್ಲಿ (ಪಿಎಸ್ಎಲ್) ಇಸ್ಲಾಮಾಬಾದ್ ಯುನೈಟೆಡ್ ಜೊತೆಗಿನ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಕಾನೂನು ಕ್ರಮಕ್ಕೆ ಸಿದ್ಧತೆ ನಡೆಸಿದೆ. ಶಮಾರ್ ಜೋಸೆಫ್ ಬದಲಿಗೆ ಇಸ್ಲಾಮಾಬಾದ್ ಯುನೈಟೆಡ್ ತಂಡವು ಮುಜರಬಾನಿ ಅವರನ್ನು 1.1 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈ ಒಪ್ಪಂದವನ್ನು ಕಡೆಗಣಿಸಿ ಮುಜರಬಾನಿ, ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ಸೇರಲು ನಿರ್ಧರಿಸಿದ್ದಾರೆ.
ಮುಸ್ತಾಫಿಜುರ್ ರೆಹಮಾನ್ ಬದಲಿಗೆ ಮುಜರಬಾನಿ ಅವರನ್ನು ಕೆಕೆಆರ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮಾರ್ಚ್ 26 ರಿಂದ ಮೇ 3 ರವರೆಗೆ ನಡೆಯಬೇಕಿದ್ದ ಪಿಎಸ್ಎಲ್ ಟೂರ್ನಿಯನ್ನು ಬಿಟ್ಟು ಐಪಿಎಲ್ಗೆ ಹೋಗಿರುವುದು ಒಪ್ಪಂದದ ಸ್ಪಷ್ಟ ಉಲ್ಲಂಘನೆ. ಹೀಗಾಗಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಿಸಿಬಿ ಎಚ್ಚರಿಕೆ ನೀಡಿದೆ. ಪಿಎಸ್ಎಲ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಆಟಗಾರರು ಐಪಿಎಲ್ಗೆ ಹೋಗುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ, ದಕ್ಷಿಣ ಆಫ್ರಿಕಾದ ಆಟಗಾರ ಕಾರ್ಬಿನ್ ಬಾಷ್, ಪೇಶಾವರ್ ಝಲ್ಮಿ ಜೊತೆಗಿನ ಒಪ್ಪಂದ ಮುರಿದು ಮುಂಬೈ ಇಂಡಿಯನ್ಸ್ ತಂಡ ಸೇರಿದ್ದರು.
ಈ ಘಟನೆಯ ನಂತರ, ಪಿಸಿಬಿ ಕಾರ್ಬಿನ್ ಬಾಷ್ ಅವರಿಗೆ ಪಿಎಸ್ಎಲ್ನ ಒಂದು ಸೀಸನ್ ಆಡದಂತೆ ನಿಷೇಧ ಹೇರಿತ್ತು. ಇದೀಗ ಮುಜರಬಾನಿ ವಿರುದ್ಧವೂ ಇದೇ ರೀತಿಯ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ನಲ್ಲಿ ಮುಜರಬಾನಿ ನೀಡಿದ ಅತ್ಯುತ್ತಮ ಪ್ರದರ್ಶನವೇ ಅವರನ್ನು ಐಪಿಎಲ್ ಕಡೆಗೆ ಸೆಳೆದಿದೆ. ಆ ಟೂರ್ನಿಯಲ್ಲಿ ಅವರು ಆರು ಪಂದ್ಯಗಳಿಂದ 13 ವಿಕೆಟ್ ಪಡೆದಿದ್ದರು. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ಐತಿಹಾಸಿಕ ಗೆಲುವು ಸಾಧಿಸಿದ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ಮೌಲ್ಯವನ್ನು ಹೆಚ್ಚಿಸಿತ್ತು.
ಹೆಚ್ಚುತ್ತಿರುವ ಸವಾಲು
ಬೇರೆ ಬೇರೆ ದೇಶಗಳಲ್ಲಿ ಏಕಕಾಲಕ್ಕೆ ಟಿ20 ಲೀಗ್ಗಳು ನಡೆಯುತ್ತಿರುವುದರಿಂದ, ವಿದೇಶಿ ಆಟಗಾರರನ್ನು ಉಳಿಸಿಕೊಳ್ಳುವುದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ಗೆ ದೊಡ್ಡ ಸವಾಲಾಗಿದೆ. ಫ್ರಾಂಚೈಸಿಗಳ ಹಿತಾಸಕ್ತಿ ಕಾಪಾಡಲು ಮತ್ತು ಒಪ್ಪಂದಗಳ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಪಿಸಿಬಿ ಈಗ ಕಾನೂನು ಹೋರಾಟಕ್ಕೆ ಇಳಿದಿದೆ. ಈ ಪ್ರಕರಣದ ತೀರ್ಪು, ಭವಿಷ್ಯದಲ್ಲಿ ಇಂತಹ ಒಪ್ಪಂದ ಉಲ್ಲಂಘನೆಗಳನ್ನು ತಡೆಯಲು ಒಂದು ಮಾದರಿಯಾಗಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಹರ್ಷಿತ್ ರಾಣಾ ಐಪಿಎಲ್ನಿಂದ ಔಟ್:
ಒಂದು ಕಡೆ ಬ್ಲೆಸಿಂಗ್ ಮುಜರಬಾನಿ, ಪಿಎಸ್ಎಲ್ ತೊರೆದು ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಕೂಡಿಕೊಂಡಿದ್ದಾರೆ. ಇದೇ ವೇಳೆ ಕೆಕೆಆರ್ ತಂಡದ ಪ್ರಮುಖ ಬೌಲಿಂಗ್ ಆಲ್ರೌಂಡರ್ ಹರ್ಷಿತ್ ರಾಣಾ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದಾರೆ. ಇದು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಸದ್ಯ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಹರ್ಷಿತ್ ರಾಣಾಗೆ ಬದಲಿ ಆಟಗಾರನನ್ನು ಪ್ರಕಟಿಸಿಲ್ಲ.


