ಶ್ರೀಲಂಕಾ ವಿರುದ್ದದ ಸರಣಿಗೆ ಬಿಸಿಸಿಐ ಈಗಾಗಲೇ ಟೀಂ ಇಂಡಿಯಾ ಪ್ರಕಟಗೊಳಿಸಿದೆ. ಆದರೆ ಅಂತಿಮ ಕ್ಷಣದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಗಾಯದಿಂದ ಚೇತರಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಇದೀಗ ತಂಡಕ್ಕೆ ವಾಪಸ್ ಆಗಿದ್ದಾರೆ. 

ಮುಂಬೈ(ಜ.03): ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿ ಇಂದಿನಿಂದ ಆರಂಭಗೊಳ್ಳುತ್ತಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಟಿ20 ತಂಡ ಮುಂಬೈನ ವಾಂಖೆಡೆ ಮೈದಾನದಲ್ಲಿ ಹೋರಾಟ ನಡೆಸಲಿದೆ. ಲಂಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಬಿಸಿಸಿಐ ಈಗಾಗಲೇ ತಂಡ ಪ್ರಕಟಿಸಿದೆ. ಆದರೆ ಅಂತಿಮ ಕ್ಷಣದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಸುದೀರ್ಘ ದಿನಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಬುಮ್ರಾಗೆ ಅವಕಾಶ ನೀಡಲಾಗಿದೆ. ಜನವರಿ 10 ರಿಂದ ಆರಂಭಗೊಳ್ಳುತ್ತಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಬುಮ್ರಾಗೆ ಅವಕಾಶ ನೀಡಲಾಗಿದೆ. 

Add Asianetnews Kannada as a Preferred SourcegooglePreferred

ಬೆನ್ನು ನೋವಿನ ಕಾರಣ 2022ರ ಸೆಪ್ಟೆಂಬರ್ ತಿಂಗಳಲ್ಲಿ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದಿಂದ ಹೊರಬಿದ್ದಿದ್ದರು. ಕಳೆದ ಬಾರಿ ಮಾಡಿದ ತಪ್ಪು ಮರುಕಳಿಸದಂತೆ ನೋಡಿಕೊಂಡ ಬಿಸಿಸಿಐ ಡಿಸೆಂಬರ್ ತಿಂಗಳಲ್ಲಿ ಪ್ರಕಟಿಸಿದ ತಂಡದಲ್ಲಿ ಜಸ್ಪ್ರೀತ್ ಬುಮ್ರಾರನ್ನು ಹೊರಗಿಡಲಾಗಿತ್ತು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ವರದಿ ನೋಡಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಆಗಿದ್ದಾರೆ ಅನ್ನೋ ವರದಿಯನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನೀಡಿದೆ. ಇದರ ಬೆನ್ನಲ್ಲೇ ಬಿಸಿಸಿಐ ಲಂಕಾ ವಿರುದ್ದದ ಸರಣಿಗೆ ಬುಮ್ರಾಗೆ ಅವಕಾಶ ನೀಡಿದೆ.

ಟೀಂ ಇಂಡಿಯಾಗೆ ಮತ್ತೊಂದು ಸರ್ಜರಿ, ಕೋಚ್ ರಾಹುಲ್ ದ್ರಾವಿಡ್ ಸ್ಥಾನಕ್ಕೆ ಲಕ್ಷ್ಮಣ್ ನೇಮಕ ಸಾಧ್ಯತೆ!

2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಬುಮ್ರಾಗೆ ಈಗಲೇ ಅವಕಾಶ ಮಾಡಿಕೊಟ್ಟಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಈಗಾಗಲೇ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಹಾಗೂ ಅರ್ಶದೀಪ್ ಸಿಂಗ್‌ಗೆ ಸ್ಥಾನ ನೀಡಿದೆ. ಇದೀಗ ಬುಮ್ರಾ ರನ್ನು ಸೇರ್ಪಡೆಗೊಳಿಸಿದೆ. ಇದರಿಂದ ಟೀಂ ಇಂಡಿಯಾ ಬೌಲಿಂಗ್ ವಿಭಾಗ ಬಲಿಷ್ಠಗೊಂಡಿದೆ.

ಬುಮ್ರಾ ಸೇರ್ಪಡೆ ಬಳಿಕ ಲಂಕಾ ಏಕದಿನ ಸರಣಿಗೆ ಟೀಂ ಇಂಡಿಯಾ;
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ವಾಶಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಶದೀಪ್ ಸಿಂಗ್

ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಪ್ರೈವೇಟ್‌ ವಾರ್ಡ್‌ಗೆ ಶಿಫ್ಟ್‌..!

ಇಂದಿನಿಂದ ಭಾರತಕ್ಕೆ ಲಂಕಾ ಟಿ20 ಚಾಲೆಂಜ್‌
2022ರಲ್ಲಿ ಎಲ್ಲರಿಗಿಂತ ಹೆಚ್ಚು ಅಂದರೆ 40 ಟಿ20 ಪಂದ್ಯಗಳನ್ನಾಡಿದ ಭಾರತ ಬರೋಬ್ಬರಿ 31 ಆಟಗಾರರನ್ನು ಬಳಸಿಕೊಂಡಿತು. 9 ದ್ವಿಪಕ್ಷೀಯ ಸರಣಿಗಳ ಪೈಕಿ 8ರಲ್ಲಿ ಜಯಿಸಿತು. ಆದರೆ ಎರಡು ದೊಡ್ಡ ಟೂರ್ನಿಗಳಾದ ಏಷ್ಯಾಕಪ್‌ ಹಾಗೂ ವಿಶ್ವಕಪ್‌ನ ಫೈನಲ್‌ ಪ್ರವೇಶಿಸಲು ವಿಫಲವಾಯಿತು. ಇದೀಗ 2023 ಅನ್ನು ಹೊಸ ಉತ್ಸಾಹದೊಂದಿಗೆ ಆರಂಭಿಸಲು ಸಜ್ಜಾಗಿರುವ ಟೀಂ ಇಂಡಿಯಾಕ್ಕೆ ಮಂಗಳವಾರದಿಂದ ಹಾಲಿ ಏಷ್ಯಾ ಚಾಂಪಿಯನ್‌ ಶ್ರೀಲಂಕಾ ಸವಾಲು ಎದುರಾಗಲಿದೆ.

‘ಬಿಗ್‌ 3’ ಎಂದು ಕರೆಸಿಕೊಳ್ಳುವ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌ ಸೇರಿ ಇನ್ನೂ ಕೆಲ ಹಿರಿಯ ಆಟಗಾರರಿಲ್ಲದ ತಂಡವನ್ನು ಹಾರ್ದಿಕ್‌ ಪಾಂಡ್ಯ ಮುನ್ನಡೆಸಲಿದ್ದಾರೆ. ಭಾರತದ ಮುಂದಿನ ಟಿ20 ನಾಯಕ ಎಂದು ಗುರುತಿಸಿಕೊಂಡಿರುವ ಹಾರ್ದಿಕ್‌ ಸುತ್ತ 2024ರ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟಲು ಹೊರಟಿರುವ ಬಿಸಿಸಿಐಗೆ ಇದೂ ಸೇರಿ ಮುಂದಿನ ಕೆಲ ಸರಣಿಗಳಲ್ಲಿ ಒಂದಷ್ಟುಚಿತ್ರಣ ಸಿಗಲಿದೆ.