ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಬೌಲಿಂಗ್ ಆಲ್ರೌಂಡರ್ ಹರ್ಷಿತ್ ರಾಣಾ, ಗಾಯದ ಸಮಸ್ಯೆಯಿಂದಾಗಿ 2026ರ ಐಪಿಎಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಈ ಹಿಂದೆ ಟಿ20 ವಿಶ್ವಕಪ್ನಿಂದಲೂ ಹೊರಗುಳಿದಿದ್ದ ರಾಣಾ ಅವರ ಅನುಪಸ್ಥಿತಿ ಕೆಕೆಆರ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಬೆಂಗಳೂರು: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಕೆಕೆಆರ್ ತಂಡದ ಸ್ಟಾರ್ ಬೌಲಿಂಗ್ ಆಲ್ರೌಂಡರ್ ಹರ್ಷಿತ್ ರಾಣಾ, ಗಾಯದ ಸಮಸ್ಯೆಯಿಂದಾಗಿ 2026ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಹರ್ಷಿತ್ ರಾಣಾ ಈ ಮೊದಲು ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳ ಮೊದಲು ಗಾಯಗೊಂಡು ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ಐಪಿಎಲ್ನಿಂದಲೂ ರಾಣಾ ಹೊರಬಿದ್ದಿದ್ದು, ಕೆಕೆಆರ್ ಫ್ರಾಂಚೈಸಿ ಇನ್ನೂ ಬದಲಿ ಆಟಗಾರರನ್ನು ಹೆಸರಿಸಿಲ್ಲ.
ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಗಾಯಗೊಂಡಿದ್ದ ಹರ್ಷಿತ್ ರಾಣಾ:
ಭಾರತ ಹಾಗೂ ಶ್ರೀಲಂಕಾದಲ್ಲಿ ಆಯೋಜನೆಗೊಂಡಿದ್ದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಹರ್ಷಿತ್ ರಾಣಾ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಅದರೆ ದಕ್ಷಿಣ ಆಫ್ರಿಕಾ ಎದುರಿನ ಅಭ್ಯಾಸ ಪಂದ್ಯದ ವೇಳೆಯಲ್ಲಿ ಹರ್ಷಿತ್ ರಾಣಾ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಹರ್ಷಿತ್ ರಾಣಾ ಅನುಪಸ್ಥಿತಿಯಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಭಾರತ ತಂಡ ಕೂಡಿಕೊಂಡಿದ್ದರು.
ಇನ್ನು ಒಂದು ಕಡೆ ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿ ಆಡುವ ಸಂದರ್ಭದಲ್ಲೇ ಹರ್ಷಿತ್ ರಾಣಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ಪುನಶ್ಚೇತನ ಶಿಬಿರದಲ್ಲೂ ರಾಣಾ ಪಾಲ್ಗೊಂಡಿದ್ದರು. ಈ ಮೊದಲು ಹರ್ಷಿತ್ ರಾಣಾ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿಯಬಹುದು ಎಂದು ವರದಿಯಾಗಿತ್ತು. ಆದರೆ ಇದೀಗ ಹರ್ಷಿತ್ ರಾಣಾ, 2026ರ ಐಪಿಎಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ. ಕಳೆದ ಎರಡು ಐಪಿಎಲ್ ಸೀಸನ್ನಿಂದ ಕೋಲ್ಕತಾ ನೈಟ್ ರೈಡರ್ಸ್ ಪರ ಹರ್ಷಿತ್ ರಾಣಾ 34 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ಗೆ ಶುರುವಾಯ್ತು ಹೊಸ ತಲೆನೋವು:
ಹರ್ಷಿತ್ ರಾಣಾ ಓರ್ವ ಬೌಲಿಂಗ್ ಆಲ್ರೌಂಡರ್ ಆಗಿದ್ದು, ಟಿ20 ಮಾದರಿಯಲ್ಲಿ ಭಾರತದ ಅತ್ಯಂತ ನಂಬಿಗಸ್ಥ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಐಪಿಎಲ್ನಿಂದ ರಾಣಾ ಹೊರಬಿದ್ದಿರುವುದು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಈ ಮೊದಲು ಕೆಕೆಆರ್ ಫ್ರಾಂಚೈಸಿಯು ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿಸಿತ್ತು. ಆದರೆ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಬಿಸಿಸಿಐ ಸೂಚನೆ ಮೇರೆಗೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ರಿಲೀಸ್ ಮಾಡಿತ್ತು. ಹೀಗಾಗಿ ಮುಸ್ತಾಫಿಜುರ್ ಬದಲಿಗೆ ಜಿಂಬಾಬ್ವೆ ಮೂಲದ ನೀಳಕಾಯದ ವೇಗಿ ಬ್ಲೆಸಿಂಗ್ ಮುಜರಬಾನಿ ಅವರನ್ನು ಕರೆ ತಂದಿದೆ. ಐಪಿಎಲ್ ಆಡುವ ಸಲುವಾಗಿ ಮುಜರಬಾನಿ ಇದೀಗ ಪಾಕಿಸ್ತಾನ ಸೂಪರ್ ಲೀಗ್ಗೆ ಗುಡ್ ಬೈ ಹೇಳಿದ್ದಾರೆ.


