ಕನ್ನಡಿಗ ಕೆಎಲ್‌ ರಾಹುಲ್‌ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಇನ್ನೇನು ಗೆಲುವಿನ ಹಾದಿಯಲ್ಲಿದ್ದ ಲಕ್ನೋ ಸೂಪರ್‌ ಜೈಂಟ್ಸ್‌, ಕೊನೇ ಗಳಿಗೆಯಲ್ಲಿ ಪಂದ್ಯವನ್ನು ಕೈಚೆಲ್ಲಿತು. ಇದಕ್ಕೆ ಕಾರಣವಾಗಿದ್ದು ಕೂಡ ಕೆಎಲ್‌ ರಾಹುಲ್‌. ಇದರ ಬೆನ್ನಲ್ಲಿಯೇ ಕೆಎಲ್‌ ರಾಹುಲ್‌ ವಿರುದ್ಧ ನೆಟ್ಟಿಗರು ಟೀಕೆ ಮಾಡಲು ಆರಂಭಿಸಿದ್ದಾರೆ.  

ಲಕ್ನೋ (ಏ.22): ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಶಿಸ್ತಿನ ನಿರ್ವಹಣೆ ನೀಡಿದ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು 7 ರನ್‌ಗಳಿಂದ ಸೋಲಿಸಿದೆ. ಆಡಿದ ಮೊದಲ ಓವರ್‌ಅನ್ನು ಮೇಡನ್‌ ಮಾಡಿದ್ದ ಕೆಎಲ್‌ ರಾಹುಲ್‌, ಬಳಿಕ 38 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ಗೆಲುವಿನ ವಿಶ್ವಾಸ ನೀಡಿದ್ದರು. ನಾಯಕನ ಜವಾಬ್ದಾರಿಯನ್ನು ನಿಭಾಯಿಸಿ ತಂಡವನ್ನು ಗೆಲುವಿನ ದಡ ಸೇರಿಸಬೇಕಾದ ಹೊಸ್ತಿನಲ್ಲಿ ಎಡವಿದ ಕೆಎಲ್‌ ರಾಹುಲ್‌ ಔಟಾಗಿ ತಂಡವನ್ನು ಸೋಲಿನ ಪಾತಾಳಕ್ಕೆ ದೂಡಿದರು. ಕೊನೇ ಓವರ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಗೆಲುವಿಗೆ 12 ರನ್‌ ಬೇಕಿದ್ದವು. ಆದರೆ, ಕೆಎಲ್‌ ರಾಹುಲ್‌ ಸೇರಿದಂತೆ 4 ವಿಕೆಟ್‌ಗಳನ್ನು ಅಂತಿಮ ಓವರ್‌ನಲ್ಲಿ ಕಳೆದುಕೊಂಡ ಲಕ್ನೋ ಸೂಪರ್‌ ಜೈಂಟ್ಸ್‌ ಕೇವಲ 4 ರನ್‌ ಪೇರಿಸಿ ಸೋಲು ಕಂಡಿತು. 38 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಕೆಎಲ್‌ ರಾಹುಲ್‌, ಔಟಾಗುವ ವೇಳೆ 11.48ರ ಸ್ಟ್ರೈಕ್‌ರೇಟ್‌ನಲ್ಲಿ 61 ಎಸೆತಗಳಲ್ಲಿ 68 ರನ್‌ ಬಾರಿಸಿದ್ದರು. ಇದು ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್‌ವೊಬ್ಬ ಕನಿಷ್ಠ 60 ಎಸೆತಗಳನ್ನು ಎದುರಿಸಿದ್ದಾಗ 3ನೇ ಅತ್ಯಂತ ನಿಧಾನಗತಿಯ ಇನ್ನಿಂಗ್ಸ್‌ ಎನಿಸಿಕೊಂಡಿದೆ. 15ನೇ ಓವರ್‌ವರೆಗೂ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿದ್ದ ಲಕ್ನೋ ಸೂಪರ್‌ ಜೈಂಟ್ಸ್‌, ನಂತರ ಸ್ವತಃ ಕೆಎಲ್‌ ರಾಹುಲ್‌ ಅವರ ನಿಧಾನಗತಿಯ ಆಟಕ್ಕೆ ಸೋಲಿಗೆ ತಲೆಕೊಡಬೇಕಾಯಿತು.

ಶನಿವಾರ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಎಕನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಬಾರಿಸಿದ ಅರ್ಧಶತಕದ ಮೂಲಕ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಸುಲಭ ಗೆಲುವಿನ ಹಾದಿಯಲ್ಲಿತ್ತು. ಆದರೆ, 15ನೇ ಓವರ್‌ ಬಳಿಕ ಆಟದ ವೈಖರಿಯನ್ನೇ ರಾಹುಲ್‌ ಬದಲಿಸಿದ್ದರಿಂದ ತಂಡ 7 ರನ್‌ಗಳ ಆಘಾತಕಾರಿ ಸೋಲು ಕಂಡಿತು. ಇದರ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ತಂಡವನ್ನು ಗೆಲುವಿನ ದಡಕ್ಕೆ ತಂದು ಕೈಬಿಟ್ಟ ರಾಹುಲ್‌ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದರಿಂದಾಗಿ 36ಎಸೆತಗಳಲ್ಲಿ 30 ರನ್‌ ಬೇಕಿದ್ದ ಹಂತದಿಂದ ಲಕ್ನೋ 7 ರನ್‌ಗಳ ಸೋಲು ಕಾಣುವ ಹಂತಕ್ಕೆ ಕುಸಿಯಿತು.

ಲಕ್ನೋ ತಂಡದ ಶಿಸ್ತುಬದ್ಧ ದಾಳಿಯ ಎದುರು 6 ವಿಕೆಟ್‌ಗೆ 135 ರನ್ ಬಾರಿಸಲು ಶಕ್ತವಾಗಿತ್ತು. ನಾಯಕ ಹಾರ್ದಿಕ್‌ ಪಾಂಡ್ಯ, 50 ಎಸೆತಗಳಲ್ಲಿ 4 ಸಿಕ್ಸರ್‌, 2 ಬೌಂಡರಿಗಳೊಂದಿಗೆ ಆಕರ್ಷಕ 66 ರನ್‌ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಇವರಿಗೆ ಉತ್ತಮ ಸಾಥ್‌ ನೀಡಿದ ಆರಂಭಿಕ ಆಟಗಾರ ವೃದ್ಧಿಮಾನ್‌ ಸಾಹ, 37 ಎಸೆತಗಳಲ್ಲಿ 6 ಬೌಂಡರಿಗಳಿದ್ದ 47 ರನ್‌ ಬಾರಿಸಿದ್ದರು. ಆದರೆ, ಈ ಮೊತ್ತವನ್ನು ಚೇಸಿಂಗ್‌ ಮಾಡುವ ನಿಟ್ಟಿನಲ್ಲೂ ಲಕ್ನೋ ತಂಡ ಪರದಾಟ ನಡೆಸಿತು.

15 ಓವರ್‌ ವೇಳೆಗೆ 2 ವಿಕೆಟ್‌ ನಷ್ಟಕ್ಕೆ 105 ರನ್‌ ಬಾರಿಸಿದ್ದ ಕೆಎಲ್‌ ರಾಹುಲ್‌ ಟೀಮ್‌, ಕೊನೆಯ ಐದು ಓವರ್‌ಗಳಲ್ಲಿ ಕ್ರಮವಾಗಿ, 3, 4,6, 5 ಹಾಗೂ 4 ರನ್‌ ಬಾರಿಸುವ ಮೂಲಕ ಸೋಲು ಕಂಡಿತು. ಇದರಿಂದಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 128 ರನ್‌ ಬಾರಿಸಲಷ್ಟೇ ಶಕ್ತವಾಯಿತು.

ಕೆ ಎಲ್ ರಾಹುಲ್‌ ಬಗ್ಗೆ ಎಚ್ಚರಿಕೆಯಿಂದರಿ: RCB ಪಡೆಗೆ ಟೀಂ ಇಂಡಿಯಾ ಮಾಜಿ ಕೋಚ್‌ ರವಿಶಾಸ್ತ್ರಿ 

ಚೇಸಿಂಗ್‌ ವೇಳೆ ಮೊದಲ ಓವರ್‌ನಿಂದ 6ನೇ ಓವರ್‌ವರೆಗೆ 8.83ರ ರನ್‌ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ವಿಕೆಟ್‌ ನಷ್ಟವಿಲ್ಲದೆ 53 ರನ್‌ ಬಾರಿಸಿತ್ತು. 7 ರಿಂದ 14 ಓವರ್‌ಗಳ ವೇಳೆ 6.5ರ ರನ್‌ರೇಟ್‌ನಲ್ಲಿ 1 ವಿಕೆಟ್‌ ನಷ್ಟಕ್ಕೆ 52 ರನ್‌ ಪೇರಿಸಿತ್ತು. ಅದೇ 15 ರಿಂದ 20 ಓವರ್‌ಗಳ ಸಮಯದಲ್ಲಿ 3.83ರ ರನ್‌ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿದ ಲಕ್ನೋ 23 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಸೋಲಿನ ಹಳಿಗೆ ಜಾರಿತು.

ಗೆಳೆಯ ರಾಹುಲ್ ನೇತೃತ್ವದ ಲಖನೌ ಸೇರಲು ಮುಂದಾಗಿದ್ದ ಹಾರ್ದಿಕ್‌ ಪಾಂಡ್ಯ ಗುಜರಾತ್ ನಾಯಕರಾಗಿದ್ದು ಹೇಗೆ..?

ಇದರ ನಡುವೆ ಪಂದ್ಯ ಸೋತ ಬಳಿಕ ಕೆಎಲ್‌ ರಾಹುಲ್‌ ಆಡಿರುವ ಮಾತುಗಳು ಕೂಡ ವೈರಲ್‌ ಆಗಿದೆ. 'ಇದೆಲ್ಲಾ ಹೇಗಾಯ್ತು ಅಂತಾ ನನಗೆ ಗೊತ್ತಾಗುತ್ತಿಲ್ಲ. ಆದರೆ, ಇದೆಲ್ಲವೂ ಸಾಧ್ಯವಾಗಿದೆ. ನಾವು ಎಲ್ಲಿ ತಪ್ಪಿ ಮಾಡಿದೆವು ಅಂತಾ ಕೈಬೆರಳು ತೋರಿಸಿ ಹೇಳುವಷ್ಟೂ ಶಕ್ತವಾಗಿಲ್ಲ' ಎಂದು ಹತಾಶ ಮಾತುಗಳನ್ನು ಆಡಿರುವುದು ಅಭಿಮಾನಿಗಳ ಟೀಕೆಗೆ ಕಾರಣವಾಗಿದೆ.

ಮೂರನೇ ಅತ್ಯಂತ ನಿಧಾನಗತಿಯ ಐಪಿಎಲ್‌ ಇನ್ನಿಂಗ್ಸ್‌: ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್‌ವೊಬ್ಬ ಕನಿಷಷ್ಠ 60 ಎಸೆತಗಳನ್ನು ಎದುರಿಸಿದಾಗ ಆಡಿದ ಮೂರನೇ ಅತ್ಯಂತ ನಿಧಾನಗತಿಯ ಇನ್ನಿಂಗ್ಸ್‌ ಇದಾಗಿದೆ. ಇದಕ್ಕೂ ಮುನ್ನ 2009ರಲ್ಲಿ ಮುಂಬೈ ತಂಡದ ಜೆಪಿ ಡುಮಿನಿ ಪಂಜಾಬ್‌ ವಿರುದ್ಧ 63 ಎಸೆತಗಳಲ್ಲಿ 59 ರನ್‌ ಬಾರಿಸಿದ್ದು ನಿಧಾನಗತಿಯ ಇನ್ನಿಂಗ್ಸ್‌ ಆಗಿದ್ದರೆ, 2014ರಲ್ಲಿ ಸನ್‌ರೈಸರ್ಸ್‌ ತಂಡದ ಆರನ್‌ ಫಿಂಚ್‌ ಮುಂಬೈ ಇಂಡಿಯನ್ಸ್‌ ವಿರುದ್ಧ 62 ಎಸೆತಗಳಲ್ಲಿ 68 ರನ್‌ ಬಾರಿಸಿದ್ದು 2ನೇ ಸ್ಥಾನದಲ್ಲಿದೆ.